ಉಡುಪಿ, ಮಾ18 (DaijiworldNews/MS): ಜಿಲ್ಲೆಯಲ್ಲಿ ಯಾಂತ್ರೀಕೃತ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪತ್ರ ಪಡೆಯಲು ಮೀನುಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿ, ಈವರೆಗೆ ಸಾಧ್ಯತಾ ಪ್ರಮಾಣ ಪತ್ರ ಪಡೆಯದ ಅರ್ಜಿದಾರರಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಲಾಗಿದೆ.
2016 ನವೆಂಬರ್ 21 ರ ಒಳಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ನಿಯಮಾನುಸಾರ ಸಂಬಂಧಿತ ವಿಧಾನಸಭಾ ಕ್ಷೇತ್ರದ ಶಾಸಕರ ಶಿಫಾರಸ್ಸು ಪತ್ರ ಹಾಗೂ 10,000 ರೂ. ಗಳ ನಗದು ಡಿ.ಡಿ ಯೊಂದಿಗೆ ಸಂಬಂಧ ಪಟ್ಟ ಇಲಾಖಾ ಕಛೇರಿಯನ್ನು ಸಂಪರ್ಕಿಸಬೇಕು.
ಮಾರ್ಚ್ 31 ರ ಒಳಗೆ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಜಿಲ್ಲಾ ಮಟ್ಟದ ಸಾಧ್ಯತಾ ಪತ್ರ ಸಮಿತಿ ಸಭೆ ಕರೆದು ಸಾಧ್ಯತಾ ಪತ್ರ ನೀಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಉಡುಪಿ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೋಣಿ ನಿರ್ಮಾಣದ ಸಾಧ್ಯತಾ ಪತ್ರದ ಅವಧಿ ವಿಸ್ತರಣೆ:
ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪತ್ರ ಪಡೆದು 2 ವರ್ಷದೊಳಗೆ ದೋಣಿ ನಿರ್ಮಿಸದೆ ಪುನಃ ಕಾಲಾವಕಾಶ ಕೋರಿ ಅರ್ಜಿಗಳು ಸ್ವೀಕೃತವಾಗಿದ್ದ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.ಈ ಆದೇಶದನ್ವಯ ದೋಣಿ ನಿರ್ಮಾಣದ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಇಚ್ಛಿಸುವ ಅರ್ಜಿದಾರರು ಅರ್ಜಿಯನ್ನು, ಸಂಪೂರ್ಣ ದಾಖಲಾತಿಗಳೊಂದಿಗೆ ಸಂಬಂಧಿಸಿದ ಮೀನುಗಾರಿಕೆ ಇಲಾಖಾ ಕಛೇರಿಗೆ ಸಲ್ಲಿಸಬೇಕು. ಈ ಹಿಂದೆ ಅವಧಿ ವಿಸ್ತರಣೆಗೆ ದಾಖಲಾತಿಗಳನ್ನು ಸಲ್ಲಿಸಿದ ಅರ್ಜಿದಾರರೂ ಸಹ ಸಂಪೂರ್ಣವಾದ ದಾಖಲಾತಿಗಳನ್ನು ಪ್ರಸ್ತುತ ಸ್ಥಿತಿಗನುಸಾರವಾಗಿ ಪುನಃ ಸಲ್ಲಿಸುವಂತೆ ಉಡುಪಿ ಮೀನುಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.