ಪುತ್ತೂರು, ಮಾ 09 (DaijiworldNews/MS): ಬಸ್ಸಿನಲ್ಲಿ ವೈದ್ಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯೋರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಟ್ಟಂಪಾಡಿಯ ನೌಫಲ್ ಎಂದು ಗುರುತಿಸಲಾಗಿದೆ.
ಮಾ.8ರಂದು ಸಂಜೆ ಸವಣೂರು ಮೂಲಕ ಕಡಬಕ್ಕೆ ಸಂಚರಿಸುತ್ತಿದ್ದ ಬಸ್ ಏರಿದ್ದ ಆತ ಗಡಿಪಿಲದ ಬಳಿ ಬರುತ್ತಿದ್ದಂತೆ ಬಸ್ಸಲ್ಲಿ ಪ್ರಯಾಣಿಸುತ್ತಿದ್ದ ಖಾಸಗಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿಯೋರ್ವರ ಜೊತೆ ಅಸಭ್ಯವಾಗಿ ವರ್ತಿಸಿದ್ದ.
ಈ ವಿಷಯ ತಿಳಿದು ಸಂಘಟನೆಯೊಂದರ ಕಾರ್ಯಕರ್ತರು ಬಸ್ ಗಡಿಪಿಲ ತಲುಪುತ್ತಿದ್ದಂತೆ ಬಸ್ ಅನ್ನು ನಿಲ್ಲಿಸಿ ಆರೋಪಿಯನ್ನು ವಿಚಾರಿಸಿ ಬಳಿಕ ಸ್ಥಳಕ್ಕೆ ಆಗಮಿಸಿದ ಪುತ್ತೂರು ಪೊಲೀಸರಿಗೆ ಒಪ್ಪಿಸಿದರು. ಆರೋಪಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ.ಯುವತಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.