ಕುಂದಾಪುರ, ಮಾ.05 (DaijiworldNews/PY): ಕುಂದಾಪುರದ ತ್ರಾಸಿ ಗ್ರಾಮ ಪಂಚಾಯತ್ನ ಕಛೇರಿಗೆ ನುಗ್ಗಿ ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಳ ಅಲಿಯಾಸ್ ಸೇತುಕುಮಾರ್ ಹಾಗೂ ಕಿರಣ್ ಎಂದು ಗುರುತಿಸಲಾಗಿದೆ.
ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮ ಪಂಚಾಯತ್ನ ಕಛೇರಿಯಲ್ಲಿ ಮಾ.2ರಂದು ಸಂಗ್ರಹಿಸಿದ ವಿವಿಧ ರೀತಿಯ ತೆರಿಗೆಯ ಬಾಬ್ತು 35,833 ರೂ. ನಗದನ್ನು ತೆರಿಗೆ ಸಂಗ್ರಹಿಸಿದ ಸಿಬ್ಬಂದಿಯು ಕ್ರೋಢೀಕರಿಸಿ ಕಛೇರಿಯ ಅಲ್ಮೇರಾ ಹಾಗೂ ಕಪಾಟಿನಲ್ಲಿ ಇರಿಸಿದ್ದ ಹಣವನ್ನು ಕಳ್ಳರು ಕಿಟಕಿಯ ಕಬ್ಬಿಣದ ಸರಳನ್ನು ಬಗ್ಗಿಸಿ ಒಳಪ್ರವೇಶಿಸಿ, ಕಳವು ಮಾಡಿದ್ದಾರೆ ಎನ್ನುವ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಗಂಗೊಳ್ಳಿ ಠಾಣಾಧಿಕಾರಿ ಭೀಮಾಶಂಕರ್ ಹಾಗೂ ಅವರ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ ಕಳವಾದ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಎನ್ ಅವರ ನಿರ್ದೇಶನದಲ್ಲಿಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಕುಂದಾಪುರ ಉಪವಿಭಾಗ ಪೊಲೀಸ್ ಅಧೀಕ್ಷಕ ಶ್ರೀಕಾಂತ. ಕೆ., ಬೈಂದೂರು ವೃತ್ತ ನೀರೀಕ್ಷಕ ಸಂತೋಷ್ ಕಾಯ್ಕಿಣಿ ಇವರ ಮಾರ್ಗದರ್ಶನದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ಇವರ ಖಚಿತ ಮಾಹಿತಿಯ ಮೇರೆಗೆ ಸಿಬ್ಬಂದಿಗಳಾದ ಮೋಹನ ಪೂಜಾರಿ, ಯೋಗೀಶ್, ಸೂರ ನಾಯ್ಕ್, ಚಂದ್ರಶೇಖರ ಅರೆಶಿರೂರು, ಶ್ರೀಧರ ಸೆಳ್ಳೆಕುಳ್ಳಿ, ಪ್ರಿನ್ಸ್, ಜೀಪ್ ಚಾಲಕ ದಿನೇಶ್, ಆರ್.ಡಿ. ಸೆಲ್ ಶಿವಾನಂದ ಅವರು ಕಾರ್ಯಾಚರಣೆ ನಡೆಸಿದ್ದು, ಮುರ್ಡೇಶ್ವರದ ರೈಲು ನಿಲ್ದಾಣದ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.