ಉಡುಪಿ, ಮಾ 24 (DaijiworldNews/MS):ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಮಾಅತೆ ಇಸ್ಲಾಮಿ ಹಿಂದ್, ಹೂಡೆ ವತಿಯಿಂದ ಬಡ ದಲಿತ ಕುಟುಂಬಕ್ಕೆ ಮನೆ ಹಸ್ತಾಂತರಿಸಲಾಯಿತು.
ಸೂರಿಲ್ಲದವರಿಗೆ ಸೂರು ಒದಗಿಸುವ ಮಹತ್ವದ ಯೋಜನೆಯಡಿಯಲ್ಲಿ 16 ನೇ ಮನೆಯನ್ನು ಹಸ್ತಾಂತರಿಸಲಾಯಿತು. ತೋನ್ಸೆ ಗ್ರಾಮ ಪಂಚಾಯತ್ ಅತೀ ಅಗತ್ಯವುಳ್ಳ ಸೂರಿಲ್ಲದ ಕುಟುಂಬಗಳನ್ನು ಗುರುತಿಸಿ ಈ ಕಾರ್ಯ ನಡೆಸುತ್ತ ಬಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಜಮಾಅತೆ ಇಸ್ಲಾಮಿ ಹಿಂದ್'ನ ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ ಮಾತನಾಡಿ, ಈ ಕಾರ್ಯವನ್ನು ನಿಸ್ವಾರ್ಥವಾಗಿ ದೇವ ಸಂಪ್ರೀತಿ ಗಳಿಸಲು ಮಾಡುತ್ತ ಬಂದಿದ್ದೇವೆ. ಕುರಾನಿನ ಮಾರ್ಗದರ್ಶನದಂತೆ ಅನಾಥರಿಗೆ, ಬಡವರಿಗೆ ಸಹಾಯ ಮಾಡುವ ಉದ್ದೇಶ ಮಾತ್ರ ನಾವು ಹೊಂದಿದ್ದೇವೆ. ಇಂತಹ ಒಳಿತಿನ ಕಾರ್ಯಗಳು ವ್ಯಾಪಕವಾಗಲಿಯೆಂದು ಹಾರೈಸಿದರು.
ಶ್ಯಾಮರಾಜ್ ಬಿರ್ತಿ ಮಾತನಾಡಿ, ಮನೆಯಿಲ್ಲದೆ ಸಂಕಷ್ಟ ಪಡುತ್ತಿರುವ ಲಕ್ಷಾಂತರ ಮಂದಿ ನಮ್ಮ ದೇಶದಲ್ಲಿದ್ದಾರೆ. ಸೂರಿಲ್ಲದೆ ಕೊಳವೆಗಳಲ್ಲಿ ವಾಸಿಸುವ ಹಲವು ಜನರನ್ನು ಕಾಣಬಹುದಾಗಿದೆ. ಇಂತಹ ಸಂದರ್ಭದಲ್ಲಿ ಜಾತಿ, ಮತದ ಭೇದಯಿಲ್ಲದೆ ಜಮಾಅತೆ ಇಸ್ಲಾಮಿ ಹಿಂದ್'ನ ವತಿಯಿಂದ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆಯೆಂದರು.
ಮಂಜುನಾಥ್ ಬಾಳ್ಕುದ್ರು, ತಾಲೂಕು ಪಂಚಾಯತ್ ಸದಸ್ಯೆ ಸುಲೋಚನ ಸತೀಶ್, ಗ್ರಾ.ಪಂ ಸದಸ್ಯ ವಿಜಯ್ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಲತಾ, ಸದಸ್ಯರಾದ ಸುಝಾನ್ ಡಿಸೋಜಾ, ಮಮ್ತಾಝ್,ಜಮೀಲ, ವತ್ಸಲ,ಡಾ.ಫಹೀಮ್ ಸಂಧ್ಯಾ,ಕುಸುಮ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಮಲ್ಪೆ ಉಪಸ್ಥಿತರಿದ್ದರು.