ಬೈಂದೂರು, ಫೆ.27 (DaijiworldNews/PY): "ಇಂದು ಕೇಂದ್ರ, ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರು, ಜನಸಾಮಾನ್ಯರ ಹಿತಾಸಕ್ತಿಯನ್ನು ಮರೆತು ವ್ಯವಹರಿಸುತ್ತಿವೆ. ಕೊರೊನಾ ಬಳಿಕ ಸರ್ಕಾರಗಳ ಕಿರುಕುಳ ಹೆಚ್ಚಾಗಿದೆ. ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದರೆ ಇತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ. ಸರ್ಕಾರಗಳ ಜನವಿರೋಧಿ ಆಡಳಿತದಿಂದ ಜನ ರೊಚ್ಚಿಗೆದ್ದಿದ್ದಾರೆ. ಜನರ ಭಾವನೆಗಳನ್ನು ಕೆಲಸ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಜನಧ್ವನಿ ಪಾದಯಾತ್ರೆಯ ಮೂಲಕ ಮಾಡುತ್ತಿದ್ದೇವೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಬೈಂದೂರಿನಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರ ಸರಕಾರದ ಜನವಿರೋಧಿ ನಿಲುವಿನ ವಿರುದ್ಧ ಹೆಜಮಾಡಿಯಿಂದ ಬೈಂದೂರು ತನಕ ನಡೆದ ಜನಧ್ವನಿ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
"ಜನಧ್ವನಿ ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಇದು ಜನರ ನೋವಿನ ಸಂಕೇತ. ಜನರು ಈಗ ನಿತ್ಯ ಅನುಭವಿಸುತ್ತಿರುವ ನೋವು-ಕಷ್ಟವನ್ನು ಈ ಪಾದಯಾತ್ರೆಯ ಮೂಲಕ ತೋರಿಸುತ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಪಕ್ಷದ ಎಲ್ಲ ನಾಯಕರುಗಳು ಐಕ್ಯತೆಯ ಪ್ರದರ್ಶನ ಮಾಡಿದ್ದಾರೆ. ಸರ್ಕಾರಗಳ ಕಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ" ಎಂದರು.
"ಇಂದು ಈ ಭಾಗದ ಜೀವನಾಡಿಯಾಗಿದ್ದ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ನಡೆಯಿತು. ಒಂದು ಕಾಲದಲ್ಲಿ ಈ ಭಾಗದಲ್ಲಿ ಹುಟ್ಟಿದ ಕಾರ್ಪೋರೇಶನ್, ಸಿಂಡಿಕೇಟ್, ವಿಜಯಾ ಬ್ಯಾಂಕ್ಗಳನ್ನು ದಿ.ಇಂದಿರಾ ಗಾಂಧಿಯವರು ರಾಷ್ಟ್ರೀಕರಣ ಮಾಡಿದ್ದರು. ಇಂದು ಆ ಬ್ಯಾಂಕ್ಗಳನ್ನು ಏಕಾಏಕಿ ವಿಲೀನ ಮಾಡಲಾಯಿತು. ಈ ಸಂದರ್ಭದಲ್ಲಿ ಇಲ್ಲಿನ ಸಂಸದರು ಏಕೆ ಮೌನವಾಗಿದ್ದರು ? ದೇಶಕ್ಕೆ ಆರ್ಥಿಕ ಶಕ್ತಿ ಕೊಟ್ಟ ಬ್ಯಾಂಕ್ಗಳನ್ನೇ ಸಮಾಧಿ ಮಾಡಿದಿರಲ್ಲ" ಎಂದು ದೂರಿದರು.
"ಜನರ ಧ್ವನಿಯನ್ನು ಆಲಿಸುವಲ್ಲಿ ಸರ್ಕಾರವಿಂದು ವಿಫಲವಾಗಿದೆ. ದೇಶದಲ್ಲಿ ನಿರಂತರವಾಗಿ ರೈತರ ಹೋರಾಟ ನೆಡೆಯುತ್ತಿದ್ದರೆ ರೈತರಲ್ಲಿಗೆ ತೆರಳಿ ರೈತರ ಬೇಡಿಕೆ ಆಲಿಸಲು ಪ್ರಧಾನ ಮಂತ್ರಿಗಳಿಗೆ ಸಾಧ್ಯವಿಲ್ಲ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುವುದರಲ್ಲಿ ಸರ್ಕಾರ ನಿರತವಾಗಿದೆ" ಎಂದರು.
"ಈ ಹಿಂದೆ ಕಾಂಗ್ರೆಸ್ ಸರ್ಕಾರ ರಾಷ್ಟ್ರೀಕರಣಕ್ಕೆ ಒತ್ತು ನೀಡಿದ್ದರೆ ಇಂದಿನ ಸರ್ಕಾರ ಖಾಸಗೀಕರಣ ಮಾಡುತ್ತಿದೆ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಕೊರೊನಾ ಸಂದರ್ಭದಲ್ಲಿ ನೇಕಾರರು, ಸವಿತಾ ಸಮಾಜದವರು, ದರ್ಜಿಯವರು ಹೀಗೆ ಪ್ರತಿಯೊಂದು ವೃತ್ತಿಯವರು ಆರು ತಿಂಗಳುಗಳ ಕೆಲಸ ಕಳೆದುಕೊಂಡರು. ಅವರ ನೋವಿಗೆ ಸರ್ಕಾರ ಸ್ಪಂದಿಸಲಿಲ್ಲ. ಕಳೆದ ಐದು ತಿಂಗಳಿಂದ ಮೀನುಗಾರರಿಗೆ ಡಿಸೇಲ್ ಸಬ್ಸಿಡಿ ಸಿಗುತ್ತಿಲ್ಲ. ಇದನ್ನು ಯಾರಲ್ಲಿ ಕೇಳಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸದ ಸರ್ಕಾರ ಯಾಕೆ ಬೇಕು?" ಎಂದು ಕಟುವಾಗಿ ಪ್ರಶ್ನಿಸಿದರು.
"ಜನಧ್ವನಿ ಪಾದಯಾತ್ರೆ ಎಲ್ಲ ಜಿಲ್ಲೆಗಳಲ್ಲಿ ಮುಂದುವರಿಯಲಿದೆ. 2023ರ ಚುನಾವಣೆಯಲ್ಲಿ ಮತ್ತೆ ವಿಧಾನಸೌಧದಲ್ಲಿ ಕಾಂಗ್ರೆಸ್ ಬಾವುಟ ಹಾರಾಡಲಿದೆ ಎನ್ನುವ ನಂಬಿಕೆ ನನಗಿದೆ" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ ಕುಮಾರ ಸೊರಕೆ, ಅಭಯಚಂದ್ರ ಜೈನ್, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಎಂ.ಎ.ಗಫೂರ್, ಮಿಥುನ್ ರೈ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು, ರಾಜು ಪೂಜಾರಿ, ಮದನ್ ಕುಮಾರ್, ಪ್ರದೀಪ್ ಕುಮಾರ ಶೆಟ್ಟಿ ಗುಡಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.