ಮಂಗಳೂರು, ಫೆ.22 (DaijiworldNews/MB) : ''ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆ ಆರ್ಟಿ-ಪಿಸಿಆರ್ ನೆಗೆಟಿವ್ ವರದಿಯಿಲ್ಲದೆ ಕೇರಳದಿಂದ ಕರ್ನಾಟಕಕ್ಕೆ ಜನರನ್ನು ಪ್ರವೇಶಿಸುವುದನ್ನು ನಿರ್ಬಂಧಿಸುವ ಬಗ್ಗೆ ಜಿಲ್ಲಾಡಳಿತವು ಕಾಸರಗೋಡು ಜಿಲ್ಲೆಯ ಅಧಿಕಾರಿಗಳೊಂದಿಗೆ ಜಂಟಿ ಸಭೆಯನ್ನು ನಡೆಸಬೇಕು ಎಂದು ಫೆಬ್ರವರಿ 22 ರಂದು ಶಾಸಕ ಯು.ಟಿ.ಖಾದರ್ ಹೇಳಿದ್ದು, ಅಸಮರ್ಥ ಆಡಳಿತ ಜನರನ್ನು ತೊಂದರೆಗೆ ಸಿಲುಕಿಸುತ್ತಿದೆ'' ಎಂದು ಆಡಳಿತದ ವಿರುದ್ದ ಸಿಡಿಮಿಡಿಗೊಂಡಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು, ''ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಪರಸ್ಪರ ಸಂಬಂಧ ಹೊಂದಿರುವುದರಿಂದ ಹಲವಾರು ಪ್ರಯಾಣಿಕರು ಪ್ರತಿದಿನ ನಮ್ಮ ಜಿಲ್ಲೆಗೆ ಪ್ರಯಾಣಿಸುತ್ತಾರೆ. ಆದ್ದರಿಂದ, ಇಂತಹ ಗೊಂದಲಗಳನ್ನು ತಪ್ಪಿಸಲು, ಜಿಲ್ಲಾ ಆಡಳಿತವು ಕಾಸರಗೋಡು ಜಿಲ್ಲಾಡಳಿತದೊಂದಿಗೆ ಜಂಟಿ ಸಭೆ ನಡೆಸಿ ಮಂಜೇಶ್ವರ, ಕುಂಬ್ಳೆ ಮತ್ತು ಕಾಸರಗೋಡಿನಿಂದ ಬರುವ ಪ್ರಯಾಣಿಕರಿಗೆ ವಿನಾಯಿತಿ ನೀಡಬೇಕು. ಭೂಪಟದ ಪ್ರಕಾರ ಎರಡೂ ಜಿಲ್ಲೆಗಳು ಪ್ರತ್ಯೇಕವಾಗಿರಬಹುದು ಆದರೆ ಪರಸ್ಪರ ಸಂಬಂಧ ಹೊಂದಿವೆ. ಮಂಜೇಶ್ವರ, ಕುಂಬ್ಳೆ ಮತ್ತು ಕಾಸರಗೋಡು ಕೆಲವು ಭಾಗಗಳಿಂದ ಹಲವಾರು ಜನರು ನಗರಕ್ಕೆ ಬರುತ್ತಾರೆ'' ಎಂದು ಹೇಳಿದರು.
''ಸಾಸ್ತಾನ್, ಹೆಜಮಾಡಿ, ಸುರತ್ಕಲ್ ಮತ್ತು ತಲಪಾಡಿ ಟೋಲ್ ಗೇಟ್ ಗೊಂದಲಗಳ ಕುರಿತು ಮಾತನಾಡಿದ ಅವರು, ಈ ಗೊಂದಲವನ್ನು ಕೊನೆಗೊಳಿಸಲು ಆಡಳಿತವು ತಾರ್ಕಿಕ ತೀರ್ಮಾನಕ್ಕೆ ಬರಬೇಕು. ಸಾಸ್ತಾನ್ ಟೋಲ್ಗೇಟ್ ಗೊಂದಲವನ್ನು ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ತಲಪಾಡಿಯಲ್ಲಿ ಗೊಂದಲವನ್ನು ಪರಿಹರಿಸುತ್ತಾರೆಯೇ?'' ಎಂದು ಪ್ರಶ್ನಿಸಿದ ಖಾದರ್, ''ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅವರು ಬಸ್ಗಳಿಗೆ ಟೋಲ್ ಶುಲ್ಕವನ್ನು ಕಡಿಮೆ ಮಾಡಬೇಕು ಅಥವಾ ಖಾಸಗಿ ಬಸ್ಗಳು ಟೋಲ್ ಮೂಲಕ ತೆರಳಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಖಾಸಗಿ ಬಸ್ಸುಗಳು ಟೋಲ್ ಗೇಟ್ ಮೂಲಕ ಹೋಗಲು ಸಿದ್ಧವಿಲ್ಲದಿದ್ದರೆ, ಆಡಳಿತವು ಶಿಸ್ತು ಕ್ರಮ ಕೈಗೊಳ್ಳಬೇಕು. ಅವರ ಪರವಾನಗಿಗಳನ್ನು ರದ್ದುಗೊಳಿಸಬೇಕು. ಇದರಿಂದಾಗಿ ಜನರು 500 ಮೀಟರ್ಗಿಂತ ಹೆಚ್ಚು ದೂರ ನಡೆಯುವುದು ತಪ್ಪುತ್ತದೆ. ಆಡಳಿತದ ಅಸಮರ್ಥತೆಯು ಜನರ ಸಂಕಷ್ಟಕ್ಕೆ ಮುಖ್ಯ ಕಾರಣವಾಗಿದೆ'' ಎಂದು ಆರೋಪಿಸಿದರು.
