Karavali
ಮಂಗಳೂರು: ಆಧ್ಯಾತ್ಮಿಕ ಪಯಣ, ಸಮಾಜವನ್ನು ಪರಿವರ್ತಿಸುವ ಉದ್ದೇಶದ ಬಗ್ಗೆ ಮಾಣಿಲ ಸ್ವಾಮೀಜಿ ನುಡಿ
- Fri, Feb 19 2021 04:39:14 PM
-
ಮಂಗಳೂರು, ಫೆ.19 (DaijiworldNews/PY): ಕರ್ನಾಟಕದ ಕರಾವಳಿ ಪ್ರದೇಶವು ದೈವತ್ವದ ಭಾಗವಾಗಿದ್ದು, ಹಲವಾರು ದೇವಾಲಯಗಳನ್ನು ಹೊಂದಿದೆ. ಇಲ್ಲಿಗೆ ಕೇವಲ ಭಕ್ತರು ಮಾತ್ರ ಭೇಟಿ ನೀಡುವುದಿಲ್ಲ. ಬದಲಾಗಿ ಪ್ರಪಂಚದಾದ್ಯಂತದ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಪ್ರತಿಯೊಂದು ದೇವಾಲಯಗಳಲ್ಲಿ ಆಧ್ಯಾತ್ಮಿಕ ತಪಸ್ವಿಗಳು ಮಾರ್ಗದರ್ಶನ ನೀಡುತ್ತಾರೆ. ಅವರ ಜೀವನದ ಬಗ್ಗೆ, ಅವರು ನಡೆದು ಬಂದ ದಾರಿ, ಅವರು ಎದುರಿಸಿದ ಕಷ್ಟ, ಅವರು ಇತರರಿಗೆ ಪ್ರೇರಣೆಯಾಗುವಂತ ಘಟನೆಗಳು ಹೀಗೆ ಅನೇಕ ಕೂತೂಹಲಕಾರವಾದ ಪ್ರಶ್ನೆಗಳು ನಮ್ಮನ್ನು ಕಾಡುತ್ತಿವೆ.
ಮಾಣಿಲ ಮಹಾಲಕ್ಷ್ಮೀ ದೇವಸ್ಥಾನದ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮಿ ಅವರು, ದೈಜಿವಲ್ಡ್ನ ಯತಿಶ್ರೇಷ್ಠರು ನಡೆದು ಬಂದ ಹಾದಿ ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ಮೀಡಿಯಾದ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಅವರ ಜೊತೆಗಿನ ಸಂದರ್ಶನದಲ್ಲಿ ಸನ್ಯಾಸ ದೀಕ್ಷೆ ತೆಗೆದುಕೊಳ್ಳುವ ಮುನ್ನ ತಮ್ಮ ಜೀವನ ಯಾವ ರೀತಿ ಇತ್ತು ಎನ್ನುವ ಬಗ್ಗೆ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಅವರು, "ಈ ದೇಶದಲ್ಲಿ ಬಹಳಷ್ಟು ಜನ ಸಂತ-ಶ್ರೇಷ್ಠರು ಧಾರ್ಮಿಕ ಮೌಲ್ಯಗಳನ್ನು ಧಾರ್ಮಿಕ ನೆಲೆಯಲ್ಲಿ ಪ್ರತಿನಿಧಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡಬೇಕು ಎಂದು ಹೇಳುವ ಉದ್ದೇಶದಲ್ಲಿ ಇವತ್ತು ಸಂತರನ್ನು ಆಯ್ಕೆ ಮಾಡಿ, ಸಂತರ ಜೀವನ, ಬದುಕು ಹಾಗೂ ಸಂತರ ನಿಜವಾದ ಬದುಕಿನಲ್ಲಿ ಯಾವ ರೀತಿಯ ಬದಲಾವಣೆಯನ್ನು ಸಮಾಜದಲ್ಲಿ ಮುಂದುವರಿಸಲು ಸಾಧ್ಯವಿದೆಯೋ. ಅದರೊಂದಿಗೆ ಸಂತರ ಜೀವನದ ಬದಲಾವಣೆ ಏನು ಎನ್ನುವುದನ್ನು ದೈಜಿವರ್ಲ್ಡ್ ಇಂದು ಯಾರು ಮಾಡದ ಒಂದು ಸಾಧನೆಯನ್ನು ಸಮಾಜದಲ್ಲಿ ಮಾಡುತ್ತಿದೆ. ಋಷಿಮೂಲ ಹಾಗೂ ಶ್ರೀ ಮೂಲದ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಕಷ್ಟಕರ. ಅದನ್ನು ಸುಸೂತ್ರವಾಗಿ ಸಮಾಜಕ್ಕೆ ಸಂದೇಶವನ್ನು ನೀಡುವಂತ ಕಾರ್ಯಕ್ರಮವನ್ನು ದೈಜಿವಲ್ಡ್ ನೀಡುತ್ತಿದೆ" ಎಂದರು.
