ಮಂಗಳೂರು, ಮಾ.25 (DaijiworldNews/PY): ಪಾನಮತ್ತಾಗಿ ಕಾರು ಚಲಾಯಿಸಿ ರಿಕ್ಷಾ ಚಾಲಕನ ಸಾವಿಗೆ ಕಾರಣನಾಗಿದ್ದ ಬಿಕರ್ನಕಟ್ಟೆಯ ಅನೀಶ್ ಜಾನ್ ಎಂಬವನಿಗೆ ಮಂಗಳೂರಿನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2017ರ ಆಗಸ್ಟ್ 6ರ ರಾತ್ರಿ 10.45ರ ಸುಮಾರಿಗೆ ಮದ್ಯ ಸೇವಿಸಿ ನಗರದ ಬಂಟ್ಸ್ ಹಾಸ್ಟೆಲ್ ಕಡೆಯಿಂದ ಕಾರು ಚಲಾಯಿಸಿಕೊಂಡು ಹೋಗಿದ್ದ ಅನೀಶ್ ಜಾನ್, ಜ್ಯೋತಿ ಸರ್ಕಲ್ ಸಮೀಪ ರಿಕ್ಷಾ ನಿಲ್ದಾಣದಲ್ಲಿ ನಿಂತಿದ್ದ ಪ್ರವೀಣ್ ಎಂ.ಎ ಹಾಗೂ ಅಶೋಕ್ ಪಾಸ್ಕಲ್ ಡಿಸೋಜಾ ಅವರಿಗೆ ಡಿಕ್ಕಿ ಹೊಡೆದಿದ್ದ. ಡಿಕ್ಕಿ ಹೊಡೆದ ಪರಿಣಾಮ ಪ್ರವೀಣ್ ಅವರು ಸಾವನ್ನಪ್ಪಿದ್ದು, ಉಳಿದ ಇಬ್ಬರಿಗೆ ಗಾಯವಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ. ಬಿ. ಅವರು, "ಮದ್ಯ ಸೇವಿಸಿ ವಾಹನ ಚಲಾಯಿಸಿದ ಕಾರಣ 1 ವರ್ಷ ಸಾದಾ ಸಜೆ ಹಾಗೂ 1,000 ರೂ.ದಂಡ, ಕೊಲೆಯಲ್ಲದ ಮಾನವ ಹತ್ಯೆಗೆ ಮೂರು ವರ್ಷ ಸಾದಾ ಸಜೆ ಹಾಗೂ 1,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿ ಮಾಡಲು ತಪ್ಪಿದ್ದಲ್ಲಿ ಮತ್ತೆ ಒಂದು ತಿಂಗಳು ಸಾದಾ ಜೈಲುವಾಸ ಅನುಭವಿಸಬೇಕು. ಸಂತ್ರಸ್ತರ ಕಡೆಯವರಿಗೆ ಪರಿಹಾರ ನೀಡಲು ಕ್ರಮ ತೆಗೆದುಕೊಳ್ಳಬೇಕು" ಎಂದು ಆದೇಶ ನೀಡಿದ್ದಾರೆ.
ಈ ಹಿಂದಿನ ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ಹಾಗೂ ಪ್ರಸ್ತುತ ಸರಕಾರಿ ಅಭಿಯೋಜಕರಾಗಿರುವ ರಾಜು ಪೂಜಾರಿ ಬನ್ನಾಡಿ ಅವರು ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ್ದಾರೆ.