ಮಂಗಳೂರು, ಮಾ.10 (DaijiworldNews/MB) : ''ನಾವು ಗೋ ರಕ್ಷಣೆಗೆ ಬದ್ಧರಾಗಿದ್ದೇವೆ, ಬಜೆಟ್ನಲ್ಲಿಯೂ ಸಹ ಪ್ರತಿ ಜಿಲ್ಲೆಯಲ್ಲಿ ಗೋಶಾಲೆಯನ್ನು ನಿರ್ಮಿಸುವ ಬಗ್ಗೆ ಉಲ್ಲೇಖಿಸಲಾಗಿದೆ'' ಎಂದು ಕಪಿಲಾ ಗೋಶಾಲೆ ತೆರವಿನ ವಿಚಾರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಹೇಳಿದರು.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ಗೋಶಾಲೆಯನ್ನು ಸ್ಥಾಪಿಸಲು ಹಲವಾರು ಮಾನದಂಡಗಳನ್ನು ಅನುಸರಿಸಬೇಕಾಗಿದೆ. ಕಪಿಲಾ ಗೋಶಾಲೆ ಸರ್ಕಾರಿ ಭೂಮಿಯಲ್ಲಿರುವ ಕಾರಣ ಅದನ್ನು ಕೆಡವಲಾಯಿತು. ದನಗಳನ್ನು ಅವರಿಗೆ ಬೇರೆ ಸ್ಥಳಗಳಲ್ಲಿ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ನಾವು ದನಗಳ ಕಾಳಜಿ ವಹಿಸಲು ಸಿದ್ಧರಿದ್ದೇವೆ'' ಎಂದು ಹೇಳಿದರು.
''ಖಾಸಗಿ ಭೂಮಿಯಲ್ಲಿ ಗೋಶಾಲೆಯಿದೆ ಎಂದು ಕಪಿಲಾ ಗೋಶಾಲ ಮಾಲೀಕರು ಹೇಳಿದ್ದಾರೆ. ಅವರದ್ದು ಕೇವಲ ನಾಲ್ಕು ಸೆಂಟ್ಸ್ ಭೂಮಿಯಾಗಿದೆ. ಉಳಿದ ಭೂಮಿ ಕರಾವಳಿ ಕಾವಲು ಪಡೆಗೆ ಸೇರಿದ್ದು. ಗೋಶಾಲೆಯು ಖಾಸಗಿ ಭೂಮಿಯಲ್ಲಿದೆ ಎಂದು ಭಾವಿಸಿ ಮಾಜಿ ಮೇಯರ್ ಮತ್ತು ಶಾಸಕರು ಸಹ ಗೋಶಾಲೆಗೆ ಧನಸಹಾಯ ನೀಡಿದರು. ಆದರೆ ಇದು ಸರ್ಕಾರಿ ಭೂಮಿಯಲ್ಲಿರುವುದರಿಂದ ಖಾಲಿ ಮಾಡುವಂತೆ ಜಿಲ್ಲಾಡಳಿತ ನೋಟಿಸ್ ನೀಡಿದೆ. ಆದರೆ ಮಾಲೀಕರು ಖಾಲಿ ಮಾಡಿಲ್ಲ. ತೆರವು ಕಾರ್ಯದ ಸಂದರ್ಭವೂ ಈ ಗೋಶಾಲೆಯನ್ನು ಬೇರೆಡೆ ವರ್ಗಾಯಿಸುವುದಾಗಿ ಅದರ ಮಾಲೀಕರು ಹೇಳಿಕೊಂಡಿದ್ದರು. ಆದರೆ ಅವರು ಈಗ ಬೇರೆಯೇ ಹೇಳಿಕೆ ನೀಡುತ್ತಿದ್ದಾರೆ'' ಎಂದು ಆರೋಪಿಸಿದರು.
''ಗೋಶಾಲೆ ಕೆಡವಿದ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸಂಸರು, ಶಾಸಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಬರುತ್ತಿರುವುದನ್ನು ನಾವು ನೋಡಿದ್ದೇವೆ. ಗೋಶಾಲೆ ಹೆಸರಿನಲ್ಲಿ ಅವರು ನಮ್ಮ ಸಂಘಟನೆಯನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಅವರೊಂದಿಗಿನ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಹಿಂದೆ ಪಿತೂರಿ ಇದೆ'' ಎಂದು ಸುದರ್ಶನ್ ಮೂಡುಬಿದಿರೆ ಹೇಳಿದರು.
''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಜನ ಸ್ನೇಹಿ ಬಜೆಟ್ ಮಂಡಿಸಿದರು. ಪ್ರತಿ ವಲಯಕ್ಕೂ ಸಮಾನ ಪ್ರಾಮುಖ್ಯತೆ ನೀಡಿದರು'' ಎಂದು ಕೂಡಾ ಸುದರ್ಶನ್ ಹೇಳಿದರು.
ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಮತ್ತು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಸ್ತೂರಿ ಪಂಜ ಉಪಸ್ಥಿತರಿದ್ದರು.