ಉಳ್ಳಾಲ, ಮಾ.13 (DaijiworldNews/HR): ಶಾಸಕ ಯು.ಟಿ.ಖಾದರ್ ಪ್ರೇಕ್ಷಾಳ ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವಾನ ಹೇಳಿ "ಘಟನೆಯ ಕುರಿತು ಸೂಕ್ತ ತನಿಖೆಯಾಗಬೇಕು ಮತ್ತು ಇಲ್ಲಿನ ಗಾಂಜಾ ವಿಚಾರದಲ್ಲಿ ಸ್ಥಳೀಯರು ದೂರು ನೀಡಲು ಹಿಂಜರಿಯುತ್ತಿದ್ದು, ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಕಾಲನಿ ನಿವಾಸಿಗಳ ಜೊತೆ ಸಂವಾದ ನಡೆಸಿ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು ಈ ನಿಟ್ಟಿನಲ್ಲಿ ಕಮಿಷನರ್ ಅವರೊಂದಿಗೆ ಮಾತನಾಡಿದ್ದೇನೆ" ಎಂದು ಹೇಳಿದ್ದಾರೆ.
ಪ್ರೇಕ್ಷಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಗೆಳೆಯ ಮುಂಡೋಳಿ ನಿವಾಸಿ ಯತೀನ್ ರಾಜ್ ವಿರುದ್ಧ ಆತ್ಮಹತ್ಯೆಗೆ ಪ್ರಚೋದಿಸಿದ ಹಿನ್ನೆಲೆಯಲ್ಲಿ ಸೆಕ್ಷನ್ 306ರ ಅಡಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಗಾಂಜಾ ಗ್ಯಾಂಗ್ ವಿರುದ್ಧ ಪೊಲೀಸರ ಕಾರ್ಯಾಚರಣೆ ಮುಂದುವರಿದಿದ್ದು ಶನಿವಾರವೂ ಹಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮಾ.10 ರಂದು ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ(17) ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಕರಣ ನಿಗೂಢತೆ ಸೃಷ್ಟಿಸಿದ್ದು, ಗೆಳೆಯ ಗಾಂಜಾ ವ್ಯಸನಿ ನೇತೃತ್ವದ ತಂಡದಿಂದಲೇ ಕೊಲೆ ನಡೆದಿದೆ ಅನ್ನುವ ಆರೋಪ ಸ್ಥಳೀಯರಿಂದ ವ್ಯಕ್ತವಾಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರೇಕ್ಷಾಳ ಗೆಳೆಯ ಯತೀನ್ ರಾಜ್ ಸೇರಿದಂತೆ ನೆರೆಮನೆಯ ಇತರೆ ಇಬ್ಬರು ಯುವಕರನ್ನು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ನಡೆಸಿದ ಪೊಲೀಸರು ಪ್ರೇಕ್ಷಾ ಳ ಮೊಬೈಲಿನಲ್ಲಿ ಸಿಕ್ಕಿರುವ ಸಾಕ್ಷ್ಯಗಳ ಆಧಾರದಲ್ಲಿ ಯತೀನ್ ರಾಜ್ ವಿರುದ್ಧ ಆತ್ಮಹತ್ಯೆ ಪ್ರಚೋದನೆ ನೀಡಿರುವ ಕುರಿತು ಪ್ರಕರಣ ದಾಖಲಿಸಿದ್ದಾರೆ.
ಕುಂಪಲ ಆಶ್ರಯ ಕಾಲನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರಲ್ಲಿ ಗಾಗೃಇ ಮೂಡಿಸುವ ನಿಟ್ಟಿನಲ್ಲಿ ಆಶ್ರಯ ಕಾಲನಿಯಿಂದ ಕುಂಪಲ ಶಾಲೆಯವರೆಗೆ ಮಾ. 14ರಂದು ಬೆಳಗ್ಗೆ 7 ಗಂಟೆಗೆ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.