"ಸಾಮಾನ್ಯವಾಗಿ ಜನರು ನೀವು ಸ್ವಾಮಿಜಿ ಆಗಿದ್ದು ಹೇಗೆ ಎಂದು ಕೇಳುತ್ತಾರೆ. ಆದರೆ, ಇದು ಉತ್ತರಿಸಲಾಗದ ಪ್ರಶ್ನೆ. ಜೀವನದಲ್ಲಿ ಜನರು ತಮ್ಮದೇ ಆದ ನಿರೀಕ್ಷೆಗಳನ್ನು ಹೊಂದಿರುತ್ತಾರೆ. ನೀವು ಮಕ್ಕಳ ಬಳಿ ನಿಮ್ಮ ಗುರಿ ಏನೆಂದು ಕೇಳಿದರೆ, ಅವರು ವಿವಿಧ ಉತ್ತರಗಳನ್ನು ನೀಡುತ್ತಾರೆ. ಆದರೆ, ಯಾರೂ ಕೂಡಾ ನಾನು ಸ್ವಾಮೀಜಿ ಆಗುತ್ತೇನೆ ಎಂದು ಹೇಳುವುದಿಲ್ಲ. ಜನರು ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಿಸಲು ಸಿದ್ದರಿಲ್ಲ. ನನಗೆ ಬಾಲ್ಯದಿಂದಲೂ ದೇಶ ಅಥವಾ ಸಮಾಜದ ಸೇವೆ ಮಾಡುವ ಗುರಿ ಇತ್ತು. ಹಾಗಾಗಿ ನಾನು ತರಬೇತಿಯನ್ನು ಕೂಡಾ ಪೂರ್ಣಗೊಳಿಸಿದ್ದೇನೆ ಹಾಗೂ ಭಾರತೀಯ ವಾಯುಸೇನೆಯಲ್ಲಿ ಸೇವೆಗೆ ಸೇರಿಕೊಂಡೆ. ಆದರೆ, ನನ್ನ ತಂಗಿಯ ಸಾವಿನಿಂದ ನಾನು ಮನೆಗೆ ಮರಳಬೇಕಾಯಿತು. ವಾಯುಸೇನೆಯಲ್ಲಿ ನಾನು ತರಬೇತಿ ಪಡೆಯುತ್ತಿದ್ದ ಸಂದರ್ಭ, ನಾನು ಒಡಿಶಾದ ಗುಡ್ಡಗಾಡು ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿನ ಬುಡಕಟ್ಟು ಜನರು ಮೂಢನಂಬಿಕೆಗಳನ್ನು ಅನುಸರಿಸುತ್ತಿರುವುದನ್ನು ನೋಡಿದೆ. ಅದು ನನ್ನ ಮನಸ್ಸನ್ನು ಬದಲಾಯಿಸಿತು. ಈ ಮೂಢನಂಬಿಕೆಗಳನ್ನು ಜನರು ನಂಬಲು ಕಾರಣವೇನು ಎನ್ನುವ ಬಗ್ಗೆ ನಾನು ಯೋಚನೆ ಮಾಡಲು ಆರಂಭಿಸಿದೆ. ನಾನು ಹುಟ್ಟಿ ಬೆಳೆದಿದ್ದು ನಗರದಲ್ಲಿ. ನಾನು ವಿದ್ಯಾಭ್ಯಾಸ ಪಡೆದುಕೊಂಡಿದ್ದು ಕೂಡಾ ನಗರದಲ್ಲಿ. ಆಗಿನ ದಿನದಲ್ಲಿ ಕೆಳವರ್ಗದವರನ್ನು ನಿಗ್ರಹಿಸುವುದು ಹಾಗೂ ಅಸ್ಪೃಶ್ಯತೆ ಸಮಾಜದಲ್ಲಿ ಪ್ರಮುಖ ಸವಾಲಾಗಿತ್ತು. ಒಂದು ದಿನ ನಾನು ಹಳ್ಳಿಯೊಂದಕ್ಕೆ ತೆರಳಿ ಕೆಳವರ್ಗದವರೊಂದಿಗೆ ಕೆಲಸ ಮಾಡಬೇಕು ಹಾಗೂ ಅಸ್ಪೃಶ್ಯತೆಯ ವಿರುದ್ದ ಹೋರಾಟಬೇಕು ಎಂದು ನಿರ್ಧರಿಸಿದೆ. ನಾನು ಶ್ರೀನಾರಾಯಣ ಗುರು, ಆದಿ ಶಂಕರಾಚಾರ್ಯ ಹಾಗೂ ಇತರ ಸಂತರ ಜೀವನದ ಬಗ್ಗೆ ಪುಸ್ತಕಗಳಲ್ಲಿ ಓದಿದ್ದೆ. ಅಸ್ಪೃಶ್ಯತೆ ಹಾಗೂ ಕೆಟ್ಟ ಅಭ್ಯಾಸಗಳು ಸಮಾಜಕ್ಕೆ ಅಪಾಯಕಾರಿ ಎಂದು ನಾನು ಅರಿತುಕೊಂಡೆ" ಎಂದು ಹೇಳಿದರು.
ತಮ್ಮ ಕುಟುಂಬದ ಬಗ್ಗೆ ತಿಳಿಸಿದ ಅವರು, "ನನ್ನ ತಂದೆ ಸ್ವಾತಂತ್ರ್ಯ ಹೋರಾಟಗಾರ. ನಮ್ಮಲ್ಲಿ ಅಕ್ಕಿ ಗಿರಣಿ ಇತ್ತು. ನನ್ನ ತಂದೆಗೆ ದೇಶ, ಸಮಾಜ ಹಾಗೂ ಬಡವರ ಬಗ್ಗೆ ಕಾಳಜಿ ಇತ್ತು. ನನ್ನ ತಂದೆ ಪಶುಸಂಗೋಪನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಪ್ರಸ್ತುತ ಧರ್ಮಸ್ಥಳದ ಧರ್ಮಾಧಿಕಾರಿಯಾದ ವಿರೇಂದ್ರ ಹೆಗ್ಗಡೆಯವರ ತಂದೆಯ ಜೊತೆ ನನ್ನ ತಂದೆ ಸಂಪರ್ಕದಲ್ಲಿದ್ದರು" ಎಂದು ತಿಳಿಸಿದರು.
ಶಿಕ್ಷಣದ ಬಗ್ಗೆ ಮಾಹಿತಿ ನೀಡಿದ ಅವರು, "ನಾನು ನನ್ನ ಪ್ರಾಥಮಿಕ ಶಿಕ್ಷಣ ಹಾಗೂ ಪ್ರೌಢಶಿಕ್ಷಣವನ್ನು ಡೊಂಗರಕೇರಿಯ ಕೆನರಾ ಶಾಲೆಯಲ್ಲಿ ಪೂರ್ಣಗೊಳಿಸಿದೆ. ಬಳಿಕ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿದೆ. ನಂತರ ನಾನು ವಾಯುಪಡೆಗೆ ಸೇರಿಕೊಂಡೆ. ಅಲ್ಲಿ ನಾನು ಕೇವಲ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೆ. ತಂಗಿಯ ಮರಣದ ಬಳಿಕ ವಾಯುಪಡೆಗೆ ಹಿಂತಿರುಗಲು ಸಾಧ್ಯವಾಗಿಲ್ಲ" ಎಂದು ಹೇಳಿದರು.