"ಪೆಟ್ರೋಲಿಯಂ ಮತ್ತು ಡೀಸೆಲ್ ಬೆಲೆಗಳನ್ನು ಸರ್ಕಾರ ಹೆಚ್ಚಿಸಿದ್ದರಿಂದ ಕೆಲವು ಮೀನುಗಾರರು ತಮ್ಮ ದೋಣಿಗಳನ್ನು ಲಂಗರು ಹಾಕಿದ್ದಾರೆ. ಮೀನುಗಾರರಿಗೆ ಸರ್ಕಾರ ಯಾವುದೇ ಸಬ್ಸಿಡಿ ಬಿಡುಗಡೆ ಮಾಡಿಲ್ಲ. ಛತ್ತೀಸ್ಘಡ ಸರ್ಕಾರ ಮಾಡಿದಂತೆ ರಾಜ್ಯ ಸರ್ಕಾರವು ಪೆಟ್ರೋಲಿಯಂ ಮತ್ತು ಡೀಸೆಲ್ಗಳ ಬೆಲೆಯನ್ನು ಏಕೆ ಕಡಿಮೆ ಮಾಡಲು ಸಾಧ್ಯವಿಲ್ಲ?" ಎಂದು ಖಾದರ್ ಪ್ರಶ್ನಿಸಿದರು.
ಪಿಎಫ್ಐ ನಾಯಕರು ಸ್ವಾತಂತ್ರ್ಯ ಮೆರವಣಿಗೆ ಮತ್ತು ರಾಮ ಮಂದಿರ ಕುರಿತು ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಖಾದರ್ ಅವರು, ''ಈ ಸೂಕ್ಷ್ಮ ಜಿಲ್ಲೆಯಲ್ಲಿ ಮೆರವಣಿಗೆ ನಡೆಸಲು ಅವರಿಗೆ ಯಾರು ಅನುಮತಿ ನೀಡಿದರು. ಸರ್ಕಾರ ಅನುಮತಿ ನೀಡಿದೆ ಮತ್ತು ಅದು ಎಲ್ಲದಕ್ಕೂ ಕಾರಣವಾಗಿದೆ'' ಎಂದು ದೂರಿದರು.
ಖಾದರ್ ಅವರ ಸಹೋದರ ಯು.ಟಿ.ಇಫ್ತಿಕರ್ ಅವರ ಮನೆಗೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯ ಬಗ್ಗೆ ಖಾದರ್ ಮಾತನಾಡಿ, "ಐಟಿ ರಾಜ್ಯದ ಹಲವಾರು ವೈದ್ಯಕೀಯ ಕಾಲೇಜುಗಳ ಮೇಲೆ ದಾಳಿ ನಡೆಸಿದೆ. ಹಲವಾರು ದಶಕಗಳಿಂದ ನಮ್ಮ ಕುಟುಂಬವು ಹಲವಾರು ವೈದ್ಯಕೀಯ ಕಾಲೇಜುಗಳ ವ್ಯಕ್ತಿಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇಫ್ತಿಕರ್ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಆರೋಗ್ಯ ವಿಜ್ಞಾನದ ಸದಸ್ಯ. ಐಟಿ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ನಾವು ಸಂಪೂರ್ಣ ಸಹಕಾರವನ್ನು ನೀಡಿದ್ದೇವೆ" ಎಂದು ಹೇಳಿದರು.
''ಜನರು ಸೂಕ್ಷ್ಮ ವಿಚಾರಗಳಿಗೆ ಪ್ರಾಮುಖ್ಯತೆ ನೀಡುವ ಬದಲು ವಾಸ್ತವದಲ್ಲಿ ನಡೆಯುತ್ತಿರುವ ವಿಷಯಗಳಿಗೆ ಪ್ರಾಮುಖ್ಯತೆ ನೀಡಬೇಕು'' ಎಂದರು.