ಉಡುಪಿ, ಮಾ.22 (DaijiworldNews/MB) : ''ಹಿಂದೆ ಮರಳಿನ ಸಮಸ್ಯೆ ಇತ್ತು. ಈಗ ಶಿಲೆಕಲ್ಲು, ಜಲ್ಲಿ ಕಲ್ಲುಗಳ ಸಮಸ್ಯೆ ಉಂಟಾಗಿದೆ. ಶಿವಮೊಗ್ಗ ಮತ್ತು ಚಿಕ್ಕಬಳ್ಳಾಾಪುರ ಜಿಲ್ಲೆಯಲ್ಲಿ ನಡೆದ ಜಲೆಟಿನ್ ಸ್ಫೋಟವಾದ ಹಿನ್ನೆಲೆಯಲ್ಲಿ ಗಣಿಗಾರಿಕೆ ಸುರಕ್ಷ ಮಹಾನಿರ್ದೇಶನಾಲಯದ (ಡಿಜಿಎಂಎಸ್) ಸೂಚನೆಯಂತೆ ಮಾ. 11ರಿಂದ ಜಲ್ಲಿಕಲ್ಲು, ಶಿಲೆಕಲ್ಲುಗಳ ಉತ್ಪಾದನೆ ಮತ್ತು ಸಾಗಾಟವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ದೊಡ್ಡ ದೊಡ್ಡ ಮಟ್ಟದ ಗಣಿಗಾರಿಕೆಯ ಮಾದರಿಯಲ್ಲಿ ಚಿಕ್ಕಪುಟ್ಟ ಜಲ್ಲಿಕಲ್ಲು ಕ್ರಶರ್, ಕೋರೆಗಳಿಗೂ ಅನ್ವಯಿಸಿ ಕಾನೂನು ರೂಪಿಸಿದ್ದಾರೆ. ಕರಾವಳಿಯಲ್ಲಿ ದೊಡ್ಡ ಮಟ್ಟದ ಗಣಿಗಾರಿಕೆ ನಡೆಯುವುದಿಲ್ಲ'' ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘದ ಜಿಲ್ಲಾಾ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಮತ್ತು ಕಾಪು, ಕಟಪಾಡಿ ವಲಯದ ಅಧ್ಯಕ್ಷ ಚಂದ್ರ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
''ದೊಡ್ಡ ಗಣಿಗಾರಿಕೆಯವರು 10-20 ಎಕ್ರೆಯಲ್ಲಿ ಗಣಿಗಾರಿಕೆ ನಡೆಸಿದರೆ, ಕರಾವಳಿಯಲ್ಲಿ ಒಂದೆರಡು ಎಕ್ರೆೆಯಲ್ಲಿ ಜಲ್ಲಿಕಲ್ಲು ತಯಾರಿಸುತ್ತಾಾರೆ. ಇವೆರಡಕ್ಕೂ ಒಂದೇ ಕಾನೂನು ರೂಪಿಸುವುದು ಎಷ್ಟು ಸರಿ? ಹಿಂದೆ ಮರಳಿನ ಸಮಸ್ಯೆೆಯಿಂದ ಕಟ್ಟಡ ನಿರ್ಮಾಣಗಳು ಸ್ಥಗಿತಗೊಂಡಿದ್ದವು. ಈಗ ಜಲ್ಲಿಕಲ್ಲು, ಶಿಲೆಕಲ್ಲಿನ ಕೊರತೆಯಿಂದ ಕಟ್ಟಡ ಕಾಮಗಾರಿ ನಿಂತಿವೆ. ಸಾಮಾನ್ಯರ ಮನೆಗಳೂ (ಬಸವ ವಸತಿ ಯೋಜನೆ ಇತ್ಯಾದಿ) ನಿಂತಿವೆ. ಈಗ ಆರ್ಥಿಕ ವರ್ಷಾಂತ್ಯ. ಈಗ ಹೀಗಾದರೆ ಮುಂದೆ ಹೇಗೆ''ಎಂದರು.