ಆಧ್ಯಾತ್ಮದ ಬಗ್ಗೆ ತಿಳಿಸಿದ ಅವರು, "ನಾನು ಅಸ್ಪೃಶ್ಯತೆಯ ಬಗ್ಗೆ ಆಳವಾಗಿ ಯೋಚಿಸಲು ಆರಂಭಿಸಿದೆ. ಆಧ್ಯಾತ್ಮಿಕತೆಯಿಂದ ಮಾತ್ರವೇ ಈ ಸಮಸ್ಯೆಯನ್ನು ಪರಿಹರಿಸಬಹುದು ಎಂದು ನಾನು ಭಾವಿಸಿದ್ದೆ. ಮಾಣಿಲಕ್ಕೆ ಬಂದ ಬಳಿಕ ನಾನು ಎಲ್ಲವನ್ನೂ ಅರಿತುಕೊಂಡೆ" ಎಂದರು.
"ಮನೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ನಾನು ಮಾಣಿಲಕ್ಕೆ ಬಂದೆ. ಕುಟುಂಬದ ಸದಸ್ಯರೊಬ್ಬರು ನನ್ನನ್ನು ಉತ್ತಮವಾದ ಕಾರಣಕ್ಕಾಗಿ ಆಹ್ವಾನಿಸಿದ್ದರು. ನಾನು ಹೊರಡಲು ಸಿದ್ದವಾದಾಗ ಹಳ್ಳಿಯ ಜನರು ನನ್ನನ್ನು ಹೋಗದಂತೆ ತಡೆದು, ಇಲ್ಲೇ ಉಳಿಯುವಂತೆ ಮನವಿ ಮಾಡಿದರು. ಆ ದಿನಗಳಲ್ಲಿ ಗ್ರಾಮದಲ್ಲಿ ಮೂಢನಂಬಿಕೆಗಳು ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ನಾನು ಇಂದಿಗೂ ಕೂಡಾ ಮಾಣಿಲದ ಎಲ್ಲಾ ಜನರನ್ನು ಪ್ರೀತಿಸುತ್ತೇನೆ. ನನ್ನನ್ನು ವಿರೋಧಿಸಿದ ಹಾಗೂ ಟೀಕೆ ಮಾಡಿದ ಎಲ್ಲರನ್ನೂ ನಾನು ಪ್ರೀತಿಸುತ್ತೇನೆ. ಇಂದು, ಅನೇಕ ಬದಲಾವಣೆಗಳಾಗಿವೆ. ಹಳ್ಳಿಗಳಿಂದಾಗಿ ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಾಧ್ಯವಿದೆ ಎಂದು ಹೇಳಲು ಬಯಸುತ್ತೇನೆ" ಎಂದು ಹೇಳಿದರು.
"ನಾನು ಅವಧೂತ ನಿತ್ಯಾನಂದ ಸ್ವಾಮೀಜಿ ಅವರ ಚರಿತ್ರೆಯನ್ನು ಓದಿದ್ದೆ. ಅವರ ಜೀವನವು ನನಗೆ ಆಧ್ಯಾತ್ಮಿಕತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು. ಬಳಿಕ ನಾನು ಕೋಲ್ಕತ್ತಾದಲ್ಲಿ ಬೇಲೂರು ಮಠದ ಭೂತೇಶಾನಂದ ಸ್ವಾಮಿಯನ್ನು ಭೇಟಿಯಾಗಿ ಗುರು ದೀಕ್ಷೆ ಕೇಳಿದೆ. ಆದರೆ, ಅವರು ನಿರಾಕರಿಸಿದರು. ಸರಿಯಾದ ಸಮಯ ಬಂದಾಗ ನನ್ನನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು. ಅವರು ಎರಡನೇ ಬಾರಿಗೆ ಮಂಗಳೂರಿನ ರಾಮಕೃಷ್ಣ ಮಿಷನ್ಗೆ ಭೇಟಿ ನೀಡಿದಾಗ ಅವರು ದೀಕ್ಷೆ ನೀಡಿ ಸ್ವತಂತ್ರರಾಗಿ ಸಮಾಜಕ್ಕಾಗಿ ಕೆಲಸ ಮಾಡುವಂತೆ ಕೇಳಿಕೊಂಡರು" ಎಂದು ತಿಳಿಸಿದರು.
