ಉಡುಪಿ, ಮಾ 24 (DaijiworldNews/MS): ತೀರ್ಥಹಳ್ಳಿ - ಮಲ್ಪೆ ರಾಷ್ಟ್ರೀಯ ಹೆದ್ದಾರಿ - 169A ಹೆದ್ದಾರಿಯ ಹೆಬ್ರಿ- ಹಿರಿಯಡ್ಕ ವರೆಗೆ ದ್ವಿಪಥ ರಸ್ತೆ, ಹಿರಿಯಡ್ಕ ದಿಂದ ಪರ್ಕಳ ವರೆಗೆ ಹಾಗೂ ಆದಿ ಉಡುಪಿಯಿಂದ ಮಲ್ಪೆ ವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಸಂಬಂಧಮಾ.೨೩ ರಂದು ಸಂಸದೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಶಾಸಕ ಕೆ. ರಘುಪತಿ ಭಟ್ ಅವರು ಕೇಂದ್ರ ಭೂ ಸಾರಿಗೆ ಮತ್ತು ಹೆದ್ಧಾರಿ ಸಚಿವ ನಿತಿನ್ ಗಡ್ಕರಿ ಯವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರಸ್ತಾವನೆಯಲ್ಲಿ ಆದಿ ಉಡುಪಿಯಿಂದ ಮಲ್ಪೆವರೆಗೆ ರಸ್ತೆ ಅಭಿವೃದ್ಧಿಗೆ ಭೂಸ್ವಾಧೀನ ಪಡಿಸಿಕೊಳ್ಳಲು ತಕ್ಷಣದಲ್ಲಿ ರೂ. 24.08 ಕೋಟಿ ಬಿಡುಗಡೆ ಮಾಡುವುದು ಹಾಗೂ ಹೆಬ್ರಿ - ಹಿರಿಯಡ್ಕ ದ್ವಿಪಥ ರಸ್ತೆ, ಹಿರಿಯಡ್ಕ - ಪರ್ಕಳ ಮತ್ತು ಆದಿಉಡುಪಿ - ಮಲ್ಪೆ ವರೆಗೆ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ರೂ. 288.00 ಕೋಟಿ ಅನುದಾನ ಬಿಡುಗಡೆಗೊಳಿಸಲು ಮನವಿ ಸಲ್ಲಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ಧಾರಿ ಸಚಿವ ನಿತಿನ್ ಗಡ್ಕರಿ ಯವರು ತಕ್ಷಣದಲ್ಲಿ ಯೋಜನೆ ಕಾರ್ಯಗತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ಜಿಲ್ಲೆಯ ಬಹು ಬೇಡಿಕೆಯಾಗಿರುವ ಈ ಪ್ರಮುಖ ರಸ್ತೆಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಮುತುವರ್ಜಿವಹಿಸಿ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿ ರಸ್ತೆಗಳ ಅಭಿವೃದ್ಧಿಯ ಪ್ರಾಮುಖ್ಯತೆಯ ವಸ್ತುಸ್ಥಿತಿಗಳನ್ನು ಮನವರಿಕೆ ಮಾಡಿದ ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣದಲ್ಲಿ ಸೂಕ್ತ ಕ್ರಮಕ್ಕೆ ಆದೇಶಿಸಿದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಶಾಸಕ ರಘುಪತಿ ಭಟ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.