ಮಂಗಳೂರು, ಮಾ 01 (DaijiworldNews/MS): ದಾಂಪತ್ಯ ಜೀವನ ಪ್ರವೇಶಿಸಿ ಕೆಲ ಗಂಟೆಗಳೇ ಕಳೆಯುವ ಮುಂಚೆಯೇ ಮದುಮಗಳು ಹೃದಯಾಘಾತದಿಂದ ಮೃತಪಟ್ಟ ಘಟನೆ ನಗರದ ಅಡ್ಯಾರ್ ನಲ್ಲಿ ಮಾ.1 ರ ಸೋಮವಾರ ಮುಂಜಾನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತ ನವವಿವಾಹಿತೆಯನ್ನು ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆಎಚ್ಕೆ ಅಬ್ದುಲ್ ಕರೀಂ ಹಾಜಿ ಎಂಬವರ ಪುತ್ರಿ ಲೈಲಾ ಆಫಿಯಾ(23) ಎಂದು ಗುರುತಿಸಲಾಗಿದೆ.
ಆಫಿಯಾ ಅವರ ವಿವಾಹವೂ ಭಾನುವಾರ ಕಣ್ಣೂರಿನ ಯುವಕ ಮುಬಾರಕ್ ಎಂಬವರೊಂದಿಗೆ ಅಡ್ಯಾರ್ ಕಣ್ಣೂರು ಜುಮಾ ಮಸೀದಿಯಲ್ಲಿ ನೆರವೇರಿತ್ತು. ಆ ಬಳಿಕ ವಿವಾಹದ ಔತಣಕೂಟವೂ ಅಡ್ಯಾರ್ ಗಾರ್ಡನ್ನಲ್ಲಿ ಏರ್ಪಡಿಸಲಾಗಿತ್ತು.
ಇದಾದ ಬಳಿಕ ಮದುಮಗ ಮುಬಾರಕ್ ಅತ್ತೆಯ ಮನೆಗೆ ಬಂದಿದ್ದರು. ನವಜೋಡಿಯು ವಿವಾಹದ ಸಂಭ್ರಮದಲ್ಲಿದ್ದು, ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಇದೀಗ ವಿವಾಹದ ಸಂಭ್ರಮದಲ್ಲಿದ್ದ ಮನೆಯಲ್ಲಿ ನೋವು ಮಡುಗಟ್ಟಿದೆ.