ಉಡುಪಿ, ಮಾ.23 (DaijiworldNews/MB) : ''ಕೇಂದ್ರ ಸರಕಾರ ಪೆಟ್ರೋಲ್, ಡಿಸೇಲ್ ದರ ಏರಿಕೆ ಮಾಡಿದ್ದನ್ನು ದೇಶದ ಒಳಿತಿಗಾಗಿ ಮಾಡಿದ್ದು ಎನ್ನುವ ದೇಶ ಭಕ್ತರಿಗಾಗಿ ಪ್ರತ್ಯೇಕ ಕೌಂಟರ್ ತೆರೆದು 200 ರೂ ದರದಲ್ಲಿ ಪೆಟ್ರೋಲ್ ಮೇಲೆ ಇಟ್ಟು ಮಾರಾಟ ಬೇಕು. ನಿಜವಾದ ದೇಶಭಕ್ತರೇ ಆಗಿದ್ದರೇ ಅವರು ಖರೀದಿಸಲಿ'' ಎಂದು ಮಾಜಿ ಸಚಿವರಾದ ಸೊರಕೆ ಸವಾಲು ಹಾಕಿದರು.
ಕಾಪುವಿನ ಜನಧ್ವನಿ ಪ್ರತಿಭಟನಾ ರ್ಯಾಲಿಗೆ ಸಂಬಂಧಿಸಿದಂತೆ ಉಡುಪಿ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, ''ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 25 ರಂದು ಪೆರ್ಡೂರಿನಿಂದ 80 ಬಡಗಬೆಟ್ಟುವರೆಗೆ ಪಾದಯಾತ್ರೆ ಮೂಲಕ ಜನಧ್ವನಿ ಪ್ರತಿಭಟನಾ ರ್ಯಾಲಿಯನ್ನು ನಡೆಸಲಿದೆ. ರ್ಯಾಲಿ ಬೆಳಿಗ್ಗೆ 9.30 ಕ್ಕೆ ಹರಿಯಡ್ಕ-ಪರ್ಕಳ--80 ಬಡಗುಬೆಟ್ಟು ಮೂಲಕ 16 ಕಿಲೋಮೀಟರ್ ದೂರವನ್ನು ಕ್ರಮಿಸಿ ಸಂಜೆ 5 ಗಂಟೆಗೆ ಬಡಗುಬೆಟ್ಟು ಪಂಚಾಯತ್ ಕಚೇರಿ ಮುಂದೆ ಮುಕ್ತಾಯಗೊಳ್ಳಲಿದೆ'' ಎಂದು ತಿಳಿಸಿದರು.
ಈ ಸಂದರ್ಭದಲ್ಲೇ ಪ್ರಧಾನಿ ವಾಗ್ದಾಳಿ ನಡೆಸಿದ ಅವರು, ''ರೈತರು 110 ದಿನ ನಿರಂತರ ಪ್ರತಿಭಟನೆ ಮಾಡಿದರೂ ಸರಿಯಾಗಿ ಪ್ರತಿಭಟನೆ ನೀಡದ ದೇಶದ ಪ್ರಧಾನಿ ಅದ್ಯಾವುದೋ ಚಲನಚಿತ್ರ ಕಲಾವಿದೆಯ ಸಹೋದರ ಕಾಲು ಮುರಿದುಕೊಂಡಿದ್ದಕ್ಕೆ ಟ್ವೀಟ್ ಮಾಡುತ್ತಾರೆ'' ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಬಿರುಕುಂಟಾಗಿದೆ ಎನ್ನುವ ಉಡುಪಿ ಬಿಜೆಪಿ ಜಿಲ್ಲಾದ್ಯಕ್ಷರ ಆರೋಫಕ್ಕೆ ಉತ್ತರಿಸಿದ ಅವರು, ''ಕಾಂಗ್ರೆಸ್ನಲ್ಲಿ ಎಲ್ಲರೂ ಒಗ್ಗಾಟಾಗಿದ್ದೇವೆ. ಆದರೆ ಅವರಲ್ಲಿ ಲಾಲಾಜಿ ಮೆಂಡನ್, ಯಶ್ಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ ಮತ್ತು ಕುಯ್ಲಾಡಿ ಸುರೇಶ ನಾಯಕ್, ಮಟ್ಟಾರ್ ರತ್ನಾಕರ್ ಹೆಗ್ಡೆ ಎನ್ನುವ ಹಲವಾರು ಬಣಗಳಿವೆ. ಒಬ್ಬರನ್ನೊಬ್ಬರು ಸರಿಯಾಗಿ ನೋಡಿ ಮಾತನಾಡುವುದಿಲ್ಲ'' ಎಂದು ಬಿಜೆಪಿ ಅಧ್ಯಕ್ಷರನ್ನು ಕುಟುಕಿದರು.
''ಬ್ರಹ್ಮಾವರ ಸಕ್ಕರೆ ಮೇಲೆ ಆರೂಢ ಪ್ರಶ್ನಾವಳಿ ಇಡಲು ಚಿಂತನೆ ನಡೆಸುತ್ತಿರುವ ಬಗ್ಗೆ ಆಕ್ಷೇಪಿಸಿ, ಹಿಂದೆ ಆಸ್ಕರ್ ಫೆರ್ನಾಂಡೀಸ್ ಅವರು ಮನೆಮನೆಗೂ ಹೋಗಿ ಬೆಲ್ಲ ಮಾಡುತ್ತೇವೆ, ಕಬ್ಬು ತನ್ನಿ ಎನ್ನುತ್ತಿದ್ದರು. ಈಗ ಸಕ್ಕರೆ ಕಾರ್ಖಾನೆಯಲ್ಲಿ ಆಲೆಮನೆ ಮಾಡಿ ಅಲ್ಲೇ ಬೆಲ್ಲ ಮಾಡುತ್ತಿದ್ದಾರೆ. ಇದನ್ನು ಮಾಡಲು ಸಮಿತಿ ಪದಾಧಿಕಾರಿಗಳ ಅಗತ್ಯವಿದೆಯಾ? ಯಾಕೆ ಬೇಕು ಇದೆಲ್ಲಾ?'' ಎಂದು ಪ್ರಶ್ನಿಸಿದರು.
''ಈಗ ಆರೂಢ ಪ್ರಶ್ನೆ ಇಡಲಿ, ಮುಂದೆ ಸಕ್ಕರೆ ಕಾರ್ಖಾನೆಗೆ ಬ್ರಹ್ಮಕಲಶವೂ ನಡೆಯಬಹುದು'' ಎಂದು ಸೊರಕೆ ವ್ಯಂಗ್ಯವಾಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯದರ್ಶಿ ಹರೀಶ್ ಕಿಣಿ, ನಾಗೇಶ್ ಉದ್ಯಾವರ, ಕಾಪು ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ಮತ್ತು ಇತರರು ಉಪಸ್ಥಿತರಿದ್ದರು.