ಬ್ರಹ್ಮಾವರ, ಮಾ. 09 (DaijiworldNews/SM): ಮೀನು ಸಾಗಾಟ ನಡೆಸುತ್ತಿದ್ದ ಲಾರಿಯೊಂದು ರಸ್ತೆಯಲ್ಲಿ ಉರುಳಿಬಿದ್ದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಹೀರೂರ್ ಬಳಿ ಮಾರ್ಚ್ 9 ರ ಮಂಗಳವಾರ ನಡೆದಿದೆ.
ವೇಗವಾಗಿ ಚಲಿಸುತ್ತಿದ್ದ ವೇಳೆ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ. ನಂತರ ಲಾರಿ ಪಲ್ಟಿಯಾಗಿ ರಸ್ತೆಯ ಬದಿಯಲ್ಲಿ ಬಿದ್ದಿದೆ ಎಂದು ಹೇಳಲಾಗಿದೆ. ಲಾರಿ ಕಾರವಾರದಿಂದ ಮಂಗಳೂರಿನ ಉಳ್ಳಾಲ ಕಡೆಗೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಚಾಲಕನಿಗೆ ಗಾಯಗಳಾಗಿವೆ. ಸ್ಥಳೀಯರು ಆತನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ರಸ್ತೆಯಲ್ಲಿ ಉರುಳಿಬಿದ್ದ ಲಾರಿಯಲ್ಲಿದ್ದ ಮೀನನ್ನು ಪಡೆದುಕೊಳ್ಳಲು ಜನರು ಮುಗಿಬಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬ್ರಹ್ಮಾವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ನೆರವಾದರು.