ಉಡುಪಿ, ಫೆ.22 (DaijiworldNews/PY): "ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಾತಿ ಜ್ವಾಲೆಯನ್ನು ಹುಟ್ಟು ಹಾಕಿದರು. ಉಡುಪಿ- ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದರು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಉಡುಪಿಯಲ್ಲಿ ಆರು ದಿನದ ಜನದ್ವನಿ ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, "ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ಕೊಡುತ್ತೇವೆ. ಈಗ ಕೊಡುತ್ತಿರುವ 7 ಕೆ.ಜಿಯಲ್ಲಿ ಎರಡು ಕೆ.ಜಿ ಕಡಿತ ಮಾಡಿದ್ದಾರೆ ಬಿಜೆಪಿ ಸರಕಾರ. ಹಾಗಾಗಿ ಕೆಟ್ಟ ಭ್ರಷ್ಟ ಸರಕಾರವನ್ನು ತೆಗೆದು ಹಾಕಿ ಕಾಂಗ್ರೆಸ್ಗೆ ಮತ್ತೊಮ್ಮೆ ಅವಕಾಶ ಕೊಡಿ" ಎಂದು ಹೇಳಿದರು.
"ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜಾತಿ ಜ್ವಾಲೆಯನ್ನು ಹುಟ್ಟು ಹಾಕಿದರು. ಉಡುಪಿ- ಮಂಗಳೂರನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿದರು. ಮನುಷ್ಯ ಮನುಷ್ಯನನ್ನು ದ್ವೇಷಿಸಬಾರದು. ಪ್ರತಿಯೊಬ್ಬರನ್ನು ಪ್ರೀತಿಸಬೇಕು. ಅದು ಪ್ರಾಥಮಿಕ ಕರ್ತವ್ಯ. ಬಿಜೆಪಿಯವರು ಮಾನವರೇ ಅಲ್ಲ. ವಿಶ್ವಮಾನವರಾಗಲು ಸಾಧ್ಯವಿಲ್ಲ" ಎಂದು ವಾಗ್ದಾಳಿ ನಡೆಸಿದರು.
"ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡೋಂಗಿ ರೈತನ ಮಗ. ಹಸಿರು ಶಾಲು ಹಾಕಿಕೊಳ್ಳುವ ಯಾವುದೇ ನೈತಿಕತೆ ಇಲ್ಲ. ಹಿಂದುತ್ವ ಅಂದರೆ ಹೊಟ್ಟೆ ತುಂಬುತ್ತಾ?. ನನ್ನ ಹೆಸರಲ್ಲೇ ರಾಮ ಇದೆ. ಎಲ್ಲರೂ ಹಿಂದುಗಳು, ಭಾರತೀಯರು. ನಾವು ಮಹಾತ್ಮ ಗಾಂಧಿಯ ಹಿಂದುತ್ವ ಪಾಲನೆ ಮಾಡುತ್ತೇವೆ. ಬಿಜೆಪಿಯವರು ಸಾವರ್ಕರ್ ಹಿಂದುತ್ವ ಪಾಲನೆ ಮಾಡುತ್ತಾರೆ. ಗಾಂಧೀಜಿ ಅವರನ್ನು ಕೊಂದವರನ್ನು ಆರಾಧಿಸುತ್ತಾರೆ. ರಕ್ತಪಾತ ಮಾಡಿಸಿ ಮತ್ತೆ ಹಿಂದು ಪರವಾಗಿದ್ದೇವೆ ಅಂತ ಬಿಜೆಪಿ ಹೇಳುತ್ತಾರೆ" ಎಂದರು.
"ನಮ್ಮ ಸಂವಿಧಾನದಲ್ಲಿ ನಮ್ಮ ಧರ್ಮ ಬಗ್ಗೆ ನಿಷ್ಠೆ ಇರಬೇಕು. ಪರಧರ್ಮದ ಬಗ್ಗೆ ಸಹಿಷ್ಣುತೆ ಇರಬೇಕು. ಬಿಜೆಪಿ ಬಂದ ಮೇಲೆ ಮಧ್ಯಮ ವರ್ಗ, ಬಡವರ ಬಾಳು ದುಸ್ತರವಾಗಿದೆ" ಎಂದು ಕಿಡಿಕಾರಿದರು.
"ಪ್ರಧಾನ ಮಂತ್ರಿ ಮೋದಿಯವರ ಎದೆ ಎಷ್ಟು ಅಗಲ ಎನ್ನುವುದು ಮುಖ್ಯವಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದವನು ನಾನು, ಬಿಜೆಪಿಯ ಒಬ್ಬರೂ ದೇಶಕ್ಕಾಗಿ ಸತ್ತಿಲ್ಲ. ಇವರು ದೇಶಭಕ್ತಿ ಬಗ್ಗೆ ಹೇಳುತ್ತಾರೆ. ಜನರ ಕಷ್ಟಗಳಿಗೆ ಸ್ಪಂದಿಸುವ ಹೃದಯ ಇರಬೇಕು" ಎಂದು ಬಿಜೆಪಿ ನಾಯಕರಿಗೆ ಟಾಂಗ್ ಇಟ್ಟರು.
"ಕಾಂಗ್ರೆಸ್ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ದೇಶದಲ್ಲಿ ಅನೇಕ ಧರ್ಮ ಜಾತಿಗಳು ಇದ್ದಾವೆ. ಎಲ್ಲಾ ಜಾತಿ ಧರ್ಮಗಳನ್ನು ಸಮಾನವಾಗಿ ಕಾಣುವುದು ಜಾತ್ಯತೀತದ ಉದ್ದೇಶ" ಎಂದು ತಿಳಿಸಿದರು.