ಮಂಗಳೂರು, ಮಾ.02 (DaijiworldNews/MB) : ಎರಡು ದಿನದಿಂದ ತೆಂಗಿನ ಮರದ ಮೇಲೆ ಸಿಲುಕಿದ್ದ ಬೆಕ್ಕನ್ನು ಗುಂಪೊಂದು ರಕ್ಷಿಸಿದ ಘಟನೆ ಕದ್ರಿಯ ಶಿವಬಾಗ್ನಲ್ಲಿ ನಡೆದಿದೆ.
ಇಲ್ಲಿನ ಐವಿ ಮತ್ತು ನೆವಿಲ್ಲೆ ಪಿರೇರಾ ಅವರ ಅಂಗಳದಲ್ಲಿರುವ 50 ಅಡಿ ಎತ್ತರದ ತೆಂಗಿನ ಮರದ ಮೇಲೆ ಬೆಕ್ಕು ಫೆಬ್ರವರಿ 26 ರ ತಡರಾತ್ರಿಯಲ್ಲಿ ಸಿಲುಕಿಕೊಂಡಿದ್ದು ಎರಡು ದಿನಗಳವರೆಗೆ ಅಲ್ಲೇ ಇತ್ತು. ಸಹಾಯಕ್ಕಾಗಿ ಬೆಕ್ಕು ನಿರಂತರವಾಗಿ ಅಳುವುದು ಕೇಳಿಸುತ್ತಿತ್ತು.
ಅದರ ಕೂಗನ್ನು ಸಹಿಸಲಾಗದೆ ಪಿರೇರಾ ದಂಪತಿಗಳು ಮರವನ್ನು ಏರಲು ಯಾರನ್ನಾದರೂ ಕರೆಯಲು ಅನೇಕ ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಪ್ರಾಣಿ ಸಂರಕ್ಷಣಾ ಸಂಸ್ಥೆಗಳನ್ನು ಸಂಪರ್ಕಿಸಲು ಕೂಡಾ ಪ್ರಯತ್ನಿಸಿದರು. ಏತನ್ಮಧ್ಯೆ ಇವರೊಂದಿಗೆ ಮಾಜಿ ಶಾಸಕ ಜೆ ಆರ್ ಲೋಬೊ ಅವರ ಪತ್ನಿ ಫಿಲೋಮಿನಾ ಲೋಬೊ ಕೂಡ ಸೇರಿಕೊಂಡರು. ಕೊನೆಗೆ ಮರಗಳನ್ನು ಹತ್ತುವಲ್ಲಿ ಪರಿಣಿತರಾದ ಕುಂಟಿಕಾನದ ದುರ್ಗಾ ಎಂದೇ ಕರೆಯಲ್ಪಡುವ ದುರ್ಗಾ ದಾಸ್ ಅವರು ರವಿವಾರದಂದು ಮರ ಏರಿ ಬೆಕ್ಕನ್ನು ರಕ್ಷಿಸಲು ಒಪ್ಪಿಕೊಂಡರು.
ಅನೇಕ ನೆರೆಹೊರೆಯವರು ಕೂಡಾ ಸೇರಿಕೊಂಡರು. ತೆಂಗಿನ ಮರದ ಕೆಳಗೆ ಐದು ಜನರು ಬಲೆಯನ್ನು ಹಿಡಿದು ನಿಂತರು. ನೆರೆಯ ಭವ್ಯಾ ಎಂಬವರು ಈ ಘಟನೆಯನ್ನು ವಿಡಿಯೋ ಮೂಲಕ ರೆಕಾರ್ಡ್ ಮಾಡಲು ಸಿದ್ದರಾದರು.
ದುರ್ಗಾ ಅವರು ಚೀಲ ಹಿಡಿದು ಹಗ್ಗದ ಸಹಾಯದಲ್ಲಿ ಮರವನ್ನು ಹತ್ತಿದ್ದು ಬೆಕ್ಕನ್ನು ಹಿಡಿಯುವುದು ಕಷ್ಟ ಎಂದು ಅವರಿಗೆ ತೋರುತ್ತದೆ. ಆ ಕೂಡಲೇ ಕೆಳಗಿದ್ದವರಲ್ಲಿ ಬಲೆಯನ್ನು ಬಿಡಿಸಿ ಗಟ್ಟಿಯಾಗಿ ಹಿಡಿಯಲು ಸೂಚನೆ ನೀಡಿದ್ದು, ಬೆಕ್ಕನ್ನು ಮೆಲ್ಲನೆ ಕೆಳಕ್ಕೆ ತಳ್ಳಿದ್ದು ಬೆಕ್ಕು ಬಲೆಗೆ ಬಿದ್ದು ಕೂಡಲೇ ಬಲೆಯಿಂದ ಹೊರ ಜಿಗಿದು ತನ್ನ ಜೀವ ರಕ್ಷಣೆಯ ಭಯದಲ್ಲಿ ಓಡಿಹೋಗಿದೆ.
ಧೈರ್ಯಶಾಲಿ ರಕ್ಷಣಾ ಕಾರ್ಯಾಚರಣೆಯ ನಾಯಕನಾಗಿದ್ದ ದುರ್ಗಾರನ್ನು ನೆರೆಹೊರೆಯವರು ಸನ್ಮಾನಿಸಿದರು. ಇಡೀ ಘಟನೆಯನ್ನು ಚಿತ್ರೀಕರಿಸಿದ ಸುರೇಶ್ ಅಡಿಗ ದಂಪತಿ, ವಿರಾಜ್ ದಂಪತಿ, ಗೋವಿಂದ ಮತ್ತು ಭವ್ಯಾ ಅವರಿಗೆ ಧನ್ಯವಾದ ಸಲ್ಲಿಸಲಾಯಿತು.