Karavali
ಮಂಗಳೂರು: 'ಬಿಜೆಪಿ, ಎಸ್ಡಿಪಿಐನವರು ಅಣ್ಣತಮ್ಮಂದಿರು' - ಮುನೀರ್ ಕಾಟಿಪಳ್ಳ
- Thu, Feb 18 2021 12:44:23 PM
-
ಮಂಗಳೂರು, ಫೆ.18 (DaijiworldNews/MB) : ''ಬಿಜೆಪಿ ಹಾಗೂ ಎಸ್ಡಿಪಿಐ ಅಣ್ಣತಮ್ಮಂದಿರು, ಅವರು ಚೆನ್ನಾಗಿರಲಿ'' ಎಂದು ವ್ಯಂಗ್ಯವಾಡಿದ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ನ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ''ಬಿಜೆಪಿ ಹಾಗೂ ಎಸ್ಡಿಪಿಐ ತಾಂಟು ಎಂದು ಹೇಳಿಕೊಂಡು ಜನರ ಮಧ್ಯೆ ವಿಷಬೀಜ ಭಿತ್ತಿ ಅವರು ಚುನಾವಣೆ ವೇಳೆ ಪಂಚಾಯತ್ಗಳಲ್ಲಿ ಮೈತ್ರಿ ಮಾಡಿಕೊಳ್ಳುತ್ತಾರೆ'' ಎಂದು ದೂರಿದರು.
ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುವ ರಫ್ ಆಂಡ್ ರೈಟ್ ಕಾರ್ಯಕ್ರಮದಲ್ಲಿ ವಾಹಿನಿಯ ಪ್ರಧಾನ ಸಂಪಾದಕ, ಸಂದರ್ಶಕ ವಾಲ್ಟರ್ ನಂದಳಿಕೆ ಅವರು ಕಾಂಗ್ರೆಸ್ನ್ನು ನೀವು ಮನವರಿಕೆ ಮಾಡಿಸಲು ಸಾಧ್ಯವಾಗಿದೆ. ಬೇರೆ ಪಕ್ಷವನ್ನು ಮಾಡಲಾಗದೇ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ''ಬಿಜೆಪಿಗೆ ಮನವರಿಕೆ ಮಾಡಲು ಯಾರಿಗಾದರೂ ಸಾಧ್ಯವಿದೆಯೇ'' ಎಂದು ಹೇಳಿದ್ದು ಸಂದರ್ಶಕರು ಎಸ್ಡಿಪಿಐ ಹೆಸರು ಉಲ್ಲೇಖಿಸಿದಾಗ, ''ಅವರು ಅಣ್ಣ ತಮ್ಮಂದಿರು ಚೆನ್ನಾಗಿರಲಿ'' ಎಂದು ವ್ಯಂಗ್ಯವಾಡಿದರು. ''ನಾವು ಹೋರಾಟ ಮಾಡು ಜೈಲಿಗೆ ಹೋಗುವ ಪ್ರಶ್ನೆಯಲ್ಲ, ಕ್ರಿಮಿನಲ್ ಚಟುವಟಿಕೆ ಮಾಡಿ, ಧರ್ಮರಕ್ಷಣೆ ವಿಚಾರದಲ್ಲಿ ಜೈಲಿಗೆ ಹೋಗುವವರು ನಮ್ಮಂತವರ ಜೊತೆ ಬರಲಿ. ಸಮಾಜದ ಪ್ರಶ್ನೆಯ ಬಗ್ಗೆ ಹೋರಾಡೋಣ. ನೀವು ತಾಂಟುರೇ ಎಂದು ಹೇಳುವವರಿಗೆ ಜೈ ಹೇಳಿಕೊಂಡು ಜೈಲಿಗೆ ಹೋಗುತ್ತಾರೆ. ಎಂಆರ್ಪಿಎಲ್ನಲ್ಲಿ ನಮ್ಮ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿ. ಇದರ ಬಗ್ಗೆ ಮಾತನಾಡಿ. ತುಳುನಾಡಿನ ಅಭಿವೃದ್ದಿಯಲ್ಲಿ ತುಳುನಾಡಿನ ಮಕ್ಕಳಿಗೆ ದೊಡ್ಡ ಪಾಳು. ಇದಕ್ಕೆ ಹೋರಾಡಿ ನಾವು ಎಲ್ಲಾ ಧರ್ಮದವರು ಜೈಲಿಗೆ ಹೋಗುತ್ತೇವೆಂದು ಹೇಳೋಣ. ಆಗ ಸರ್ಕಾರ ಬದಲಾಗುವುದಿಲ್ಲವೇ'' ಎಂದು ಕೇಳಿದರು.
