Karavali
ಕುಂದಾಪುರ ಪುರಸಭೆ -ಆಸ್ತಿ ತೆರಿಗೆ ಏರಿಕೆ ವಿರೋಧಿಸಿ ವಿಪಕ್ಷ ಸದಸ್ಯರು ಸಭಾತ್ಯಾಗ
- Fri, Mar 05 2021 03:24:00 PM
-
ಕುಂದಾಪುರ, ಮಾ 05 (DaijiworldNews/MS): ಪುರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಏರಿಕೆ ವಿರೋಧಿಸಿ ವಿಪಕ್ಷ ಸದಸ್ಯರ ಸಭಾತ್ಯಾಗ, ಒಳಚರಂಡಿ ಕಾಮಗಾರಿ ವಿಳಂಬಕ್ಕೆ ಆಕ್ರೋಶ, ಜಲಸಿರಿಯಲ್ಲಿ ಅತೃಪ್ತಿಕರ ಕಾಮಗಾರಿ, ಪುರಸಭೆ ವ್ಯಾಪ್ತಿಗೆ ರಸ್ತೆಗೆ ದಿ|ವಿನ್ನಿ ಫ್ರೆಡ್ ಫೆರ್ನಾಂಡೀಸ್ ನಾಮಕರಣದ ಬಗ್ಗೆ ಗಂಭೀರ ಚರ್ಚೆ ಕುಂದಾಪುರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಮಾ.4ರಂದು ಪುರಸಭೆಯ ಡಾ|ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಸಿರಿ ಯೋಜನೆಯಡಿ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ಕಾಮಗಾರಿಯ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತವಾಯಿತು.
ಜಲಸಿರಿ ಯೋಜನೆಯಲ್ಲಿ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಅಧಿಕಾರಿಗಳು 92% ಕೆಲಸ ಆಗಿದೆ ಎನ್ನುತ್ತಿದ್ದರೂ ಕೂಡಾ ಅಗೆದ ರಸ್ತೆಯನ್ನು ಮುಚ್ಚಿಲ್ಲ, ತೆಗೆದ ಇಂಟರ್ ಲಾಕ್ ಸರಿಪಡಿಸಿಲ್ಲ, ಅರ್ಜಿ ಸಲ್ಲಿಸಿದವರಿಗೆ ನೀರಿನ ಸಂಪರ್ಕ ಸಿಕ್ಕಿಲ್ಲ ಎಂದು ಸದಸ್ಯರಾದ ಮೋಹನದಾಸ ಶೆಣೈ, ಪ್ರಭಾಕರ, ಅಶ್ವಿನಿ ಪ್ರದೀಪ್, ಸಂತೋಷಕುಮಾರ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಅಶ್ಫಕ್ ಆಕ್ರೋಶ ವ್ಯಕ್ತ ಪಡಿಸಿದರು. 5ಲಕ್ಷ ಲೀಟರ್ ಸಾಮಾಥ್ರ್ಯದ ಟ್ಯಾಂಕ್ ಸೋರಿಕೆಯಾದರೆ ಮುಂದಿನ ದಿನ ಸಮಸ್ಯೆಯಾಗುತ್ತದೆ. ಇದಕ್ಕೆ ಪರಿಹಾರವೇನು ಎಂದು ಮೋಹನದಾಸ ಶೆಣೈ ಖಾರವಾಗಿ ಪ್ರಶ್ನಿಸಿದರು. ಸದಸ್ಯ ಪ್ರಭಾಕರ ಮಾತನಾಡಿ ಕುಡಿಯುವ ನೀರಿನ ವಿಚಾರದಲ್ಲಿ ಸುಳ್ಳು ಹೇಳಬೇಡಿ, ಎಷ್ಟು ದಿನ ಜನ ಉಪ್ಪು ನೀರು ಕುಡಿಯಬೇಕು, ಬೇಗ ಕಾಮಗಾರಿ ಸಮರ್ಪಕವಾಗಿ ಮುಗಿಸಿ ಎಂದರು. ರಾಘವೇಂದ್ರ ಖಾರ್ವಿ ಮಾತನಾಡಿ ಮದ್ದುಗುಡ್ಡೆ ಭಾಗದಲ್ಲಿ ಜಲಸಿರಿಯ ಕಾಮಗಾರಿಯನ್ನು ಗಮನಕ್ಕೆ ತಂದರು. ಗಿರೀಶ ಮಾತನಾಡಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಕಾಮಗಾರಿ ನಡೆಸಿ ಎಂದರು. ಅಶ್ಪಕ್ ಕೋಡಿ ಭಾಗದಲ್ಲಿ ಜಲಸಿರಿಯ ಸಮಸ್ಯೆಗಳ ಬಗ್ಗೆ ಗಮನ ಸಳೆದರು.
