ಬಂಟ್ವಾಳ, ಮಾ. 23 (DaijiworldNews/SM): ಇಲ್ಲಿನ ಬ್ರಹ್ಮರಕೊಟ್ಲು ಟೋಲ್ ಗೇಟ್ ನ ಸರ್ವೀಸ್ ರಸ್ತೆಯಲ್ಲಿ ಕಬ್ಬಿಣದ ಬೇಲಿ ನಿರ್ಮಿಸಿ ಸಣ್ಣ ಸರಕು ಸಾಗಣೆ ವಾಹನಗಳನ್ನು ನಿರ್ಬಂಧಿಸಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಸರ್ವೀಸ್ ರಸ್ತೆಯ ಮಧ್ಯ ಭಾಗದಲ್ಲಿ ಆರು ಅಡಿಗಿಂತ ಎತ್ತರದ ವಾಹನಗಳು ಸಂಚರಿಸದಂತೆ ಕಬ್ಬಿಣದ ಬೇಲಿಯೊಂದನ್ನು ನಿರ್ಮಿಸಲಾಗಿದೆ. ಮಂಗಳವಾರ ಬೆಳಗ್ಗೆಯಿಂದ ಈ ರಸ್ತೆಯಲ್ಲಿ ಪಿಕ್ ಅಪ್ ವಾಹನ ಸಹಿತ ಸಣ್ಣ ಸರಕು ಸಾಗಣೆಗಳ ವಾಹನಗಳಿಗೆ ಸಂಚರಿಸಲು ಸಾಧ್ಯವಾಗಿಲ್ಲ. ಬೆಳಗ್ಗೆ ಸ್ಥಳೀಯ ವಾಹನಗಳ ಚಾಲಕರು ಸ್ಥಳದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಟೋಲ್ ಗೇಟ್ ನ ಉಸ್ತುವಾರಿಗಳ ಮಧ್ಯ ಮಾತಿನ ಚಕಮಕಿ ನಡೆಯಿತು. ಜಿಲ್ಲಾಧಿಕಾರಿಯ ಆದೇಶದಂತೆ ನಾವು ಬೇಲಿ ನಿರ್ಮಿಸಿದ್ದೇವೆ ಎಂದು ಟೋಲ್ ಉಸ್ತುವಾರಿಗಳು ಸಮಜಾಯಿಷಿ ನೀಡಿದರು. ಮೊದಲೇ ನಿಧಾನಗತಿಯ ಟೋಲ್ ಸಂಗ್ರಹ, ಟೋಲ್ ಪ್ಲಾಝಾದಲ್ಲಿ ಇರಬೇಕಾರ ಸಮರ್ಪಕ ವ್ಯವಸ್ಥೆಯ ಕೊರತೆ ಮೊದಲಾದ ಸಮಸ್ಯೆಗಳಿಂದ ಒಂದಿಲ್ಲೊಂದು ವಿವಾದದಲ್ಲಿ ಕುಖ್ಯಾತಿ ಪಡೆದಿರುವ ಈ ಟೋಲ್ ಗೇಟ್ ನಲ್ಲಿ ಮತ್ತೊಂದು ಹೊಸ ವಿವಾದ ಶುರುವಾಗಿದೆ.
"ಲಕ್ಷಾಂತರ ರೂಪಾಯಿಯ ಕಾರಿನವರು ಈ ರಸ್ತೆಯಲ್ಲಿ ಟೋಲ್ ಪಾವತಿಸದೇ ಹೋಗುತ್ತಿದ್ದಾರೆ. ಪಿಕಪ್ ನಲ್ಲಿ ಕಟ್ಟಿಗೆ ಮೊದಲಾದ ಸರಕು ಸಾಗಣೆ ಮಾಡಿ ಬದುಕುವ ನಮ್ಮಂತ ಸ್ಥಳೀಯರನ್ನು ಲೂಟಿ ಮಾಡುತ್ತಿದ್ದಾರೆ. ಸಿಗುವ 300 ರೂ. ಬಾಡಿಗೆಯಲ್ಲಿ 120 ರೂ. ಟೋಲ್ ಕಟ್ಟಿದರೆ ನಮಗೆ ಉಳಿಯುವುದು ಏನು?" ಎಂದು ಸ್ಥಳೀಯ ಪಿಕಪ್ ಚಾಲಕರೊಬ್ಬರು ತನ್ನ ಅಳಲು ತೋಡಿಕೊಂಡಿದ್ದಾರೆ.
"ಟೋಲ್ ತಪ್ಪಿಸಿ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚರಿಸುವುದಾದರೆ ಅದಕ್ಕೆ ವೈಜ್ಞಾನಿಕ ರೀತಿಯಲ್ಲಿ ಟೋಲ್ ಸಂಗ್ರಹಕ್ಕೆ ವ್ಯವಸ್ಥೆ ಮಾಡಬೇಕು. ಇಡೀ ರಸ್ತೆಯಲ್ಲಿ ಆರು ಅಡಿಗಿಂತ ಎತ್ತರದ ವಾಹನಗಳ ಸಂಚಾರವನ್ನೇ ನಿರ್ಬಂಧಿಸುವುದು ಎಂದರೆ ಏನು ಅರ್ಥ? ನಾಳೆ ಏನಾದರೂ ಅವಘಡ ಸಂಭವಿಸಿದರೆ ತುರ್ತು ವಾಹನಗಳು ಸಂಚರಿಸುವುದು ಹೇಗೆ?" ಸ್ಥಳೀಯ ಇನ್ನೋರ್ವ ವ್ಯಕ್ತಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಸ್ಪಷ್ಟನೆ:
ನಿಯಮದ ಪ್ರಕಾರ ಟೋಲ್ ತಪ್ಪಿಸಿ ಪರ್ಯಾಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹಿಸಲು ಅವಕಾಶವಿದೆ. ಆದರೆ ಅದಕ್ಕೂ ನಿಯಮಗಳಿವೆ. ಯಾವುದೇ ಅಧಿಕಾರಿಗಳಿಗೆ ಮಾಹಿತಿ ನೀಡದೆ ಬ್ರಹ್ಮರಕೊಟ್ಲು ಸರ್ವೀಸ್ ರಸ್ತೆಯಲ್ಲಿ ಬೇಲಿ ನಿರ್ಮಾಣದ ಬಗ್ಗೆ ಮಾಹಿತಿ ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ಅವೈಜ್ಞಾನಿಕವಾಗಿದ್ದರೆ ಬೇಲಿ ತೆರವುಗೊಳಿಸಿ ವೈಜ್ಞಾನಿಕವಾಗಿ ಟೋಲ್ ಸಂಗ್ರಹಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟನೆ ನೀಡಿದ್ದಾರೆ.