ಕಾಸರಗೋಡು, ಫೆ. 20 (DaijiworldNews/HR): "ಅಭಿವೃದ್ಧಿಯಲ್ಲಿ ಯಾವುದೇ ಜಾತಿ, ಧರ್ಮ, ರಾಜಕೀಯ ಇಲ್ಲ. ಎಲ್ಲಾ ವಲಯಗಳಲ್ಲಿ ಅಭಿವೃದ್ಧಿ ನಮ್ಮ ಗುರಿ" ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಪೈವಳಿಕೆಯ ಕೊಮ್ಮಂಗಳದಲ್ಲಿ ಸ್ಥಾಪಿಸಿರುವ 50 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿ ಮಾತನಾಡಿದ ಅವರು, "ಪರಸ್ಪರ ಸಹಕಾರ, ಅಭಿವೃದ್ಧಿಯೊಂದಿಗೆ ನಾವು ಮುಂದೆ ಸಾಗಬೇಕಿದ್ದು, ರಾಜಕೀಯ, ಭಾಷೆ, ಧರ್ಮ ಬದಿಗೊತ್ತಿ ಅಭಿವೃದ್ಧಿ ಬಗ್ಗೆ ಚಿಂತಿಸಬೇಕಿದೆ. ಕಾಲದ ಬದಲಾವಣೆ ಅನುಗುಣವಾಗಿ ಸೌರಶಕ್ತಿ ವಿದ್ಯುತ್ ಬಳಕೆ ಅನಿವಾರ್ಯವಾಗುತ್ತಿದ್ದು, ಸೌರ ವಿದ್ಯುತ್ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚು ಒತ್ತು ನೀಡಲಾಗುವುದು" ಎಂದು ಹೇಳಿದ್ದಾರೆ.
"ವಿದ್ಯುತ್ ವಲಯದಲ್ಲಿ ಕೇರಳ ಸ್ವಾವಲಂಬನೆಯತ್ತ ದಾಪುಗಾಲಿಡುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಈ ವಲಯದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಸಮಾರಂಭದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಕೇಂದ್ರ ವಿದ್ಯುತ್ ಸಚಿವ ಹರ್ದಿಪ್ ಸಿಂಗ್ ಪುರಿ, ಕೇಂದ್ರ ನಗರಾಭಿವ್ರದ್ದಿ ಸಚಿವ ಆರ್.ಕೆ ಸಿಂಗ್, ರಾಜ್ಯ ವಿದ್ಯುತ್ ಸಚಿವ ಎಂ. ಎಂ ಮಣಿ, ಮಂಜೇಶ್ವರ ಶಾಸಕ ಎಂ.ಸಿ ಕಮರುದ್ದೀನ್, ಟಿ. ಎಚ್ಡಿಸಿಯ ಮಹಾ ನಿರ್ದೇಶಕ ಡಿ. ವಿ ಸಿಂಗ್, ಆರ್ಪಿಸಿಕೆಎಲ್ ನ ಸಿಇಒ ಆಗಸ್ಟಿನ್ ಥಾಮಸ್, ಟಿಎಚ್ಡಿಸಿ ಇಂಡಿಯಾದ ಸಹಾಯಕ ನಿರ್ದೇಶಕ ಯು.ಸಿ ಕನೌಜಿಯಾ, ನಿರ್ದೇಶಕರಾದ ಜಿ.ಬೆಹ್ರಾ, ಆರ್.ಕೆ ವಿಷ್ಣಾಯ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯ ಪೈವಳಿಕೆ, ಮೀ೦ಜ, ಚಿಪ್ಪಾರ್ ಗ್ರಾಮಗಳ ವ್ಯಾಪ್ತಿಯ ಸುಮಾರು 250 ಎಕರೆ ಸ್ಥಳದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಗೊಂಡಿದೆ. ಕೆಎಸ್ಇಬಿ ಮೂಲಕ ಸರಕಾರ ಈ ಸ್ಥಳ ಒದಗಿಸಿದ್ದು, ಕೇಂದ್ರ ಸರಕಾರದ ಸಹಯೋಗದೊಂದಿಗೆ ಸುಮಾರು 288 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸಾರ್ವಜನಿಕ ವಲಯ ಕಂಪೆನಿಯಾದ ಟಿಎಚ್ಡಿಸಿ ಇಂಡಿಯಾ ಲಿಮಿಡೆಟ್ ಈ ಯೋಜನೆಯನ್ನು ಪೂರ್ಣಗೊಳಿಸಿದೆ. ಯುನಿಟ್ಗೆ 3.10ರೂ ದರದಲ್ಲಿ ಕೆಎಸ್ಇಬಿಗೆ ವಿದ್ಯುತನ್ನು ಮಾರಾಟ ಮಾಡುತ್ತಿದ್ದು, ಕೊಮ್ಮಂಗಳದಲ್ಲಿ ಉತ್ಪಾದಿಸುವ ವಿದ್ಯುತ್ 33 ಕೆ.ವಿ ಫೀಡರ್ ಮೂಲಕ ಕುಬಣೂರಿನ 110 ಕೆ.ವಿ ಸಬ್ ಸ್ಟೇಷನ್ಗೆ ತಲಪಿಸಲಾಗುತ್ತಿದೆ. ಅಲ್ಲಿಂದ ಎರಡು 25 ಎಂ.ವಿ.ಎ ಟ್ರಾನ್ಸ್ ಫಾರ್ಮರ್ಗಳ ಮೂಲಕ ಸ್ವೀಕಾರ ನಡೆಸಿ ಪೂರೈಕೆ ಮಾಡಲಾಗುವುದು.
ಪೈವಳಿಕೆ ಕೊಮ್ಮಂಗಳ ಯೋಜನೆ ಜಾರಿಗೊಳ್ಳುವ ಮೂಲಕ ಕಾಸರಗೋಡು ಜಿಲ್ಲೆಯ ವಿದ್ಯುತ್ ವಲಯದಲ್ಲಿ ದಾಪುಗಾಲಿಡುತ್ತಿದ್ದು ಕಾಸರಗೋಡು, ಮಂಜೇಶ್ವರ ವಲಯದಲ್ಲಿ ವಿದ್ಯುತ್ ಪೂರೈಕೆ ಸಂಬಂಧ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ಆರ್.ಪಿ.ಸಿ.ಕೆ.ಎಲ್. ಸಿ.ಇ.ಒ. ಆಗಸ್ಟಿನ್ ಥಾಮಸ್ ತಿಳಿಸಿದ್ದಾರೆ.