"ನನಗಿಂತ ಹೆಚ್ಚು ಇಲ್ಲಿನ ಜನರು ಈ ಗ್ರಾಮವನ್ನು ಸಮೃದ್ದ ಸ್ಥಳವನ್ನಾಗಿ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಈ ಹಿಂದೆ ಮಾಣಿಲ ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಬಿಲ್ಲವ ಸಮುದಾಯ ಹಾಗೂ ಇತರ ಕೆಳಜಾತಿಯವರಿಗೆ ಪ್ರವೇಶ ಮಾಡಲು ಅನುಮತಿ ನೀಡಲಿಲ್ಲ. ಒಂದೊಮ್ಮೆ ನನಗೆ ಆ ದೇವಸ್ಥಾನಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿತು. ಆಗ ನಾನು ದೇವಸ್ಥಾನಕ್ಕೆ ತೆರಳಿದಾಗ ದೇವಸ್ಥಾನದ ಹೊರಗೆ ಕೆಲ ಮಂದಿ ನಿಂತಿರುವುದನ್ನು ಗಮನಿಸಿದೆ. ನಾನು ಅವರನ್ನು ದೇವಸ್ಥಾನದ ಒಳಗೆ ಬರಲು ಹೇಳಿದೆ. ಶೇ.60ರಷ್ಟು ಮಂದಿ ನಾನು ಹೇಳಿದಂತೆ ಮಾಡಿದರು. ಈ ಘಟನೆ ಗ್ರಾಮದ ಹಾದಿಯನ್ನು ಬದಲಾಯಿಸಿತು" ಎಂದರು.
"ನನ್ನ ತಾಯಿ ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ನಾನು ವಿದ್ಯಾಭ್ಯಾಸ ಮುಂದುವರೆಸಬೇಕು ಎಂದು ನನ್ನ ಸಹೋದರರು ಭಾವಿಸಿದ್ದರು. ನನ್ನ ಅಣ್ಣ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎಜಿಎಂ ಆಗಿ ಕೆಲಸ ಮಾಡಿದ್ದಾರೆ. ನಾನು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಾಗ ಅದನ್ನು ಅವರು ಇಷ್ಟಪಡುತ್ತಿರಲಿಲ್ಲ. ಇಂದು ನಾನು ಏನಾಗಿದ್ದೇನೋ ಇದು ನನ್ನ ತಾಯಿಯ ಬೆಂಬಲದಿಂದ ನಾನು ಪಡೆದುಕೊಂಡಿದ್ದು. ಯಾರನ್ನೂ ನೋಯಿಸಬಾರದು, ಸಮಸ್ಯೆಗಳನ್ನು ಸೃಷ್ಠಿಸಬಾರದು ಎಂದು ಅವರು ಯಾವಾಗಲೂ ಹೇಳುತ್ತಿದ್ದರು" ಎಂದರು.
"ಕುಟುಂಬವನ್ನು ಒಗ್ಗೂಡಿಸಲು ನಾನು ಶ್ರಮಿಸಿದ್ದೇನೆ. ನನಗೆ ದೇಶ ಹಾಗೂ ಪ್ರಸ್ತುತ ವ್ಯವಸ್ಥೆಯ ಬಗ್ಗೆ ಕಾಳಜಿ ಇದೆ. ನಾನು ನನಗಾಗಿ ಏನನ್ನೂ ನಿರೀಕ್ಷಿಸಿಲ್ಲ" ಎಂದು ಹೇಳಿದರು.
"ನಾವು ಕೆಟ್ಟ ಅಭ್ಯಾಸಗಳನ್ನು ತೊರೆದು ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ನಾವು ಎಲ್ಲರನ್ನೂ ಪ್ರೀತಿಸಬೇಕು. ಧರ್ಮ, ಜಾತಿ ಮತ್ತು ಸಮುದಾಯದ ಆಧಾರದ ಮೇಲೆ ಇತರರನ್ನು ದ್ವೇಷಿಸುವುದು ನ್ಯಾಯವಲ್ಲ. ನಮಗೆ ಬರುವ ಎಲ್ಲವೂ ಪ್ರಕೃತಿಯಿಂದ ಸಿಕ್ಕಿದೆ. ಇದು ಭಾರತದ ಆಧ್ಯಾತ್ಮಿಕತೆ" ಎಂದು ತಿಳಿಸಿದರು.