ಮಂಗಳೂರು, ಮಾ.22 (DaijiworldNews/MB) : ಇಬ್ಬರು ಯುವಕರು ಹಾಗೂ ಬೇರೆ ಧರ್ಮಕ್ಕೆ ಸೇರಿದ ಓರ್ವ ಯುವತಿ ಬಸ್ನಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು ಎಂಬ ಕಾರಣಕ್ಕೆ ಭಜರಂಗದಳದ ಕಾರ್ಯಕರ್ತರು ಬಸ್ನ್ನು ತಡೆದಿದ್ದಾರೆ. ಹಿಂದೂ ಸಂಘಟನೆಯ ಈ ಕ್ರಮವು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಬುಧವಾರ ಈ ಘಟನೆಯು ಬುಧವಾರ ನಡೆದಿದೆ. ರಾತ್ರಿಯಲ್ಲಿ, ಮೂವರು ಬೆಂಗಳೂರಿಗೆ ಹೋಗಲು ಬಸ್ ಹತ್ತಿದ್ದರು. ಈ ವಿಷಯ ತಿಳಿದ ಭಜರಂಗದಳದ ಕಾರ್ಯಕರ್ತರು ಬಂಟ್ವಾಳದ ಬಸ್ ನಿಲ್ದಾಣದ ಬಳಿ ಬಸ್ ತಡೆದಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿ ಹಾಗೂ ಇಬ್ಬರು ಯುವಕರನ್ನು ಬಂಟ್ವಾಳ ಪೊಲೀಸ್ ಠಾಣಗೆ ಕರೆದೊಯ್ದಿದ್ದರು.
''ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಂದಾಪುರದ ಇಬ್ಬರು ಯುವಕರು ಹಾಗೂ ಕೇರಳದ ಯುವತಿಯು ಬೆಂಗಳೂರಿಗೆ ತೆರಳುತ್ತಿದ್ದರು. ಈ ಸಂದರ್ಭ ಭಜರಂಗದಳದ ಕಾರ್ಯಕರ್ತರು ಬಸ್ ತಡೆದಿದ್ದು ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೂವರನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಬೆಂಗಳೂರಿಗೆ ತಲುಪುವಂತೆ ನೋಡಿಕೊಂಡರು'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಂ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ''ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ'' ಎಂದೂ ತಿಳಿಸಿದ್ದಾರೆ.
''ಈ ಮೂವರ ಮೇಲೆ ಭಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿದ್ದರೆ ನಾವು ಸುಮೋಟೋ ಪ್ರಕರಣ ದಾಖಲಿಸಬಹುದಿತ್ತು. ಆದರೆ ಯಾವುದೇ ಹಲ್ಲೆ ನಡೆದಿಲ್ಲ'' ಎಂದು ಅವರು ಸ್ಪಷ್ಟಪಡಿಸಿದರು.
ಭಜರಂಗದಳ ಕಾರ್ಯಕರ್ತರ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ಭಜರಂಗದಳ ಕಾರ್ಯಕರ್ತರನ್ನು ಟೀಕಿಸಿದ್ದಾರೆ.