ಈ ಬಗ್ಗೆ ಅಧಿಕಾರಿಗಳು ನೀಡಿದ ಉತ್ತರಕ್ಕೆ ಸದಸ್ಯರು ತೃಪ್ತರಾಗಲಿಲ್ಲ. ಮುಖ್ಯಾಧಿಕಾರಿ ಕೆ.ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಈ ಕಾಮಗಾರಿ ಮಾ.31ರೊಳಗೆ ಮುಕ್ತಾಯವಾಗುವ ಲಕ್ಷಣ ಇಲ್ಲ, ಸರ್ಕಾರದ ಹಣ ಪೋಲಾಗಬಾರದು, ಆದ್ದರಿಂದ ಎಂಜಿನಿಯರ್ ವಿರುದ್ಧ ಮೇಲಾಧಿಕಾರಿಗಳಿಗೆ ಬರೆಯಲಾಗುವುದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಬರೆಯಲಾಗುವುದು ಎಂದರು.
ಆಸ್ತಿ ತೆರಿಗೆ ಏರಿಕೆಗೆ ವಿರೋಧ
2005-06ರ ಆಸ್ತಿ ತೆರಿಗೆ ಪ್ರಗತಿಯಲ್ಲಿದ್ದು 2018ರ ಆಸ್ತಿ ತೆರಿಗೆಯ ಬಗ್ಗೆ ಪ್ರಸ್ತಾವನೆ ಇಡದೇ ಪುರಸಭೆ ವ್ಯಾಪ್ತಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿರುವುದನ್ನು ಖಂಡಿಸಿದ ಕಾಂಗ್ರೆಸ್ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದರು. ತೆರಿಗೆ ಹೆಚ್ಚಳದ ಸಂದರ್ಭದಲ್ಲಿ ಸದಸ್ಯರ ಗಮನಕ್ಕೆ ತರಬೇಕಿತ್ತು. ಅಲ್ಲದೇ ಕರೋನಾ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಮೇಲೆ ಮತ್ತೆ ಹೊರೆ ಹಾಕುತ್ತಿದ್ದಿರಿ. ಮೊದಲೇ ಆರ್ಥಿಕ ಮುಗ್ಗಟ್ಟಿನಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಈ ನಡುವೆ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ ಎಂದು ತೀವ್ರವಾಗಿ ಖಂಡಿಸಿದ ಚಂದ್ರಶೇಖರ್ ಖಾರ್ವಿ ಸಹಿತ ವಿಪಕ್ಷ ಸದಸ್ಯರು ಸರ್ಕಾರಗಳಿಗೆ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು.ವಿನ್ನಿಫ್ರೆಡ್ ಹೆಸರಿಡಲು ಆಗ್ರಹ
ಪುರಸಭೆಯ ಮುಖ್ಯರಸ್ತೆಗೆ ಮಾಜಿ ಶಾಸಕಿ, ಪುರಸಭೆ ಮಾಜಿ ಅಧ್ಯಕ್ಷೆ ದಿ|ವಿನ್ನಿಫ್ರಡ್ ಫೆರ್ನಾಂಡೀಸ್ ಹೆಸರಿಡುವಂತೆ ಮನವಿ ಸಲ್ಲಿಸಿದ್ದು, ಪುರಸಭೆಗೆ ವಿನ್ನಿ ಪ್ರೇಡ್ ಸಾಧನೆ, ಕೊಡುಗೆ ಪರಿಗಣಿಸಿ ಅವರ ಹೆಸರನ್ನು ಇಡಬೇಕು ಎಂದು ಚಂದ್ರಶೇಖರ್ ಖಾರ್ವಿ ಆಗ್ರಹಿಸಿದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಈಗಾಗಲೇ ಮುಖ್ಯರಸ್ತೆಗೆ ಮಾಜಿ ಶಾಸಕಿ ದಿ|ವಿನ್ನಿಫ್ರಡ್ ಫೆರ್ನಾಂಡೀಸ್, ಡಾ|ಬಿ.ಆರ್.ಅಂಬೇಡ್ಕರ್, ಕೋ.ಲ ಕಾರಂತ ನಾಮಕರಣಕ್ಕೆ ಬೇಡಿಕೆಗಳು ಬಂದಿದ್ದು, ಒಮ್ಮತದ ಅಭಿಪ್ರಾಯ ಬಾರದ ಕಾರಣ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಪ್ರಭಾಕರ ಮಾತನಾಡಿ ಡಾ|ಬಿ.ಆರ್ ಅಂಬೇಡ್ಕರ್ ಅವರ ಹೆಸರನ್ನು ಪುರಸಭೆ ಮುಖ್ಯರಸ್ತೆಗೆ ಇಡಬೇಕು ಎಂದು ಆಗ್ರಹಿಸಿದರು.ಒಳಚರಂಡಿ ಕಾಮಗಾರಿ ಅವಾಂತರ
