ಕಾಸರಗೋಡು, ಮಾ 04 (DaijiworldNews/MS): ಅಲೆಗಳ ಅಬ್ಬರಕ್ಕೆ ಸಿಲುಕಿ ಮೀನುಗಾರಿಕಾ ಬೋಟ್ ಮಗುಚಿ ಐವರು ಬೆಸ್ತರು ಸಮುದ್ರದಲ್ಲಿ ಸಿಲುಕಿದ ಘಟನೆ ಬೇಕಲ ಸಮುದ್ರದಲ್ಲಿ ನಡೆದಿದ್ದು , ಎರಡು ಗಂಟೆಗಳ ಕಾಲ ಜೀವನ್ಮರಣದ ನಡುವೆ ಒದ್ದಾಡುತ್ತಿದ್ದ ಬೆಸ್ತರನ್ನು ಕರಾವಳಿ ರಕ್ಷಣಾ ಪಡೆ ಹಾಗೂ ಮೀನುಗಾರಿಕಾ ಇಲಾಖಾ ರಕ್ಷಣಾ ಪಡೆ ಸಿಬಂದಿಗಳು ರಕ್ಷಿಸಿದ್ದಾರೆ.
ಬುಧವಾರ ರಾತ್ರಿ ಎಂಟು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕಾಸರಗೋಡು ತೀರದಿಂದ ಹತ್ತು ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಅಲೆಗಳ ಅಬ್ಬರಕ್ಕೆ ಮಗುಚಿ ಇಬ್ಬಾಗಗೊಂಡಿದ್ದು , ಬೋಟ್ ನ ಒಂದು ಭಾಗದಲ್ಲಿ ಜೀವನ್ಮರಣದ ಸ್ಥಿತಿಯಲ್ಲಿ ನಡುವೆ ಒದ್ದಾಡುತ್ತಿದ್ದರು .
ಈ ಬಗ್ಗೆ ಕರಾವಳಿ ರಕ್ಷಣಾ ಪಡೆಗೆ ಲಭಿಸಿದ ಮಾಹಿತಿಯಂತೆ ದೌಡಾಯಿಸಿದ ರಕ್ಷಣಾ ಪಡೆ ಸಿಬಂದಿಗಳು ಐವರನ್ನು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ , ಎರಡು ದಿನಗಳ ಹಿಂದೆ ನೀಲೇಶ್ವರ ಆಯಿತ್ತಲದಿಂದ ತೆರಳಿದ್ದ ಮರಿಯ ಎಂಬ ಬೋಟ್ ಈ ದುರಂತಕ್ಕೀಡಾಗಿದ್ದು , ಬೋಟ್ ನಲ್ಲಿದ್ದವರು ತಿರುವನಂತಪುರ ನಿವಾಸಿಗಳೆಂದು ತಿಳಿದು ಬಂದಿದೆ. ಬೋಟ್ ನಲ್ಲಿದ್ದ ಶ್ಯಾಮ್ (18) , ಜಿಮ್ಮಿ ( 21), ಕುಮಾರ್ ( 43) , ಈಶ್ವರ್ ( 58) ಮತ್ತು ದಾಯಿ ರೋಸ್ (37) ರವರನ್ನು ತಡರಾತ್ರಿ ಕಾಸರಗೋಡು ತೀರಕ್ಕೆ ತಲಪಿಸಿ ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು.