ಕೊಕ್ಕಡ, ಮಾ 25 (DaijiworldNews/MS): ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಮಸೀದಿ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಲಾ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ, ಶಾಲಾ ಮಕ್ಕಳನ್ನು ಕರೆದೊಯ್ದಿದು ವಿವಾದ ಉಂಟಾಗಿದ್ದು, ದೂರಿನನ್ವಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾರ ಮುಖ್ಯ ಶಿಕ್ಷಕರನ್ನು 10 ದಿನ ರಜೆ ಮೇಲೆ ಕಳುಹಿಸಿ ಈ ಬಗ್ಗೆ ತನಿಖೆ ನಡೆಸಲು ಸಮಗ್ರ ಶಿಕ್ಷಣದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರು ಆದೇಶ ನೀಡಿದ್ದಾರೆ.
ಕೊಕ್ಕಡದಲ್ಲಿ ನವೀಕರಣಗೊಂಡ ಮಸೀದಿಯ ಉದ್ಘಾಟನೆ ಮಾ.19ರಂದು ನಡೆದಿತ್ತು. ಶಾಲಾ ಅವಧಿಯಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಮಸೀದಿ ಉದ್ಘಾಟನೆಗೆ ಕಳುಹಿಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಘಟನೆ ಬಗ್ಗೆ ಕಾರಣ ಕೇಳಿ ಶಾಲಾ ಮುಖ್ಯೋಪಾಧ್ಯಾಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಶೋಕಾಸ್ ನೋಟಿಸಿಗೆ ಮುಖ್ಯೋಪಾಧ್ಯಾಯರು ಉತ್ತರವನ್ನು ನೀಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ವರದಿಯನ್ನು ಡಿ.ಡಿ.ಪಿ.ಐವರಿಗೆ ಸಲ್ಲಿಸಿದ್ದರು. ಇದೀಗ ಶಾಲಾ ಅವಧಿಯಲ್ಲಿ ಶಾಲಾ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕಳುಹಿಸಿರುವ ಬಗ್ಗೆ ಬಂದಿರುವ ದೂರಿನ ಬಗ್ಗೆ ತನಿಖೆ ನಡೆಸಿ, ವರದಿ ನೀಡುವಂತೆ ಡಿಡಿಪಿಐಯವರು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಮಂಜುಳಾ ಕೆ.ಎಲ್ ರವರಿಗೆ ಆದೇಶ ನೀಡಿದ್ದು, ತನಿಖೆಯ ಹಿನ್ನಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ದಿನೇಶ್ ಅವರನ್ನು 10 ದಿನ ರಜೆಯ ಮೇಲೆ ಕಳುಹಿಸಿರುವುದಾಗಿ ತಿಳಿದು ಬಂದಿದೆ. ವಿಚಾರಣಾ ವರದಿ ಬಂದ ನಂತರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು' ಎಂದು ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದ್ದಾರೆ.