ಉಡುಪಿ, ಮಾ 19 (DaijiworldNews/MS): ಕಳೆದ ಕೆಲವು ದಿನಗಳಿಂದ ಉಡುಪಿಯಲ್ಲಿ ನಡೆಯುತ್ತಿರುವ ಸೇನಾ ನೇಮಕಾತಿ ರ್ಯಾಲಿಗೆ ಆಗಮಿಸಿರುವ ಅಭ್ಯರ್ಥಿಗಳು ಜಿಲ್ಲೆಯ ಸಾರ್ವಜನಿಕ ರಸ್ತೆ ಗಳಲ್ಲಿ ರಾತ್ರಿ ಹೊತ್ತು ಮಲಗುತ್ತಿರುವುದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.
ಕಳೆದ ಕೆಲವು ದಿನಗಳಿಂದ ಉಡುಪಿಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುತಿದ್ದು ಮಾರ್ಚ್ 29 ರವರೆಗೆ ಇದು ನಡೆಯಲಿದೆ. ಈ ರ್ಯಾಲಿಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಅಭ್ಯರ್ಥಿಗಳು ಆಗಮಿಸುತಿದ್ದು ಉಡುಪಿಯಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ಕಷ್ಟ ಅನುಭವಿಸುತಿದ್ದಾರೆ. ಬೆಳಗ್ಗೆ 4 ಗಂಟೆಗೆ ರ್ಯಾಲಿ ಆರಂಭವಾಗುತ್ತದೆ. ವಿವಿಧ ರೀತಿಯ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಗಳು ಅಭ್ಯರ್ಥಿಗಳಿಗೆ ನಡೆಯುತ್ತಿವೆ. ಉಡುಪಿಯ ಅದಮಾರು ಮಠದಿಂದ ಅಭ್ಯರ್ಥಿಗಳಿಗೆ ಉಚಿತ ಊಟೋಪಚಾರವನ್ನು ಕೂಡಾ ಒದಗಿಸಲಾಗುತ್ತಿದೆ.
ಆದರೆ ರಾತ್ರಿ ಸಮಯದಲ್ಲಿ ಈ ಅಭ್ಯರ್ಥಿಗಳಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಗಳು ಇಲ್ಲದೇ ರಸ್ತೆಯ ಫುಟ್ ಪಾತ್ ಗಳಲ್ಲಿ ಮಲಗುವ ದೃಶ್ಯ ಕಂಡು ಬಂದಿದೆ. ಇದೇ ಕುರಿತು ಸಾರ್ವಜನಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಮಾಡಿದ್ದು ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಕುರಿತು ಸ್ವಷ್ಟನೆ ನೀಡಿರುವ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು " ಇದು ಆರ್ಮಿ ಯವರು ಸಂಘಟಿಸಿದ ಸೇನಾ ಆಯ್ಕೆ ಕ್ಯಾಂಪ್. ಇದಕ್ಕೆ ಜಿಲ್ಲಾಡಳಿತ ಸಹಕಾರ ನೀಡಿದೆ ಸುಮಾರು 6 ಕಡೆ ಉಳಿಯುವ ವ್ಯವಸ್ಥೆ ಮಾಡಿದೆ. ಯಾವುದೇ ಜಿಲ್ಲೆಯಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಮಾಡಿಲ್ಲ ನಾವು ಅದನ್ನು ಮಾಡಿದ್ದೇವೆ. ಆದರೆ ಕೆಲವರು ಮದ್ಯ ರಾತ್ರಿ ಬಂದು ಎಲ್ಲೆಂದರೆ ಅಲ್ಲಿ ಮಲಗಿ ಬೆಳಗ್ಗೆ 4 ಗಂಟೆಗೆ ಕ್ರೀಡಾಂಗಣಕ್ಕೆ ಹೋಗುತಿದ್ದಾರೆ ಜಿಲ್ಲಾಡಳಿತ ಊಟ ತಿಂಡಿ ಕುಡಿಯುವ ನೀರು ಮತ್ತು ಉಳಿಯುವ ವ್ಯವಸ್ಥೆ ಸರ್ಕಾರದ ಒಂದು ರೂಪಾಯಿ ಖರ್ಚಿಲ್ಲದೆ ದಾನಿಗಳ ಸಹಕಾರದಿಂದ ಮಾಡಿದೆ ಸುಮ್ಮನೆ ಕೆಲವರು ಅಪಪ್ರಚಾರ ಮಾಡುತಿದ್ದಾರೆ ಇದು ಸರಿ ಅಲ್ಲ"ಎಂದು ಸ್ಪಷ್ಟನೆ ನೀಡಿದ್ದಾರೆ.
ಉಡುಪಿ ಜಿಲ್ಲಾಡಳಿತ ನಗರದಲ್ಲಿರುವ ಶಾಲೆ, ದೇವಸ್ಥಾನದ ಸಭಾಭವನಗಳಲ್ಲಿ ಅಭ್ಯರ್ಥಿಗಳಿಗೆ ವಸತಿಗೆ ವ್ಯವಸ್ಥೆ ಗಳನ್ನು ಮಾಡಿದೆ. ಅದರೆ ಕೆಲವೊಂದು ಅಭ್ಯರ್ಥಿಗಳು ಬೆಳಗ್ಗೆ ಬೇಗನೆ ರ್ಯಾಲಿಗೆ ಅಗಮಿಸಬೇಕಾದ ಕಾರಣ ಈ ಕೆಂದ್ರಗ ಳಲ್ಲಿ ವಸತಿ ವ್ಯವಸ್ಥೆ ಉಪಯೋಗಿಸಲು ಹಿಂದೇಟು ಹಾಕುತಿದ್ದಾರೆ.ಇದೀಗ ಉಡುಪಿ ಸುತ್ತಮುತ್ತಲಿನ ಹಲವಾರು ಸಮಾಜ ಸೇವಾ ಸಂಘ ಸಂಸ್ಥೆಗಳು ವಸತಿ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದಿದ್ದು ಅಭ್ಯರ್ಥಿಗಳು ಮನಸ್ಸು ಮಾಡಬೇಕಿದೆ.