ಮಂಗಳೂರು, ಫೆ.28 (DaijiworldNews/MB) : ಎಟಿಎಂ ಸ್ಕಿಮ್ಮಿಂಗ್ ಬಗ್ಗೆ ನಗರ ಪೊಲೀಸರು ಫೆಬ್ರವರಿ 28 ರ ಭಾನುವಾರ ಸಾರ್ವಜನಿಕರಲ್ಲಿ ಜಾಗೃತಿಯಿಂದಿರಲು ತಿಳಿಸಿದರು. ಮೋಸದಿಂದ ಹಣವನ್ನು ಹಿಂಪಡೆಯುವ ಸಲುವಾಗಿ ಮಂಗಳೂರಿನಲ್ಲಿ ನಾಲ್ಕು ಎಟಿಎಂಗಳನ್ನು ಸ್ಕಿಮ್ಮಿಂಗ್ ಸಾಧನ ಅಳವಡಿಸಿದ ಆರೋಪದ ಮೇಲೆ ಫೆಬ್ರವರಿ 24 ರಂದು ನಾಲ್ಕು ಜನರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ಸ್ಕಿಮ್ಮಿಂಗ್ ಬಗ್ಗೆ ಮಾಹಿತಿ ನೀಡಿದರು.
ಕೇರಳದ ತ್ರಿಶೂರ್ ನಿವಾಸಿ ಗ್ಲ್ಯಾಡ್ವಿನ್ ಜಿಂಟೋ ಜಾಯ್ ಅಲಿಯಾಸ್ ಜಿಂಟು (37), ದೆಹಲಿಯ ಪ್ರೇಮ್ ನಗರದ ದಿನೇಶ್ ಸಿಂಗ್ ರಾವತ್ (44), ಕಾಸರಗೋಡು ನಿವಾಸಿ ಅಬ್ದುಲ್ ಮಜೀದ್ (27), ಕೇರಳದ ಆಲಪ್ಪುಳ ನಿವಾಸಿ ರಾಹುಲ್ ಟಿಎಸ್ (24) ರನ್ನು ಕುಳಾಯಿಯಲ್ಲಿರುವ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ, ನಾಗೂರಿನಯಲ್ಲಿನ ಕೆನರಾ ಬ್ಯಾಂಕ್ ಮತ್ತು ಕಪಿತನಿಯ ಹಾಗೂ ಮಂಗಳಾದೇವಿಯ ಎಸ್ಬಿಐ ಎಟಿಎಂ, ಚಿಲಿಂಬಿಯಲ್ಲಿ ಕೆನರಾ ಬ್ಯಾಂಕ್ ಎಟಿಎಂ ಇತ್ಯಾದಿಗಳಲ್ಲಿ ಸ್ಕಿಮ್ಮಿಂಗ್ ಸಾಧನಗಳನ್ನು ಜೋಡಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಆರೋಪಿಗಳು ಬ್ಯಾಂಕ್ ಗ್ರಾಹಕರ ಡೇಟಾವನ್ನು ಸಂಗ್ರಹಿಸಿ ನಕಲಿ ಎಟಿಎಂ ಕಾರ್ಡ್ಗಳನ್ನು ತಯಾರಿಸಿ ದೆಹಲಿ, ಬೆಂಗಳೂರು, ಮೈಸೂರು, ಕಾಸರಗೋಡು, ಗೋವಾ, ಮಡಿಕೇರಿ ಮೊದಲಾದ ಸ್ಥಳದಲ್ಲಿ ಹಣ ಹಿಂಪಡೆದಿದ್ದಾರೆ.
ಭಾನುವಾರ ನಡೆದ ಪ್ರದರ್ಶನದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಡಿಸಿಪಿ ಹರಿರಾಮ್ ಶಂಕರ್ ಅವರು, ''ಇಂತಹ ವಂಚಕರ ಬಗ್ಗೆ ಸಾರ್ವಜನಿಕರಿಂದ ಎಚ್ಚರದಿಂದಿರಬೇಕೆಂದು ಕೋರಿದರು. ಸಂಘಟಿತ ಗ್ಯಾಂಗ್ ವಿವಿಧ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. "ಇತ್ತೀಚೆಗೆ ನಾಲ್ಕು ಆರೋಪಿಗಳನ್ನು ಎಟಿಎಂ ಸ್ಕಿಮ್ಮಿಂಗ್ ಆರೋಪದ ಮೇಲೆ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಅವರು ಅಲಿಬಾಬಾ ವೆಬ್ಸೈಟ್ ಮೂಲಕ ಸ್ಕಿಮ್ಮಿಂಗ್ ಸಾಧನಗಳನ್ನು ಸಂಗ್ರಹಿಸಿದ್ದಾರೆ ಎಂದು ಬಹಿರಂಗಪಡಿಸಿದರು. ಈ ಸಾಧನಗಳು ವೆಬ್ಸೈಟ್ಗಳಲ್ಲಿ ಸುಲಭವಾಗಿ ಲಭ್ಯವಾಗುತ್ತದೆ. ಎಟಿಎಂ ಸ್ಕಿಮ್ಮಿಂಗ್ ಎನ್ನುವುದು ಯಂತ್ರಾಂಶ, ಸಾಫ್ಟ್ವೇರ್ ಮತ್ತು ಕೆಲವು ಕೌಶಲ್ಯಗಳನ್ನು ಒಳಗೊಂಡಿರುವ ಒಂದು ತಂತ್ರವಾಗಿದೆ'' ಎಂದು ವಿವರಿಸಿದರು.
