ಉಡುಪಿ, ಮಾ.25 (DaijiworldNews/HR): ಉಡುಪಿಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತಿದ್ದು ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಮಾಸ್ಕ್ ಧರಿಸದವರ ವಿರುದ್ದ ಕಟಿಣ ಕ್ರಮ ಕೈಗೊಳ್ಳುತ್ತಿದೆ. ಇಂದು ಉಡುಪಿಯಲ್ಲಿ ಸಂಚಾರ ಪೋಲಿಸರು ಕಾನೂನು ಸುವ್ಯವಸ್ಥೆಯ ಜೊತೆಗೆ ಮಾಸ್ಕ್ ಜಾಗೃತಿ ಮೂಡಿಸಿದರು.
ಟ್ರಾಫಿಕ್ ಎಸ್.ಐ ಅಬ್ದುಲ್ ಖಾದರ್ ನೇತೃತ್ವದಲ್ಲಿ ಉಡುಪಿ ಸಂಚಾರ ಠಾಣಾ ಪೋಲಿಸರು ಉಡುಪಿಯ ಕಲ್ಸಂಕ, ಸರ್ವಿಸ್ ಬಸ್ ನಿಲ್ದಾಣದ ಬಳಿ ಮಾಸ್ಕ್ ಧರಿಸದವರ ವಿರುದ್ದ ದಂಡ ಹಾಕುವುದರ ಜೊತೆಗೆ ಸಾರ್ವಜನಿಕರಿಗೆ ಮಾಸ್ಕ್ ಅನ್ನು ವಿತರಿಸಿ ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದರು.
ಈ ಸಂಧರ್ಭದಲ್ಲಿ ಹಲವಾರು ಮಂದಿ ಮಾಸ್ಕ್ ಇದ್ದರೂ ಕೂಡ ಮಾಸ್ಕ್ ಧರಿಸದೇ ವಾಹನ ಚಲಾಯಿಸುವುದು ಕಂಡು ಬಂದಿತು.
ಬಸ್ಗಳಲ್ಲಿ ಮಾಸ್ಕ್ ಧರಿಸದೇ ಪ್ರಯಾಣ ನಡೆಸಲು ಅವಕಾಶ ನೀಡಿದ ಕಾರಣಕ್ಕಾಗಿ ಬಸ್ ನಿರ್ವಾಹಕನೋರ್ವನಿಗೂ ದಂಡ ವಿದಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಉಡುಪಿ ಸಂಚಾರ ಠಾಣಾ ಎಸ್ ಐ ಅಬ್ದುಲ್ ಖಾದರ್ "ಉಡುಪಿಯಲ್ಲಿ ಕೊರೊನಾ ಪ್ರಕರಣ ಹೆಚ್ಚುತಿದ್ದು ಇತ್ತೀಚಿಗೆ ಜಿಲ್ಲಾಧಿಕಾರಿಗಳು ಕೂಡಾ ನಗರದಲ್ಲಿ ಮಾಸ್ಕ್ ಧರಿಸದವರ ವಿರುದ್ದ ದಂಡ ವಿಧಿಸಿದ್ದರು. ಈಗಾಗಲೆ ಉಡುಪಿಯಲ್ಲಿ 80 ಶೇಕಡಾ ಜನರು ಮಸ್ಕ್ ಧರಿಸುತಿದ್ದಾರೆ. ಮಾಸ್ಕ್ ಧರಿಸದವರಿಗೆ ದಂಡದ ಜೊತೆಗೆ ಅವರಿಗೆ ಮಾಸ್ಕ್ ಅನ್ನು ವಿತರಿಸುವ ಕೆಲಸವನ್ನು ಕೂಡಾ ನಾವು ಮಾಡುತ್ತಿದ್ದೇವೆ" ಎಂದರು.