Karavali
ಮಂಗಳೂರು: ಮಲ್ಪೆಯ ಮೂರನೇ ಬಂದರಿನಲ್ಲಿರುವ ಕೋಟಿ ವೆಚ್ಚದ ಸ್ಲಿಪ್-ವೇ ಇದೀಗ ಕಸದ ಕೊಂಪೆ
- Wed, Feb 24 2021 05:27:23 PM
-
ಮಂಗಳೂರು, ಫೆ.24 (DaijiworldNews/PY): ಮಲ್ಪೆ ಬಂದರಿನ 3ನೇ ಹಂತದ ಬಾಪುತೋಟದಲ್ಲಿ ನಿರ್ಮಿಸಿದ ಸ್ಲಿಪ್ ವೇಯ ಕಳೆದ ಒಂಭತ್ತು ವರ್ಷದಿಂದ ಕಸದ ಕೊಂಪೆಯಾಗಿ ಹುಲ್ಲು ತುಂಬಿ ಹೋಗಿದೆ. ಅದರ ಸುತ್ತಮುತ್ತ ಯಾವುದೇ ನಿರ್ವಹಣೆಯಿಲ್ಲದೆ ಕೊಳೆತು ನಾರುತ್ತಿದೆ.
ಮೀನುಗಾರಿಕಾ ಬಂದರಿನ ಮೊದಲನೇ ಹಂತ ನಿರ್ಮಾಣವಾಗುವಾಗ ಅತೀ ಪ್ರಾಮುಖ್ಯವಾದ ಮೀನುಗಾರಿಕಾ ಯಾಂತ್ರಿಕ ದೋಣಿಗಳನ್ನು ಮೇಲೆಳೆದು ದುರಸ್ಥಿಗೊಳಿಸುವುದಕ್ಕೋಸ್ಕರವೇ ಸ್ಲಿಪ್ವೇಯನ್ನು ಅಳವಡಿಸಲಾಗಿತ್ತು. ಆದರೆ, ಈ ಸ್ಲಿಪ್ವೇಯು ಕಾರಣಾಂತರದಿಂದ ಖಾಸಗಿಯವರ (ಟೆಗಾ ಶಿಪ್ಯಾರ್ಡ್ನ) ಪಾಲಾಗಿ ವಾಣಿಜ್ಯ ಹಡಗು ನಿರ್ಮಾಣ ಮಾಡುವ ಸಂಸ್ಥೆಯಾಗಿ ಪರಿವರ್ತನೆಗೊಂಡಿದೆ. ಇದರಿಂದ ಮೀನುಗಾರಿಕ ದೋಣಿಗಳಿಗೆ ಯಾವೊಂದು ಪ್ರಯೋಜನವಾಗದೇ ಅನಾನುಕೂಲವೇ ಹೆಚ್ಚಾದಾಗ ಮೀನುಗಾರರರು ಇದನ್ನು ಪ್ರತಿಭಟಿಸಿ 2005 ಮತ್ತು 2008ರಲ್ಲಿ ಬೃಹತ್ ಹೋರಾಟವನ್ನು ಮಾಡಿರುದ್ದರು.
ಈ ಹಿಂದೆ 2 ಸಲ ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ಸಭೆ ನಡೆಸಿ ಮೀನುಗಾರರಿಗೆ ಪ್ರಯೋಜನವಾಗುವ ಪ್ರತ್ಯೇಕ ಸ್ಲಿಪ್ವೇಯನ್ನು ಟೆಲ್ಕಾಶಿಪ್ ಯಾರ್ಡ್ನ ಸಹಯೋಗದಲ್ಲಿ ನಿರ್ಮಿಸಿಕೊಡುವಂತೆ ನಿರ್ಣಯಿಸಲಾಗಿತ್ತು. ಅದೇ ಪ್ರಕಾರ ಟೆಗಾ ಶಿಪ್ ಯಾರ್ಡ್ನ ಸಹಯೋಗದೊಂದಿಗೆ ಮಲ್ಪೆ ಮೀನುಗಾರಿಕಾ ಬಂದರಿನ ಬಾಪುತೋಟದ ಮೂರನೆ ಹಂತದ ಜಾಗದಲ್ಲಿ ಸ್ಲಿಪ್ವೇ ನಿರ್ಮಾಣವಾಗಿದ್ದು, ಈ ಸ್ಲಿಪ್ವೇಯ ನಿರ್ವಹಣೆಯನ್ನು ಸಂಘ ಸಂಸ್ಥೆಗಳು, ಉಡುಪಿ ಜಿಲ್ಲಾಧಿಕಾರಿ, ಉಡುಪಿ ಶಾಸಕರು ಮತ್ತು ಎಲ್ಲಾ ಅಧಿಕಾರಿಗಳ ಸಮಕ್ಷಮದಲ್ಲಿ ನಿರ್ಣಯವಾಗಿತ್ತು.
