ಮಂಗಳೂರು, ಫೆ.27 (DaijiworldNews/MB) : ''ಮಾಜಿ ಮುಖ್ಯಮಂತ್ರಿ (ಸಿಎಂ) ಹೆಚ್ ಡಿ ಕುಮಾರಸ್ವಾಮಿ ಸಿಂಗಾಪುರ ಮತ್ತು ಮಲೇಷ್ಯಾದಲ್ಲಿ ಜೂಜು ಆಡುತ್ತಿದ್ದರು'' ಎಂದು ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ ಅವರು ಶನಿವಾರ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನನ್ನ ಬಳಿ ಫೋಟೋಗಳಿವೆ. ಅಗತ್ಯ ಬಿದ್ದಲ್ಲಿ ನಾನು ಅದನ್ನು ಬಿಡುಗಡೆ ಮಾಡುತ್ತೇನೆ" ಎಂದು ಹೇಳಿದರು.
"ಕುಮಾರಸ್ವಾಮಿ ಒಬ್ಬ ಅವಕಾಶವಾದಿ ರಾಜಕಾರಣಿ. ಯಾವ ಪಕ್ಷದೊಂದಿಗೆ ಬೇಕಾದರೂ ಅವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಅವರು ಜೋಕರ್ನಂತೆ ಇದ್ದಾರೆ. ಅವರಿಗೆ ಒಂದು ನಿರ್ದಿಷ್ಟ ಸಿದ್ದಾಂತವೆಂಬುದಿಲ್ಲ" ಎಂದು ಟೀಕಿಸಿದರು.
''ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಸರ್ಕಾರದಲ್ಲಿ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಪ್ರಜಾಪ್ರಭುತ್ವದ ರೀತಿಯಲ್ಲಿ ಮುಖ್ಯಸ್ಥರನ್ನು ನೇಮಿಸುವಲ್ಲಿ ಅವರು ವಿಫಲರಾದರು. ಈಗ ನಿಗಮಗಳನ್ನು ಮಾಡುವಾಗ ಅವರಿಗೆ ಸಹಿಸಲಾಗುತ್ತಿಲ್ಲ. ಇದು ಅವರ ದೌರ್ಬಲ್ಯ. ಅವರು ಸಿಎಂ ಆಗಿದ್ದಾಗ ತಮ್ಮ ಕ್ಷೇತ್ರಕ್ಕೂ ಭೇಟಿ ನೀಡುವಲ್ಲಿ ವಿಫಲರಾದರು. ಆದರೆ ಈಗ, ಅವರು ಸಣ್ಣ ಕಾರ್ಯಕ್ರಮಗಳಿಗೆ ಸಹ ಸಮಯವನ್ನು ನೀಡುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
''ಹಳೆಯ ಮೈಸೂರು ಪ್ರದೇಶದಲ್ಲಿ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಂಡು ಹಲವಾರು ಯುವಕರು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ'' ಎಂದು ಹೇಳಿದ ಯೋಗೇಶ್ವರ ಅವರು, ''ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಕುಮಾರಸ್ವಾಮಿ ಅವರು 'ಘಟಬಂಧನ' ರಚಿಸಿದ್ದಾರೆ ಹಾಗೂ ಎಡ ಸಿದ್ಧಾಂತವನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಅವರಿಗೆ ಬೆಂಬಲ ನೀಡುವುದು ನಮ್ಮ ಸಿದ್ಧಾಂತಕ್ಕೆ ಸರಿಹೊಂದುವುದಿಲ್ಲ. ಅವರು ನಂಬಿಕೆಗೆ ಅರ್ಹರಲ್ಲ" ಎಂದರು.
ಇನ್ನು ಇದೇ ವೇಳೆ ಯೋಗೇಶ್ವರ ಅವರನ್ನು ಹೆಚ್ಡಿಕೆ ಬಚ್ಚಾ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ''ಇಪ್ಪತ್ತು ವರ್ಷಗಳ ಹಿಂದೆ, ಕುಮಾರಸ್ವಾಮಿ ರಾಮನಗರಕ್ಕೆ ಚಪ್ಪಲಿಯಲ್ಲಿ ಬಂದಾಗ ಆಗ ಅವರು 'ಬಚ್ಚಾ' ಆಗಿದ್ದರು'' ಎಂದು ತಿರುಗೇಟು ನೀಡಿದರು.