ಮಂಗಳೂರು, ಮಾ. 18 (DaijiworldNews/SM): ಇವರಿಗೆ ಠಾಣೆಯೇ ಮನೆ, ಪೊಲೀಸರೇ ಬಂಧು ಬಳಗ! ಬರೋಬ್ಬರಿ 40 ವರ್ಷಗಳಿಂದ ಠಾಣೆಯಲ್ಲೇ ವಾಸ. ಬಾಯಿ ಬಾರದ, ಕಿವಿ ಕೇಳದ ಇವರ ಆಧಾರ್ ಕಾರ್ಡ್, ಮತದಾರರ ಚೀಟಿ, ಬ್ಯಾಂಕ್ ಪಾಸ್ ಬುಕ್ ಗಳಲ್ಲಿ ಠಾಣೆಯದ್ದೇ ವಿಳಾಸ. ನಾಲ್ಕು ದಶಕಗಳಿಂದ ಪೊಲೀಸ್ ಠಾಣೆಯನ್ನೇ ಮನೆಯಾಗಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಇವರ ಹೆಸರು ಹೊನ್ನಮ್ಮ. ವಿಶೇಷವೆಂದರೆ, ಪೊಲೀಸರೇ ಇವರಿಗೆ ಈ ನಾಮಕರಣ ಮಾಡಿದ್ದಾರೆ.
20ರ ಯುವತಿ ರೈಲ್ವೇ ನಿಲ್ದಾಣದಲ್ಲಿ ಅನಾಥೆಯಾಗಿ ಪತ್ತೆ!
20 ವರ್ಷಗಳ ಯುವತಿಯಾಗಿದ್ದ ಇವರು ಸುಮಾರು 40 ವರ್ಷಗಳ ಹಿಂದೆ ರೈಲ್ವೆ ನಿಲ್ದಾಣದಲ್ಲಿ ಅನಾಥೆಯಾಗಿ ಪತ್ತೆಯಾಗಿದ್ದರು. ಅಂದಿನ ಪೊಲೀಸ್ ಅಧಿಕಾರಿಯೊಬ್ಬರು ಯಾರೂ ಇಲ್ಲದೆ ಬೀದಿಪಾಲಾಗಿದ್ದ ಇವರಿಗೆ ಠಾಣೆಯಲ್ಲಿಯೇ ಆಶ್ರಯ ನೀಡಿದ್ದರು. ಪೊಲೀಸರೇ ಹೊನ್ನಮ್ಮ ಎಂದು ನಾಮಕರಣ ಮಾಡಿದ್ದರು. ಆರಂಭದಲ್ಲಿ ಕುಟುಂಬಸ್ಥರ ಪತ್ತೆಗೆ ಪೊಲೀಸರು ಪ್ರಯತ್ನಪಟ್ಟಿದ್ದರು. ಆದರೆ, ಯಾವುದೇ ಪ್ರಯೋಜನವಾಗದೇ ಇದ್ದ ಸಂದರ್ಭದಲ್ಲಿ ಠಾಣೆಯಲ್ಲಿಯೇ ಅವರಿಗೆ ಜಾಗ ನೀಡಿದ್ದರು. ಬಳಿಕ ಸಣ್ಣಪುಟ್ಟ ಕೆಲಸ ಮಾಡಿಕೊಂಡು 40 ವರ್ಷಗಳಿಂದ ನಗರದ ಬಂದರು ಪೊಲೀಸ್ ಠಾಣೆಯನ್ನೇ ಆಶ್ರಯ, ಆಸರೆ ಮಾಡಿಕೊಂಡಿದ್ದಾರೆ ಹೊನ್ನಮ್ಮ ಅವರು.