ಸ್ಲಿಪ್ವೇ ನಿರ್ಮಾಣದ ಬಗ್ಗೆ ಮಲ್ಪೆ ಮೀನುಗಾರರ ಸಂಘವು ಹಿಂದಿನಿಂದಲೂ ಹೋರಾಟವನ್ನು ಮಾಡುತ್ತಿದ್ದು, ಈಗ ಕಾಮಗಾರಿಯು ಪೂರ್ಣಗೊಂಡು ಸುಮಾರು 6 ವರ್ಷಗಳಾಗಿವೆ. ಇದರ ಪ್ರಯೋಜನ ಮೀನುಗಾರರಿಗೆ ಸಿಗದೆ ನಾಯಿಗಳು ವಾಸಿಸುವ ಸ್ಥಳವಾಗಿದೆ. ಅಷ್ಟು ದೊಡ್ಡ ಜಾಗ ಇದೀಗ ಹುಲ್ಲು ತುಂಬಿ, ಸರಳು ತುಕ್ಕು ಹಿಡಿದು ಹೋಗಿವೆ. ಈಗ ಈ ಸ್ಲಿಪ್ವೇಯೂ ಸಂಪೂರ್ಣ ತುಕ್ಕು ಹಿಡಿದು ಬೋಟ್ ಮೇಲೆ ಎಳೆಯುವ ಸ್ಥಿತಿಯಲ್ಲಿ ಇಲ್ಲ. ಆದರಿಂದ ಇರುವ ಸ್ಲಿಪ್ವೇಯನ್ನು ದುರಸ್ಥಿಗೊಳಿಸಿ ಅಧಿಕ ಈಗ ಬೋಟ್ಗಳು ಇರುವ ಗುಜರಾತ್ ರಾಜ್ಯದ ಬೇರಾವಲ್ ಬಂದರು ಮತ್ತು ಕೇರಳ ರಾಜ್ಯದ ಕೊಚ್ಚಿಯಲ್ಲಿ ಯಾವ ರೀತಿ ಬೋಟ್ ಮೇಲೆ ಎಳೆದು ಕೆಳಗೆ ಜಾರಿಸಲು ಶುಲ್ಕ ವಸೂಲಾತಿಯಲ್ಲಿ ಸರಕಾರಕ್ಕೆ ಯಾವ ರೀತಿ ಶುಲ್ಕ ಪಾವತಿ ಮಾಡುತ್ತಿದ್ದರೂ ಅದೇ ರೀತಿ ಸರಕಾರಕ್ಕೆ ಶುಲ್ಕ ಪಾವತಿಸಲು ಬದ್ದರಾಗಿರುತ್ತೇವೆ. ಮೀನುಗಾರರ ಹಿತದೃಷ್ಟಿಯಿಂದ ಸ್ಲಿಪ್ವೇಯನ್ನು ಮೀನುಗಾರರ ಸಂಘಕ್ಕೆ ನೀಡಿದಲ್ಲಿ ಕಡಿಮೆ ದರದಲ್ಲಿ ಬೋಟಿನವರಿಂದ ಶುಲ್ಕ ವಸೂಲಾತಿ ಮಾಡಿ ಬೋಟಿನ ಮಾಲಕರಿಗೆ ಒಳ್ಳೆಯ ಸೌಲಭ್ಯ ಸಿಗುವಂತಾಗಲೂ ಸ್ಲಿಪ್ ವೇಯ ನಿರ್ವಹಣೆಯನ್ನು ಮಲ್ಪೆ ಮೀನುಗಾರರ ಸಂಘಕ್ಕೆ ಸರಕಾರದ ಹಂತದಲ್ಲಿ ವಿಶೇಷ ಪ್ರಕರಣ ಎಂದು ಪರಿಗಣಿಸಿ ತಾವೂ ಮೀನುಗಾರರ ಹಿತದೃಷ್ಟಿಯಿಂದ ಸ್ಲಿಪ್ ವೇ ಯನ್ನು ಮಲ್ಪೆ ಮೀನುಗಾರರ ಸಂಘಕ್ಕೆ ನೀಡಬೇಕು ಎಂದು ಸರಕಾರಕ್ಕೆ ಮನವಿಯನ್ನು ಮಾಡಲಾಗಿದೆ.