''ಎಡಪಂಥೀಯ ಪಕ್ಷಗಳ ಜೊತೆಗೆ ಹೊಂದಾಣಿಕೆ ಹೊಂದಿರುವ ನೀವು ಇತ್ತೀಚೆಗೆ ಮಂಗಳೂರಿನಲ್ಲಿ ನೀವು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡುತ್ತಿದ್ದೀರಿ ಹೌದಾ'', ಎಂದು ಸಂದರ್ಶಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ಇಲ್ಲ ಯಾಕೆಂದರೆ ನಾವು ಮೊದಲಿನಿಂದಲೂ ಕಾಂಗ್ರೆಸ್ ಚಿಂತನೆಯನ್ನು ವಿರೋಧಿಸುತ್ತಲ್ಲೇ ಬಂದವರು. ಡಿವೈಎಫ್ಐ ಹುಟ್ಟುವಾಗ ಬಹಳ ಮುಖ್ಯವಾಗಿ ಕಾಂಗ್ರೆಸ್ನ ಆರ್ಥಿಕ ನೀತಿಗಳ ಬಗ್ಗೆ ನಮಗೆ ವಿರೋಧವಿದ್ದದ್ದು. ಆದರೆ ಪರಿಸ್ಥಿತಿ ತುಂಬಾ ಬದಲಾಗಿದೆ. ಒಂದು ಕಡೆ ಬಂಡವಾಳಶಾಹಿ ನೀತಿಯನ್ನು ಕಾಂಗ್ರೆಸ್ ಎತ್ತಿಹಿಡಿದು ಈ ದೇಶದಲ್ಲಿ ಅದನ್ನು ಬೆಳೆಸುತ್ತಾ ಬಂದಾಗ, ಉಂಟಾದ ಪರಿಸ್ಥಿತಿ, ಆ ಬಳಿಕ ಈಗ ಬಂಡವಾಳಶಾಹಿ ವ್ಯವಸ್ಥೆಯು ಬೆಳವಣಿಗೆ ಹೊಂದಿ ಈಗ ಇಡೀ ದೇಶ ಕಾರ್ಪೋರೇಟ್ ಕಂಪನಿಗಳ ಹಿಡಿತಕ್ಕೆ ಹೋಗುತ್ತಿದೆ. ಹಾಗೆಯೇ ಬಲಪಂಥೀಯ ಸಿದ್ದಾಂತಗಳು ವ್ಯಾಪಕವಾಗಿ ಹರಡುತ್ತಿದೆ. ಕೋಮುವಾದವೂ ಇದೆ. ಇಡೀ ದೇಶವನ್ನು ಬಂಡವಾಳಶಾಹಿ ಹಾಗೂ ಬಲಪಂಥೀಯ ಚಿಂತನೆಯುಳ್ಳ ತೀವ್ರಗಾಮಿ ಆಲೋಚನೆಗಳುಳ್ಳ ದೇಶವಾಗಿ ಪರಿವರ್ತನೆ ಮಾಡುವ ಪ್ರಯತ್ನ ನಡೆಯುತ್ತಿದೆ. ಅದರಿಂದಾಗಿ ನಾವು ಸ್ವಲ್ಪ ಜಾತ್ಯಾತೀತರಾಗಿರುವವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕೆಂಬ ಆಲೋಚನೆ ಮಾಡಿದ್ದೇವೆ. ಅದರ ಭಾಗವಾಗಿ ನಾನು ಕಾಂಗ್ರೆಸ್ನ್ನು ಕೂಡಾ ಒಳಗೊಂಡಿದ್ದೇವೆ ಅಷ್ಟೇ. ಕಾಂಗ್ರೆಸ್ನ ಆರ್ಥಿಕ ನೀತಿ, ಚಿಂತನೆಗಳನ್ನು ನಾವು ಈಗಲೂ ಪ್ರಬಲವಾಗಿ ವಿರೋಧಿಸುತ್ತೇವೆ'' ಎಂದು ಸ್ಪಷ್ಟಪಡಿಸಿದರು.
''ದಕ್ಷಿಣ ಕನ್ನಡದಲ್ಲಿ ಬಿಜೆಪಿ, ಸಂಘಪರಿವಾರ ಮಾಡುವಂತಹ ಎಲ್ಲಾ ಚಟುವಟಿಕೆಗಳಿಗೆ ವಿರೋಧವೇ ಇಲ್ಲ ಎಂಬಂತಹ ಸ್ಥಿತಿ ಉಂಟಾಗಿದೆ. ಉದ್ಯೋಗದ ಪ್ರಶ್ನೆ, ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಏರಿಕೆ, ಟೋಲ್ಗೇಟ್, ವಿಮಾನ ನಿಲ್ದಾಣ, ಬಂದರುಗಳ ಖಾಸಗೀಕರಣದಂತಹ ಯಾವುದೇ ನೀತಿಗೆ ವಿರೋಧ ವ್ಯಕ್ತವಾಗುತ್ತಿಲ್ಲ. ಹೀಗಿರುವಾಗ ಈ ಜನವಿರೋಧಿ ನೀತಿಗಳ ವಿರುದ್ದವಿರುವವರನ್ನು ಒಂದುಗೂಡಿಸುವುದು ನಮ್ಮ ಜವಾಬ್ದಾರಿ. ಹಾಗಾಗಿ ಒಂದು ಪ್ರಧಾನವಾದ ವಿರೋಧ ಪಕ್ಷವಾದ ಕಾಂಗ್ರೆಸ್ನೊಂದಿಗೆ ಈ ಜನವಿರೋಧಿ ನೀತಿಗಳ ವಿರುದ್ದದ ಹೋರಾಟದಲ್ಲಿ ಹೊಂದಾಣಿಕೆ ಮಾಡಿದ್ದೇವೆಯೇ ಹೊರತು ಇದು ಮೈತ್ರಿಯಲ್ಲ'' ಎಂದು ಹೇಳಿದರು.