ಒಳಚರಂಡಿ ಕಾಮಗಾರಿ ಅವಾಂತರದ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಇನ್ನೂ ಮಳೆಗಾಲ ಬರುತ್ತದೆ. ಸಮಸ್ಯೆ ಮುಂದುವರಿಯುತ್ತದೆ. ತ್ಯಾಜ್ಯ ಘಟಕಕ್ಕೆ ಜಾಗ ಗುರುತಿಸಿ, ಕಂದಾಯ ನಕ್ಷೆ ಮಾಡದೆ ಇದ್ದರೆ ಜಾಗದ ಹಸ್ತಾಂತರ ಪ್ರಕ್ರಿಯೆ ಹೇಗೆ? ದಿನ ಮುಂದಕ್ಕೆ ಹೋಗುತ್ತಾ ಇದ್ದರೆ ಸಮಸ್ಯೆ ಹಾಗೆಯೇ ಉಳಿದುಕೊಳ್ಳುತ್ತದೆ ಬೇಗನೇ ಕಾಮಗಾರಿ ಮುಗಿಸಿ ಎಂದು ಗಿರೀಶ್ ಜಿ.ಕೆ ಹೇಳಿದರು.ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಮಾತನಾಡಿ, ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕೆ ಜಾಗ ಅಂತಿಮವಾಗಿದೆ. ಸರಕಾರಿ ಜಾಗದ ಪರಂಬೋಕು ಕುರಿತಂತೆ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇವೆ, ಒಂದು ಜಾಗದ ಸ್ವಾಧೀನ ಮಾತ್ರ ಬಾಕಿ ಇದೆ ಎಂದರು.ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಕುಂದಾಪುರ ಮೇಲ್ಸೇತುವೆ ಕಾಮಗಾರಿಯನ್ನು ಮಾ.31ರೊಳಗೆ ಮುಗಿಸಿ ಸರ್ವೀಸ್ ರಸ್ತೆಯ ಕಾಮಗಾರಿಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಅಂಡಾರ್ ಪಾಸ್ಗಳನ್ನು ಏಪ್ರಲ್ 1ರಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು. ಸರ್ವೀಸ್ ರಸ್ತೆ ನಿರ್ಮಾಣ ಸೇರಿದಂತೆ ಹೆದ್ದಾರಿ ಪ್ರಾಧಿಕಾರ ನಿಗಧಿತ ಸಮಯದೊಳಗೆ ಕಾಮಗಾರಿ ಮುಗಿಸದೇ ಇದ್ದರೆ ಮೊಕದ್ದಮೆ ದಾಖಲಿಸಲಾಗುವುದು ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದರು.
ಕುಂದಾಪುರದಲ್ಲಿ ಸರ್ವೀಸ್ ರಸ್ತೆಗಳನ್ನು ಸಮರ್ಪಕ ರೀತಿಯಲ್ಲಿ ದುರಸ್ತಿ ಪಡಿಸುವಂತೆ ಸದಸ್ಯರಾದ ಮೋಹನದಾಸ ಶಣೈ, ಚಂದ್ರಶೇಖರ ಖಾರ್ವಿ, ಸಂತೋಷ ಕುಮಾರ್ ಶೆಟ್ಟಿ, ಗಿರೀಶ್ ಜಿ.ಕೆ., ಪ್ರಭಾಕರ, ದೇವಕಿ ಸಣ್ಣಯ್ಯ, ಅಬು ಮಹಮ್ಮದ್ ಆಗ್ರಹಿಸದರು.ಶಿಕ್ಷಣ ಇಲಾಖೆಗೆ ಸಂಬಂಧಪಟ್ಟಂತೆ ಚಂದ್ರಶೇಖರ್ ಖಾರ್ವಿ ಕೇಳಿದ ಎಲ್ಲ ಪ್ರಶ್ನೆಗಳು ಇಲಾಖೆಗೆ ಲಭಿಸದ ಬಗೆ ಅವರು ಅಸಮಾಧಾನ ವ್ಯಕ್ತ ಪಡಿಸಿದರು. ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ವಹಣೆಗೆ ಪ್ರತ್ಯೆಕ ಸಿಬಂದಿಯನ್ನು ನೇಮಕ ಮಾಡಬೇಕು. ಶಿಕ್ಷಕರು, ವಿದ್ಯಾರ್ಥಿಗಳು ಶೌಚಾಲಯ ನಿರ್ವಹಣೆ ಮಾಡುವುದು ಸರಿಯಲ್ಲ, ಈ ಬಗ್ಗೆ ಸರ್ಕಾರದ ಗಮನ ಸಳೆಯಬೇಕು ಎಂದರು.
ಪುರಸಭೆ ಉಪಾಧ್ಯಕ್ಷ ಸಂದೀಪ ಖಾರ್ವಿ, ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ ಉಪಸ್ಥಿತರಿದ್ದರು.ಸಭೆಗೂ ಮೊದಲು ಸ್ಥಾಯಿ ಸಮಿತಿ ರಚನೆಯಾಗಿ, ಅಧ್ಯಕ್ಷರಾಗಿ ಶೇಖರ ಪೂಜಾರಿ ಅವಿರೋಧವಾಗಿ ಆಯ್ಕೆಯಾದರು.