2008 ರಲ್ಲಿ ಬಂದರಿನ ಒಳಗೆ ಶಿಪ್ ಯಾರ್ಡ್ ನಿರ್ಮಿಸಲು ಮೀನುಗಾರಿಕೆಗೆ ಮೀಸಲಿಟ್ಟ ಜಾಗ ಅದು. ತದ ನಂತರ ಸರ್ಕಾರದಿಂದ 30 ವರ್ಷಗಳ ಕಾಲ ಮಾನ್ಯತೆ ಪಡೆದು ಕೆಲಸ ಆರಂಭಿಸುವ ಮೀನುಗಾರರೆಲ್ಲರೂ ಚಿಂತನೆ ನಡೆಸಿ ಟೆಬ್ಮಾ ಶಿಂಪ್ ಯಾರ್ಡ್ 2008 ರಲ್ಲಿ ಆರಂಭಗೊಂಡಿತು. 2009ರಲ್ಲಿ ಯಡಿಯೂರಪ್ಪ ಮುಖ್ಯ ಮಂತ್ರಿ ಆಗಿದ್ದ ಸಮಯದಲ್ಲಿ ದೊಡ್ಡ ಮಟ್ಟದ ಸಭೆ ಏರ್ಪಡಿಸಲಾಗಿತ್ತು. ಆಗ ಟೆಬ್ಮಾ ಶಿಪ್ ಕೊಟ್ಟಂತಹ ಅವಧಿಯನ್ನು ವಿಸ್ತರಿಸಬಾರದು. 15 ವರ್ಷಕ್ಕೆ ಮೊಟಕುಗೊಳಿಸಬೇಕು ಎನ್ನುವ ಬೇಡಿಕೆ ಇತ್ತು.
ಸರಕಾರದ ನಿರ್ಧಾರದಂತೆ ಟೆಬ್ಮಾ ಶಿಪ್ಯಾರ್ಡ್ 75 ಲಕ್ಷ.ರೂ. ನಿರಕು ಠೇವಣಿ ಇಟ್ಟ ಮೇಲೇ ಜಿಲ್ಲಾಧಿಕಾರಿಯವರ ಷರತ್ತಿನ ಮೇರೆಗೆ ಅದರಲ್ಲಿ ಬಂದಂತಹ ಬಡ್ಡಿಯನ್ನು ಟೆಬ್ಮಾ ಶಿಪ್ ಯಾರ್ಡ್ನ ಬಾಬುತೋಟದಲ್ಲಿ 1 ಕೋಟಿ.ರೂ. ವೆಚ್ಚದ ಮೀನುಗಾರರ ಹೋರಾಟದ ಫಲವಾಗಿ ಸಿಕ್ಕಿತು. ಕಳೆದ ಏಳು ವರ್ಷದಿಂದ ಅದು ನೆನೆಗುದಿಗೆ ಬಿದ್ದಿದೆ. ಈಗ ಮಲ್ಪೆ ಮೀನುಗಾರ ಸಂಘದವರು ಸ್ಲಿಪ್ ವೇ ಅನ್ನು ತಮ್ಮ ನಿರ್ವಹಣೆಗೆ ಕೊಡಬೇಕು ಎನ್ನುವ ಆಗ್ರಹವನ್ನು ಮಾಡಿದ್ದಾರೆ. ಅಲ್ಲದೆ, ಇತ್ತೀಚೆಗೆ, ಇದನ್ನ ಮೀನುಗಾರರ ಸಂಘಕ್ಕೆ ಏಕೆ ಕೊಡಬೇಕೆನ್ನುವ ವಿಚಾರ ಮೀನುಗಾರ ಮುಖಂಡರೊಂದಿಗೆ ಚರ್ಚೆ ಕೂಡ ಆಗಿದೆ. ಪ್ರಸ್ತುತ ಸ್ಲಿಪ್-ವೇಯನ್ನು ನಿರ್ವಹಣೆ ಆಗದೆ, ಬೋಟ್ನ ಮಾಲಕರು ದುಪ್ಪಟ್ಟು ಹಣತೆತ್ತು ಬೋಟನ್ನು ಮೇಲೆತ್ತುತ್ತಿದ್ದಾರೆ.
