ಮಂಗಳೂರು, ಮಾ. 24 (DaijiworldNews/SM): ಜಿಲ್ಲಾಧಿಕಾರಿ ಏಕಾಏಕಿ ಮಾಸ್ಕ್ ಡ್ರೈವ್ ದಾಳಿ ನಡೆಸಿದ್ದು ತಪ್ಪು. ಯಾವುದೇ ಸೂಚನೆ ನೀಡದೇ ಎಲ್ಲಾ ಅಂಗಡಿ ಹಾಗೂ ಮಳಿಗೆಗಳಿಗೆ ದಾಳಿ ನಡೆಸಿ ದಂಡ ವಿಧಿಸಿರುವುದು ಸರಿಯಾದ ಕ್ರಮವಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ಅಂಗಡಿ ಹಾಗೂ ಮಳಿಗೆಗಳಿಗೆ ದಾಳಿ ನಡೆಸಿ ದಂಡವನ್ನು ವಿದಿಸಿದ್ದಾರೆ. ಮಾಸ್ಕ್ ಧರಿಸದ ಕಾರಣಕ್ಕೆ ಯುವಕನನ್ನು ಬಂಧಿಸಿದ್ದಾರೆ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಅಪರಾಧಿಯ ಹಾಗೆ ಕುತ್ತಿಗೆ ಪಟ್ಟಿ ಹಿಡಿದು ಎಳೆದುಕೋಂಡು ಹೋಗಿ ಬಂಧಿಸಿದ್ದಾರೆ. ಅಪರಾಧಿಯ ಹಾಗೆ ಎಳೆದುಕೊಂಡು ಹೋಗಿ ಬಂಧಿಸಿದ್ದು ಸರಿಯಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಸ್ಕ್ ಧರಿಸದಿದ್ದರೆ ಬಂಧಿಸುವ ಅಧಿಕಾರವನ್ನು ಯಾರು ನೀಡಿದವರು ? ಎಂದು ಪ್ರಶ್ನೆ ಮಾಡಿದ್ದಾರೆ.
ಮನಪಾದವರು ದೊಡ್ಡ-ದೊಡ್ಡ ಮಳಿಗೆಗಳಿಗೆ 1 ಸಾವಿರ ದಂಡ ವಿಧಿಸಿದ್ದಾರೆ. ಆದರೆ, ಸಣ್ಣ-ಪುಟ್ಟ ಅಂಗಡಿಗಳಿಗೆ 4-5 ಸಾವಿರ ದಂಡ ಹಾಕಿದ್ದಾರೆ. 1 ವರ್ಷದಿಂದ ಜನ ಸಂಕಷ್ಟದಲ್ಲಿದ್ದು, ಈಗ ಮತ್ತೆ ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ನದಿ ಉತ್ಸವಕ್ಕೆ ಡಿಸಿ ಅನುಮತಿ ನೀಡಿದ್ದರು. ಅಲ್ಲಿ ಸಾವಿರಾರು ಜನ ಸೇರಿದ್ದರು. ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ’ಡಿಜೆ’ಹಾಕಿ ಡ್ಯಾನ್ಸ್ ಮಾಡಿದ್ದರು. ಆಗ ಇಲ್ಲದ ಕೊರೊನಾ ಮರುದಿನ ಏಕಾಏಕಿ ಎಲ್ಲಿಂದ ಬಂತು ? ಜನರ ಮೇಲೆ ಜಿಲ್ಲಾಧಿಕಾರಿಗಳು ತೋರುತ್ತಿರುವ ದರ್ಪ ಸರಿಯಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.