ಠಾಣೆಯನ್ನು ಗುಡಿಸಿ, ಒರೆಸಿ, ಒಪ್ಪ ಓರಣಗೊಳಿಸುವ ಕಾರ್ಯವಲ್ಲದೆ, ಪೊಲೀಸರಿಗೆ ಏನಾದರೂ ಸಣ್ಣಪುಟ್ಟ ಕಾರ್ಯದಲ್ಲಿ ನೆರವಾಗುತ್ತಿದ್ದಾರೆ. ಇದಕ್ಕೆ ಅವರಿಗೆ ಸಂಬಳವನ್ನೂ ನೀಡಲಾಗುತ್ತದೆ. ಮಾನವೀಯತೆ ನೆಲೆಯಲ್ಲಿ ಈಕೆಗೆ ಬಂದರು ಪೊಲೀಸ್ ಠಾಣೆಯ ಹೊರಗಡೆಯೇ ಆಶ್ರಯಕ್ಕಾಗಿ ಒಂದು ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಲಾಗಿದೆ. ಈಕೆಯ ಊಟ, ವಸತಿ, ಆಶ್ರಯ ಎಲ್ಲವೂ ಅಲ್ಲಿಯೇ ಆಗುತ್ತದೆ.
ಹೊನ್ಮಮ್ಮನ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮತದಾರರ ಚೀಟಿಗಳಲ್ಲಿಯೂ ಬಂದರು ಪೊಲೀಸ್ ಠಾಣೆಯ ವಿಳಾಸವನ್ನೇ ದಾಖಲಿಸಲಾಗಿದೆ. ಠಾಣೆಯ ಪೊಲೀಸರೇ ಈಕೆಯ ಬಂಧುವಾಗಳಾಗಿದ್ದಾರೆ. ಠಾಣೆಯ ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಯ ಮನೆಯಲ್ಲಿ ಯಾವುದೇ ಸಮಾರಂಭವಿದ್ದರೂ ಹೊನ್ನಮ್ಮನಿಗೆ ಹೇಳಿಕೆಯಂತು ಇದ್ದೇ ಇರುತ್ತದೆ. ಯಾರೂ ಆಕೆಯನ್ನು ಬಿಟ್ಟು ಹೋಗುವುದಿಲ್ಲ. ಒಂದು ವೇಳೆ ಬಿಟ್ಟು ಹೋದರೂ ಅವರು ತಮ್ಮದೇ ಮೂಕ ಭಾಷೆಯಲ್ಲಿ ಪ್ರಶ್ನಿಸುತ್ತಾರಂತೆ. ಇದೀಗ ಪೊಲೀಸರು ಈಕೆಗೆ ವೃದ್ಧಾಪ್ಯ ವೇತನ ಸೇರಿದಂತೆ ಹಿರಿಯ ನಾಗರಿಕರಿಗೆ ಸಿಗುವ ಸೌಲಭ್ಯ ದೊರಕಿಸುವಲ್ಲಿ ಪ್ರಯತ್ನಿಸುತ್ತಿದ್ದಾರಂತೆ.
ಒಟ್ಟಿನಲ್ಲಿ ಬಂದರು ಠಾಣೆಯ ಅಂದಿನ ಡಿವೈಎಸ್ಪಿ ಜಯಂತ ಶೆಟ್ಟಿಯವರ ಮಾನವೀಯ ಕಾರ್ಯ ನಿಜಕ್ಕೂ ಶ್ಲಾಘನೀಯ. ರೈಲ್ವೇ ನಿಲ್ದಾಣದಲ್ಲಿ ತನ್ನವರಿಗಾಗಿ ಕಣ್ಣಂಚಿನಲ್ಲಿ ಕಂಬನಿ ಸುರಿಸಿ ಅಂಗಲಾಚುತ್ತಿದ್ದ ಮೂಖ ಯುವತಿಗೆ ಠಾಣೆಯನ್ನೇ ತವರು ಮನೆಯಾಗಿಸಿದ ಜೀವನಕ್ಕೊಂದು ಅರ್ಥ ನೀಡಿರುವುದು ಪೊಲೀಸ್ ಇಲಾಖೆಯವರಲ್ಲೂ ಮಾನವೀಯ ಹೃದಯಗಳಿವೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತಿದೆ. ಯುವತಿಯೊಬ್ಬಳಿಗೆ ಆಶ್ರಯವಿತ್ತು, ನಾಲ್ಕು ದಶಕಗಳಿಂದ ಸೇವೆ ನೀಡುತ್ತಿರುವ ಬಂದರ್ ಠಾಣಾ ಪೊಲೀಸರ್ ಕಾರ್ಯಕ್ಕೆ ನಮ್ಮದೊಂದು ಸಲಾಂ.