"ಸ್ಲಿಪ್-ವೇ ಸರಿಯಾದರೆ ಅದರಿಂದ ಬೋಟ್ ಮಾಲಕರು ಸ್ವಲ್ಪ ಮಟ್ಟಿನ ಶ್ರಮ ಕಡಿಮೆಯಾಗುತ್ತದೆ. ಖಾಸಗಿಗೆ ಭರಿಸುವ ಅರ್ಧದಷ್ಟು ಕಡಿಮೆ ವೆಚ್ಚವನ್ನು ನಾವು ವಸೂಲಾತಿ ಮಾಡಿ, ಅದರ ನಿರ್ವಹಣೆಗೆ ಬೋಟ್ ಮಾಲಕರೆ ಜವಾಬ್ದಾರಿ ಎಂದು ಡಿಸಿಯವರ ನೇತೃತ್ವದ ಸಭೆಯಲ್ಲಿ ಹೇಳಿಕೆ ಕೊಟ್ಟಿದ್ದೇವೆ. ಈ ಬಗ್ಗೆ ಜಿಲ್ಲಾಧಿಕಾರಿಯವರು ಮೀನುಗಾರ ಸಂಘಕ್ಕೆ ಹಸ್ತಾಂತರಿಸುವ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಇಲಾಖೆಯನ್ನು ವಿಚಾರಿಸಿದಾಗ, ಅದಕ್ಕೆ ಟೆಂಡರ್ ಕರೆದು, ಬೇರೆಯವರ ಉಸ್ತುವಾರಿಗೆ ಕೊಡುವ ಪ್ರಸ್ತಾಪನ್ನು ಸರಕಾರದ ಮುಂದಿಟ್ಟಿದೆ. ಆದರೆ ಯಾವುದೇ ಕಾರಣಕ್ಕೂ ಟೆಬ್ಮಾ ಶಿಪ್ ಯಾರ್ಡ್ ಟೆಂಡರನ್ನು ಕರೆದು ಖಾಸಗಿ ಕಂಪನಿ ಅಥವಾ ಖಾಸಗಿ ವ್ಯಕ್ತಿಗಳ ನಿರ್ವಹಣೆಗೆ ಕೊಡುವ ಬಗ್ಗೆ ನಮ್ಮ ವಿರೋಧವಿದೆ, ಅಗತ್ಯ ಬಿದ್ದಲ್ಲಿ ಹೋರಾಟವನ್ನು ನಡೆಸಲು ತಯಾರಿದ್ದೇವೆ" ಎನ್ನುತ್ತಾರೆ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ಕೃಷ್ಣ ಸುವರ್ಣ.
ಅದೇ ಇದ್ದರೂ ಕಳೆದ ಒಂಭತ್ತು ವರ್ಷಗಳು ಅನೇಕ ಮೀನುಗಾರಿಕಾ ಸಚಿವರು ಭೇಟಿ ಕೊಡುತ್ತಲೇ ಇದ್ದಾರೆ. ಭರವಸೆ ಕೊಡುತ್ತಲ್ಲೇ ಇದ್ದಾರೆ. ಆದರೆ, ಎಲ್ಲಿಯೂ ನಿರ್ವಹಣೆ ಬಗ್ಗೆ ಚರ್ಚೆಯೂ ಆಗಿಲ್ಲ ನಿರ್ಣಯವನ್ನು ತೆಗೆದುಕೊಂಡಿಲ್ಲ. ಮೂರನೇ ಹಂತದ ಬಂದರಿನಲ್ಲಿರುವ ಬೋಟ್ ಮಾಲಕರ ಅಗತ್ಯಕ್ಕೆ ಸಿಗದೆ ಕಸದ ಕೊಂಪೆಯಾಗಿರುವ ಸ್ಲಿಪ್ ವೇಯನ್ನು ಈಗ ಕೇಳುವವರೇ. ಒಂದು ರೀತಿಯಲ್ಲಿ ಸಾಂಕ್ರಾಮಿಕ ರೋಗಕ್ಕೆ ರಹದಾರಿ ಎಂದರೂ ತಪ್ಪಾಗಲಾರದು.