ಮಂಗಳೂರು, ಫೆ.27 (DaijiworldNews/MB) : ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇರುವ ಡಿಸೇಲ್ ಬೆಲೆಯಿಂದಾಗಿ ಕರಾವಳಿ ಕರ್ನಾಟಕದ ಮೀನುಗಾರರು ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಅವರಿಗೆ ಲಭಿಸಬೇಕಾಗಿದ್ದು ಡಿಸೇಲ್ ಸಬ್ಸಿಡಿಯೂ ಅವರಿಗೆ ದೊರಕದೆ ಮತ್ತಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸರ್ಕಾರವು ಮೀನುಗಾರಿಕೆ ಉದ್ಯಮಕ್ಕೆ ನೀಡಬೇಕಾಗಿರುವ ಕಳೆದ ನಾಲ್ಕು ತಿಂಗಳ ಸಬ್ಸಿಡಿ ಇನ್ನೂ ಕೂಡಾ ಮೀನುಗಾರರ ಕೈಗೆ ಸೇರಿಲ್ಲ. ಸರ್ಕಾರವು ಮೀನುಗಾರರಿಗೆ ನೀಡಬೇಕಾದ ಸಬ್ಸಿಡಿ ದರವು 25 ಕೋಟಿ ರೂ.ಗೆ ಏರಿದೆ.
ರಾಜ್ಯ ಸರ್ಕಾರವು ಡೀಸೆಲ್ ಬೆಲೆಯ ಮಾರಾಟ ತೆರಿಗೆ ಭಾಗವನ್ನು ಸಬ್ಸಿಡಿ ರೂಪದಲ್ಲಿ ಮರುಪಾವತಿ ಮಾಡುತ್ತಿತ್ತು. ತಿಂಗಳಿಗೆ ದೊಡ್ಡ ಮೀನುಗಾರಿಕಾ ದೋಣಿಗೆ 9,000 ಲೀಟರ್ವರೆಗೆ ಸಬ್ಸಿಡಿ ದೊರೆಯುತ್ತದೆ. ಸಾವಿರಾರು ದೋಣಿಗಳು ಆ ಸೌಲಭ್ಯವನ್ನು ಪಡೆಯುತ್ತಿವೆ. ಸರ್ಕಾರವು ಪ್ರತಿ ತಿಂಗಳು ಈ ಮೊತ್ತವನ್ನು ಮೀನುಗಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿತ್ತು. ಸರ್ಕಾರ ಅಕ್ಟೋಬರ್ವರೆಗೆ ಸಬ್ಸಿಡಿ ಮೊತ್ತವನ್ನು ಮೀನುಗಾರರಿಗೆ ನೀಡಿದ್ದು ಆ ಬಳಿಕ ನವೆಂಬರ್ನಿಂದ ಈವರೆಗೂ ಮೀನುಗಾರರಿಗೆ ಸರ್ಕಾರ ಸಬ್ಸಿಡಿ ನೀಡದ ಕಾರಣ ಡಿಸೇಲ್ ಬೆಲೆಯಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಮೀನುಗಾರರು ಸಬ್ಸಿಡಿಗಾಗಿ ಕಾಯುತ್ತಿದ್ದಾರೆ.
ಸುಮಾರು 75 ಕೋಟಿ ರೂ.ಗಳನ್ನು ಕರಾವಳಿಯ ಮೀನುಗಾರರಿಗೆ ಸಬ್ಸಿಡಿ ರೂಪದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮೀನುಗಾರಿಕೆ ಇಲಾಖೆ ಹೇಳಿಕೊಂಡಿದೆ. ಈ ಹಿಂದೆ ಎಂಟು ರೂಪಾಯಿ ಇದ್ದ ಮಾರಾಟ ತೆರಿಗೆ ಈಗ 14 ರೂ.ಗೆ ಏರಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣದಿಂದಾಗಿ ಇಲಾಖೆಯು ಆರ್ಥಿಕ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆ ಮೀನುಗಾರರಿಗೆ ಸಬ್ಸಿಡಿ ದೊರೆತಿಲ್ಲ ಎಂದು ಹೇಳಲಾಗಿದೆ. ಆದರೆ ನೂತನ ಮೀನುಗಾರಿಕಾ ಸಚಿವರಾದ ಅಂಗಾರರವರು ಸಬ್ಸಿಡಿ ಬಿಡುಗಡೆ ಮಾಡುವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನು ಮೀನುಗಾರರ ಮುಖಂಡ ಮೋಹನ್ ಬೆಂಗ್ರೆ ಅವರ ಪ್ರಕಾರ, ಪ್ರತಿ ಬಾರಿ ಮೀನುಗಾರಿಕೆಗೆ ತೆರಳುವಾಗ ಬೋಟ್ಗೆ 6,000 ರಿಂದ 6,500 ಲೀಟರ್ ಡೀಸೆಲ್ ಅಗತ್ಯವಿದೆ. ಕಳೆದ ವರ್ಷ ಈ ಸಮಯದಲ್ಲಿ ಸುಮಾರು 68 ರೂ. ಇದ್ದ ಡಿಸೇಲ್ ದರ ಈಗ 80 ರೂ.ಗೆ ಏರಿದೆ. ಇದರಿಂದಾಗಿ ಮೀನುಗಾರಿಕೆ ಚಟುವಟಿಕೆಯನ್ನು ಕೈಗೊಳ್ಳಲು ಕಷ್ಟಕರವಾಗಿದೆ. ಹಗ್ಗ, ಕಾರ್ಮಿಕರ ಸಂಬಳ, ಬಲೆಗಳು, ಉಕ್ಕಿನ ವಸ್ತುಗಳು, ಐಸ್ ಮುಂತಾದ ಇತರ ವಸ್ತುಗಳ ಬೆಲೆ ಸಹ ಅಧಿಕವಾಗುತ್ತಿರುವ ಹಿನ್ನೆಲೆ ಮೀನುಗಾರಿಕೆಗೆ ಭಾರೀ ಕಷ್ಟ ಉಂಟಾಗುತ್ತಿದೆ. 70 ಪ್ರತಿಶತದಷ್ಟು ಆಳ ಸಮುದ್ರದ ದೋಣಿಗಳು ಈಗಾಗಲೇ ಲಂಗರು ಹಾಕಿದೆ. ಕೆಲವೇ ದೋಣಿಗಳು ಮಾತ್ರ ಮೀನುಗಾರಿಕೆ ನಡೆಸುತ್ತಿದೆ ಎಂದು ಅವರು ಹೇಳಿದರು.
ಬಾಕಿ ಇರುವ ಡೀಸೆಲ್ ಸಬ್ಸಿಡಿ ವಿಷಯದ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡಲಾಗುವುದು ಎಂದು ಮೀನುಗಾರಿಕೆ ಉಪನಿರ್ದೇಶಕ ಪಾರ್ಶ್ವನಾಥ್ ಹೇಳಿದ್ದಾರೆ.