"ಇದು ಕರ್ನಾಟಕದ ಹೊರ ಭಾಗ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕಾರ್ಯನಿರ್ವಹಿಸುವ ಸಂಘಟಿತ ಗ್ಯಾಂಗ್ ಆಗಿದೆ. ಅವರು ದೆಹಲಿ, ಚೆನ್ನೈ, ಗೋವಾ ಮತ್ತು ಕೇರಳದಲ್ಲಿ ಎಟಿಎಂ ಸ್ಕಿಮ್ಮಿಂಗ್ನಲ್ಲಿ ಭಾಗಿಯಾಗಿದ್ದರು. ಮೂಲತಃ ಅವರು ಮಹಾನಗರಗಳತ್ತ ಗಮನ ಹರಿಸಿ ಸೂಕ್ತವಾದ ಎಟಿಎಂಗಳನ್ನು ಹುಡುಕಲು ಸ್ಥಳೀಯರ ಸಹಾಯವನ್ನು ಪಡೆಯುತ್ತಿದ್ದರು'' ಎಂದು ತಿಳಿಸಿದರು.
"ಹೆಚ್ಚಿನ ಅಂಚೆ ಕಚೇರಿಗಳಲ್ಲಿ ಚಿಪ್ ಇಲ್ಲದ ಎಟಿಯಂ ಇರುವ ಕಾರಣದಿಂದಾಗಿ ಆರೋಪಿಗಳು ಪೋಸ್ಟ್ ಆಫೀಸ್ಗಳ ಎಟಿಎಂಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಸ್ಕಿಮ್ಮಿಂಗ್ ಸಾಧನಗಳು ಡೇಟಾವನ್ನು ಚಿಪ್ ಇಲ್ಲದ ಕಾರ್ಡ್ಗೆ ವರ್ಗಾಯಿಸುತ್ತದೆ. ಈ ಸಾಧನಗಳ ಮೂಲಕ ಡೇಟಾವನ್ನು ಪಡೆದ ನಂತರ ಅವರು ಹಣವನ್ನು ನಕಲಿ ಎಟಿಯಂ ಮೂಲಕ ಹಿಂಪಡೆಯುತ್ತಿದ್ದರು'' ಎಂದು ಹೇಳಿದರು.
"ಜನರು ಹಣವನ್ನು ಕಳೆದುಕೊಂಡಿರುವ ವಿಚಾರ ತಿಳಿದ ಮೂರು ದಿನಗಳಲ್ಲಿ ಬ್ಯಾಂಕಿಗೆ ಹೋಗಿ ದೂರು ದಾಖಲಿಸಬೇಕು. ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಅವರ ಹಣವನ್ನು ಅವರ ಖಾತೆಗೆ ಹಿಂತಿರುಗಿಸಲಾಗುತ್ತದೆ. ಪ್ರಸ್ತುತ ಆರೋಪಿಗಳು ಪೊಲೀಸರ ವಶದಲ್ಲಿದ್ದು ತನಿಖೆ ಪ್ರಗತಿಯಲ್ಲಿದೆ" ಎಂದು ತಿಳಿಸಿದರು.
ಇನ್ನು ಅಕ್ರಮ ಮರಳು ಸಾಗಾಟ ವಿಚಾರವಾಗಿ ಮಾತನಾಡಿದ ಅವರು, "ಕೇರಳದಿಂದ ಗಡಿ ದಾಟಿ ಕರ್ನಾಟಕಕ್ಕೆ ಬರುವ ವಾಹನಗಳನ್ನು ನಾವು ಗಮನಿಸಿದ್ದೇವೆ. ಗಡಿ ಚೆಕ್ಪೋಸ್ಟ್ ಹಾದುಹೋದ ನಂತರ ಅವರು ಕರ್ನಾಟಕದಲ್ಲಿ ಚಹಾಕ್ಕಾಗಿ ವಾಹನ ನಿಲ್ಲಿಸಿದರು. ಬಳಿಕ ಅವರು ಪುನಃ ಕೇರಳಕ್ಕೆ ಹಿಂತಿರುಗಿದರು. ಚಹಾ ಕುಡಿಯಲೆಂದು ಯಾರೂ ಕೂಡಾ ಗಡಿಯನ್ನು ಹಾದುಹೋಗಲಾರರು. ಇದು ನಮ್ಮ ಅನುಮಾನಕ್ಕೆ ಕಾರಣವಾಯಿತು. ಕೊರೊನಾ ಕಾರಣದಿಂದ ಇತರೆ ಎಲ್ಲಾ ಗಡಿಗಳನ್ನು ಮುಚ್ಚಲಾಗಿದ್ದು ಈ ಹಿನ್ನೆಲೆ ಅವರು ಈ ಮಾರ್ಗದಲ್ಲಿ ಸಾಗಬೇಕಾಯಿತು.ಪೊಲೀಸರು ತೀವ್ರ ನಿಗಾವಹಿಸಿದ್ದು ಈ ವೇಳೆ ಅವರು ಮರಳು ಸಾಗಿಸುತ್ತಿರುವುದು ತಿಳಿದು ಬಂದಿತು. ಫೆಬ್ರವರಿ 26 ಮತ್ತು 27 ರಂದು ಮುಂಜಾನೆ 3 ಗಂಟೆ ಸುಮಾರಿಗೆ ನಾವು ವಾಹನವನ್ನು ಬೆನ್ನಟ್ಟಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದೆವು'' ಎಂದು ವಿವರಿಸಿದರು.
''ಗಡಿ ಪ್ರದೇಶಗಳಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಅಕ್ರಮವಾಗಿ ಮರಳು ಸಾಗಣೆಗೆ ನಿಗಾ ಇಡಲು 180 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಯೋಜಿಸಲಾಗಿದೆ'' ಎಂದು ಕೂಡಾ ಅವರು ಈ ಸಂದರ್ಭದಲ್ಲೇ ಹೇಳಿದರು.