ಮಂಗಳೂರು, ಫೆ.27 (DaijiworldNews/PY): ವಂಚನೆ ಆರೋಪ ಪ್ರಕರಣದ ಆರೋಪಿಗಳ ಕಾರನ್ನು ಸಿಸಿಬಿ ಪೊಲೀಸರು ಮಾರಾಟ ಮಾಡಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ತಂಡ ಪ್ರಕರಣದ ತನಿಖೆಗಾಗಿ ಮಂಗಳೂರಿಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.
ತನಿಖೆಯನ್ನು ಸಿಐಡಿ ಎಸ್ಪಿ ರೋಹಿಣಿ ಕಟ್ಟೋಚ್ ಅವರ ನೇತೃತ್ವದ ತಂಡ ಪ್ರಾರಂಭಿಸಿದ್ದು, ವರದಿಯನ್ನು ಸಿಐಡಿ ಡಿಜಿಗೆ ಸಲ್ಲಿಸಿದೆ. ಬಳಿಕ ಈ ವರದಿಯು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಕೆಯಾಗಲಿದೆ.
ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಈ ಪ್ರಕರಣದ ಪ್ರಾಥಮಿಕ ಹಂತದ ತನಿಖೆಯನ್ನು ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರು ನಡೆಸಿದ್ದು, ಆ ವರದಿಯನ್ನು ಕಮಿಷನರ್ಗೆ ಸಲ್ಲಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಈ ಹಿಂದಿನ ಪಿಎಸ್ಐ ಕಬ್ಬಳ್ ರಾಜ್, ನಾರ್ಕೋಟಿಕ್ ಠಾಣೆ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಬಿಐಯ ಆಶಿತ್ ಡಿಸೋಜ, ರಾಜ ಹಾಗೂ ಬ್ರೋಕರ್ ದಿವ್ಯದರ್ಶನ್ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಹಣ ದ್ವಿಗುಣಗೊಳಿಸುವ ವ್ಯವಹಾರ ನಡೆಸುತ್ತಿದ್ದ ಸಂಸ್ಥೆಗೆ ಸೇರಿದ ಕಾರು ಇದಾಗಿದೆ. ಇದರಲ್ಲಿ ಭಾಗಿಯಾಗಿದ್ದವರನ್ನು ಹಾಗೂ ಮೂರು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.