ಬಾರ್ಕೂರು, ಮಾ 02 (DaijiworldNews/MS): ಸಮಾಜಸೇವಕ, ಆರ್ಟಿಐ ಕಾರ್ಯಕರ್ತ ಬಾರ್ಕೂರು ಶಂಕರ ಶಾಂತಿಯವರಿಗೆ ಮಾರಣಾಂತಿಕ ಹಲ್ಲೆಯಾಗಿದ್ದು ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸೋಮವಾರ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಸದಸ್ಯರು ನಾರಾಯಣ ಗುರು ಸಭಾಭವನದ ವಠಾರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷರಾದ ಪ್ರವೀಣ್ ಪೂಜಾರಿ ಯವರು ಬಾರ್ಕೂರು ಕಾಳಿಕಾಂಬ ದೇವಸ್ಥಾನದ ಸಭಾಭವನದ ಅಡುಗೆ ಕೋಣೆಯಲ್ಲಿ ಕೂಡಿ ಹಾಕಿ ಆರ್ ಟಿ ಐ ಕಾರ್ಯಕರ್ತರಾದ ಶಂಕರ್ ಶಾಂತಿಯವರಿಗೆ ಫೆಬ್ರವರಿ 20 ರಂದು ಕೆಲ ದುಷ್ಕರ್ಮಿ ಗಳು ಸೇರಿ ಹಲ್ಲೆ ನಡೆಸಿದ್ದು ತಕ್ಷಣ ಆರೋಪಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಹಲ್ಲೆ ಮಾಡಿದವರ ಮೇಲೆ ಈಗಾಗಲೇ ಎಫ್.ಐ.ಆರ್ ದಾಖಲಾಗಿದ್ದರೂ ಪೋಲಿಸ್ ಇಲಾಖೆ ಅವರನ್ನು ಬಂಧನ ಮಾಡಿಲ್ಲ. ಅವರು ಸಮಾಜದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಶಂಕರ್ ಅವರಿಗೆ ಹಲ್ಲೆ ಮಾಡಿದ ಪರಿಣಾಮ ಇಂದು ಅವರ ಕುಟುಂಬ ಬೀದಿಗೆ ಬೀಳುವ ಸ್ಥಿತಿಯಲ್ಲಿದೆ. ಹಲ್ಲೆ ಯಿಂದ ಅವರ ಮೂಳೆಗೆ ಪೆಟ್ಟಾಗಿದ್ದು ಮುಂದೆ ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಇಷ್ಟಾಗಿಯೂ ಪೋಲಿಸ್ ಇಲಾಖೆ ಪ್ರಕರಣಕ್ಕೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇನ್ನರೆಡು ದಿನದಲ್ಲಿ ಆರೋಪಗಳನ್ನು ಬಂಧಿಸದಿದ್ದರೆ ಬಿಲ್ಲವ ಸಮುದಾಯದ ಜನರನ್ನು ಒಗ್ಗೂಡಿಸಿ ತೀವ್ರ ಪ್ರತಿಭಟನೆ ಗೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಆಳುಪ ಮನೆತನದ ವಂಶಸ್ಥರಾದ ಡಾ ಅಶೋಕ್ ರಾಜ್ ಜೈನ್ ಮಾತನಾಡಿ, 'ಶಂಕರ್ ಶಾಂತಿಯವರು ಎಂದೂ ಒಂದು ಧರ್ಮ ಅಥವಾ ಸಮುದಾಯದ ವಿರುದ್ಧ ದನಿ ಎತ್ತಿದವರಲ್ಲ. ರಸ್ತೆ ಸಾರಿಗೆ ಸುರಕ್ಷತೆ ವಿಷಯ, ಕಾಂಕ್ರೀಟ್ ರಸ್ತೆ ಕಳಪೆ ವಿಷಯ, ಬಾರ್ಕೂರು ಜೈನ ಬಸದಿ ಆಕ್ರಮಣ ತೆರವು, ಹೊಸಾಳ ಗರಡಿಯಲ್ಲಿ ವೈದಿಕನೋರ್ವನ ಅನಾಚಾರವನ್ನು ಬಯಲಿಗೆಳೆದಿದ್ದರು.
ರಸ್ತೆ ಬದಿ ಬ್ಯಾನರ್ ಅಳವಡಿಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರ ಕುರಿತು ಕ್ರಮಕೈಗೊಂಡಿದ್ದರಿಂದ ದುಷ್ಕರ್ಮಿಗಳು ಕಬ್ಬಿಣದ ರಾಡ್ನಿಂದ ಕೊಲೆಯತ್ನ ನಡೆಸಿರುವುದು ಅತ್ಯಂತ ಕೀಳುಮಟ್ಟದ ಮನುಷ್ಯತ್ವವಿಲ್ಲದ ವರ್ತನೆಯಾಗಿದೆ. ತಪ್ಪುಗಳನ್ನು, ಸಾರ್ವಜನಿಕ ಅನ್ಯಾಯಗಳನ್ನು ಪ್ರಶ್ನಿಸಿದಾಕ್ಷಣ ಕೊಲೆ ಮಾಡುವ ಮಟ್ಟಕ್ಕೆ ತಲುಪಿರುವುದು ಈ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೇ ಸರಿ. ಕಾನೂನನ್ನು ಕೈಗೆತ್ತಿಕೊಂಡು ಅಮಾನವೀಯ ವಾಗಿ ಹಲ್ಲೆ ನಡೆಸಿರುವುದು ಪೋಲಿಸ್ ಇಲಾಖೆಗೆ ಅವಮಾನ. ಉಪ್ಪಿನಂಗಡಿ, ಬೆಳ್ತಂಗಡಿ ಇತರ ಕಡೆಗಳಲ್ಲಿ ಆರೋಪಗಳನ್ನು ಬಂಧಿಸುವಂತೆ ಒತ್ತಾಯಿಸಿ ಆಯಾ ತಹಶಿಲ್ದಾರಿಗೆ ಮನವಿ ಕೊಡಲಾಗಿದೆ ಎಂದರು.ಯಾವುದೇ ಒತ್ತಡಕ್ಕೆ ಮಣಿಯದೆ ಶಂಕರ ಶಾಂತಿಗೆ ನ್ಯಾಯ ಒದಗಿಸಬೇಕು' ಎಂದು ಅಶೋಕ್ ರಾಜ್ ಒತ್ತಾಯಿಸಿದರು
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ವತಿಯಿಂದ ಸೂಕ್ತ ಕ್ರಮಕೈಗೊಳ್ಳುವಂತೆ ಉಡುಪಿ ಡಿವೈಎಸ್ಪಿ ಸದಾನಂದ ನಾಯ್ಕ'ರಿಗೆ
ಮನವಿಯನ್ನು ಹಸ್ತಾಂತರಿಸಲಾಯಿತು. ಡಿವೈ ಎಸ್ಪಿ ಆರೋಪಿಗಳನ್ನು ವಿರುದ್ಧ ತನಿಖಾಧಿವರಿಗೆ ಕ್ರಮಗೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿಯವರು ಸೂಚನೆ ನೀಡಿದ್ದು ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.