''ಲಕ್ಷಾಂತರ ರೂ. ವೇತನ ಪಡೆಯುವ ಅಧಿಕಾರಿಗಳು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ಆದೇಶ ಹೊರಡಿಸುತ್ತಾರೆ. ಇವರಿಗೆ ಸ್ಥಳೀಯ ಸಮಸ್ಯೆಗಳ ಅರಿವು ಇರುವುದಿಲ್ಲ. ಮರಳು ಕುರಿತಂತೆ ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ನೀತಿ ಹೊರಡಿಸುವಂತೆ ಜಲ್ಲಿಕಲ್ಲು, ಶಿಲೆಕಲ್ಲಿಗೂ ಪ್ರತ್ಯೇಕ ನೀತಿ ಅಳವಡಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ'' ಎಂದು ಎಚ್ಚರಿಸಿದರು.
''ಜಿಲ್ಲೆಯಲ್ಲಿ 70 ಕ್ರಶರ್, 100 ಕೋರೆಗಳಿವೆ. ಇವರೂ ಸಮಸ್ಯೆಯನ್ನು ಇದಿರಿಸುತ್ತಾರೆ. ಇವರ ಹೋರಾಟಕ್ಕೂ ನಮ್ಮ ಬೆಂಬಲವಿದೆ. ಇತ್ತೀಚಿಗೆ ಶಾಸಕ ರಘುಪತಿ ಭಟ್ ಅವರು ಕ್ರಶರ್ ಮಾಲಕರನ್ನು ಸಚಿವ ಮುರುಗೇಶ್ ನಿರಾಣಿಯವರೊಂದಿಗೆ ಭೇಟಿ ಮಾಡಿಸಿದ್ದರು. ಸಚಿವರು ಒಪ್ಪಿದರೂ ಅಧಿಕಾರಿಗಳು ಆದೇಶ ಹೊರಡಿಸುತ್ತಿಲ್ಲ'' ಎಂದರು.
''15 ವರ್ಷಗಳ ಹಳತಾದ ವಾಹನಗಳನ್ನು ನಿಷ್ಕ್ರಿಯಗೊಳಿಸುವ ಗುಜರಿ ಯೋಜನೆಗೂ ನಮ್ಮ ವಿರೋಧವಿದೆ. ಶೇ.5 ಸಬ್ಸಿಡಿ ಕೊಟ್ಟು 30 ಲ.ರೂ. ಬೆಲೆಯ ಹೊಸ ವಾಹನ ಖರೀದಿಸಿದರೆ ನಾವು ಸಾಲ ಹಿಂದಿರುಗಿಸುವುದು ಹೇಗೆ? ಈಗಲೇ 3 ಲ.ರೂ. ಸಾಲವನ್ನು ಕಟ್ಟಲು ಆಗುತ್ತಿಲ್ಲ. ನಮಗೆ ಬ್ಯಾಂಕ್ನವರು ಸಾಲ ನೀಡುವುದಿಲ್ಲ. ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯುತ್ತಿದ್ದೇವೆ. 25 ವರ್ಷಗಳ ಹಳತಾದ ವಾಹನಗಳನ್ನು ನಿಷ್ಕ್ರಿಯಗೊಳಿಸಲಿ. ಇಂತಹ ವಾಹನಗಳು ನಗರ ಪ್ರವೇಶಿಸದಂತೆ ಕಾನೂನು ರೂಪಿಸಲಿ. ಇಲ್ಲವಾದರೆ ಕರಾವಳಿಯ ಶೇ.80 ವಾಹನಗಳ ಜತೆಗೆ ನಾವೂ ಗುಜರಿಗೆ ಹೋಗಬೇಕಾಗುತ್ತದೆ'' ಎಂದು ಕಳವಳ ವ್ಯಕ್ತಪಡಿಸಿದರು.
ಸಂಘದ ಪದಾಧಿಕಾರಿಗಳಾದ ಹರೀಶ ಕೋಟ್ಯಾನ್, ಉಮೇಶ ಶೆಟ್ಟಿ, ವಿಜಯಕುಮಾರ್, ಪ್ರವೀಣಕುಮಾರ್, ರಮೇಶ ಶೆಟ್ಟಿ, ಗುರುಮೂರ್ತಿ, ಜಯಾನಂದ ಕೋಟ್ಯಾನ್ ಉಪಸ್ಥಿತರಿದ್ದರು.