ಕಡಬ, ಮಾ.03 (DaijiworldNews/MB) : ಐತ್ತೂರು ರಕ್ಷಿತಾರಣ್ಯದಿಂದ ಲಕ್ಷಾಂತರ ಬೆಲೆ ಬಾಳುವ ಮರಗಳು ಕಳುವಾಗಿದೆ ಎಂದು ಅರಣ್ಯ ಸಂಚಾರ ದಳಕ್ಕೆ ದೂರು ನೀಡಿದವರ ಮನೆಗೆ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ರಾತ್ರೋರಾತ್ರಿ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ದೂರುದಾರ ಪ್ರಸಾದ್ ಅವರ ಮನೆಗೆ ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ಹಾಗೂ ಹದಿನೈದು ಮಂದಿ ಅಕ್ರಮವಾಗಿ ನುಗ್ಗಿ ಪ್ರಸಾದ್ ಎಲ್ಲಿದ್ದಾರೆ ಎಂದು ಹುಡುಕಾಡಿದ್ದು ಮಾತ್ರವಲ್ಲದೆ ದೂರುದಾರ ಪ್ರಸಾದ್ ಅವರ ವೃದ್ಧ ತಾಯಿಯ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೂಡಾ ಕೇಳಿ ಬಂದಿದೆ. ದೂರುದಾರರ ತಾಯಿ ಪ್ರಸ್ತುತ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದಾಳಿಯ ವೇಳೆ ಗಸ್ತು ದಳದವರ ಜೊತೆ ಮರಗಳ್ಳತನದ ಆರೋಪ ಹೊತ್ತಿರುವ ಅರಣ್ಯ ಅಧಿಕಾರಿ ಹಾಗೂ ಸಿಬಂದಿಗಳು ಕೂಡ ಇದ್ದರು ಎಂದು ವರದಿಯಾಗಿದೆ.
ಇನ್ನು ಅಧಿಕಾರಿಗಳು ಮನೆಗೆ ನುಗ್ಗಿದ್ದು ಮಾತ್ರವಲ್ಲದೆ ಮನೆಯಲ್ಲಿ ಅಟ್ಟಕ್ಕೆ ಮುಚ್ಚಿಗೆ ಹಾಕಲಾಗಿದ್ದ ಮರದ ಹಳೆ ಹಲಗೆಗಳನ್ನು ಹೊತ್ತೊಯ್ದಿದ್ದಾರೆ ಎಂದು ಮನೆಯವರು ಆರೋಪಿಸಿದ್ದಾರೆ.