ಉಡುಪಿ, ಮಾ. 23 (DaijiworldNews/SM): ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ವತಃ ಫೀಲ್ಡಿಗಿಳಿದು ಕಾರ್ಯಾಚರಣೆ ನಡೆಸಿದ್ದಾರೆ. ಹಾಗೂ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿದ್ದಾರೆ.
ಉಡುಪಿ ನಗರ ಭಾಗದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ಹಾಕಿದ್ದಾರೆ. ಉಡುಪಿ ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ, ಮಣಿಪಾಲ ಭಾಗದಲ್ಲಿ ಜಿಲ್ಲಾಧಿಕಾರಿ ರೌಂಡ್ಸ್ ಕೈಗೊಂಡಿದ್ದರು. ಈ ವೇಳೆ ಮಾಸ್ಕ್ ಹಾಕದ ಅಂಗಡಿ ಮುಂಗಟ್ಟು ಮಾಲಿಕರಿಗೆ ದಂಡ ವಿಧಿಸಿದರು. ಬಸ್ ಚಾಲಕ, ಪ್ರಯಾಣಿಕರಿಗೂ ದಂಡ ವಿಧಿಸಿದರು. 4 ಅಂಗಡಿಗಳಿಗೆ ತಲಾ 5 ಸಾವಿರ ದಂಡ ವಿಧಿಸಲಾಯಿತು. ಮಾಸ್ಕ್, ಸ್ಯಾನಿಟೈಜರ್ ಕಡ್ಡಾಯದ ಬಗ್ಗೆ ತಿಳುವಳಿಕೆ ಮೂಡಿಸಿದರು.
ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅನುಮತಿ ಇಲ್ಲದೇ ಸಮಾರಂಭ ನಡೆಸುವಂತಿಲ್ಲ. ತಹಶೀಲ್ದಾರ್ ಅನುಮತಿ ನೀಡುವಾಗ ಸಮಾರಂಭದಲ್ಲಿ ಸರಕಾರಿ ಅಧಿಕಾರಿ ಹಾಜರಾತಿ ಕಡ್ಡಾಯವಾಗಿದೆ. ಸಮಾರಂಭದಲ್ಲಿ ಕೊರೊನಾ ನಿಯಮಾವಳಿ ಪಾಲಿಸದಿದ್ದಲ್ಲಿ ಸರಕಾರಿ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಕೂಡಾ ಎರಡನೇ ಅಲೆಯನ್ನು ತಡೆಯಲು ಸರಕರಿಸಬೇಕು. ಮುಂದಿನ ದಿನಗಳಲ್ಲಿ ದಂಡದ ಜೊತೆ ಕ್ರಿಮಿನಲ್ ಮೊಕದಮ್ಮೆ ದಾಖಲಿಸಲಾಗುವುದು. ಸಾರ್ವಜನಿಕರು ಎಚ್ಚೆತ್ತುಕೊಂಡಲ್ಲಿ ಕೊರೊನಾ ತಡೆಗಟ್ಟಲು ಸಾಧ್ಯವಿದೆ. ಹೀಗಾಗಿ ಸದ್ಯಕ್ಕೆ ಲಾಕ್ ಡೌನ್ ಅಗತ್ಯ ಇಲ್ಲ ಎಂದರು.