''ನೀವು ನಡೆಸುವ ಹೋರಾಟಗಳಿಗೆ ಜಯ ಸಿಗಬಹುದು ಎಂಬ ಭರವಸೆ ನಿಮಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾತ್ರಿ ಕಳೆದು ಬೆಳಗಾಗುವಲ್ಲಿ ಯಾವ ಬದಲಾವಣೆಗಳು ಆಗುವುದಿಲ್ಲ. ನಮ್ಮ ವೈಯಕ್ತಿಕ ಬದುಕಿನಲ್ಲಿ ನಮ್ಮ ಆಯಸ್ಸು ಬಹಳ ದೊಡ್ಡದೆನಿಸಬಹುದು. ಆದರೆ ಪರಿವರ್ತನೆ ಬರಲು ತ್ಯಾಗ ಬಲಿದಾನಗಳು ಬೇಕು. ಭಗತ್ಸಿಂಗ್ ಮೊದಲಾದವರು ಅಂದು ಮಾಡಿದ ತ್ಯಾಗ ಬಲಿದಾನದಿಂದಾಗಿ ನಾವಿಂದು ಸ್ವಾತಂತ್ಯ್ರವನ್ನು ಅನುಭವಿಸುತ್ತಿದ್ದೇವೆ. ನಾವೀಗ ನಮ್ಮ ಕರ್ತವ್ಯ ನಿರ್ವಹಿಸಬೇಕು. ನಿರಾಶೆ ಪಡುವ ಅವಶ್ಯಕತೆಯಿಲ್ಲ. ಅಷ್ಟಕ್ಕೂ ಕರಾವಳಿಯಲ್ಲಿ ನಾವು ಮಾಡಿದ ಅನೇಕ ಹೋರಾಟಗಳು ಫಲಪ್ರದವಾಗಿದೆ. ಎಂಆರ್ಪಿಎಲ್ ಹೋರಾಟ, ವಿಠಲ ಮಲೆಕುಡಿಯ ಬಂಧನದ ವಿರುದ್ದದ ಹೋರಾಟ, ಖಾಸಗಿ ಆಸ್ಪತ್ರೆಗೆಳ ಲೂಟಿಗೆ ಒಂದಿಷ್ಟಾದರೂ ಕಡಿವಾಣ ಹಾಕಲು ಸಾಧ್ಯವಾಗಿದೆಯಲ್ಲವೇ, ಈ ರೀತಿಯ ಎಷ್ಟೋ ಹೋರಾಟ ನಡೆದಿದೆ. ಅಷ್ಟಕ್ಕೂ ಇದು ಒಂದು ಈವೆಂಟ್ ರೀತಿಯಲ್ಲ, ಇದು ಚಳುವಳಿ'' ಎಂದು ವಿವರಿಸಿದರು.
''ತಳಮಟ್ಟದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಶಕ್ತಿಗಳು ಇಂದು ಪ್ರಬಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ರೈತರನ್ನು ಬಿಜೆಪಿ ಧರ್ಮದ, ಭಾವನಾತ್ಮಕ ರಾಜಕಾರಣ ಮಾಡಿಕೊಂಡು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ. ಅದರಿಂದಾಗಿ ಇಲ್ಲಿನ ರೈತರು ಬೀದಿಗೆ ಬಂದಿಲ್ಲ. ಹಾಗೆಯೇ ಜಿಲ್ಲೆಯಲ್ಲಿ ಅಡಿಕೆ ಪ್ರಮುಖ ಬೆಳೆ. ಈಗ ಅಡಿಕೆಗೆ ಉತ್ತಮ ಬೆಳೆಯಿದೆ ಎಂದು ನಮಗೆ ತೊಂದರೆಯಿಲ್ಲವೆಂಬಂತೆ ಸುಮ್ಮನಿದ್ದಾರೆ. ಆದರೆ ಈಗಿನ ಸಮಸ್ಯೆಯ ಆಳದ ಬಗ್ಗೆ ರೈತರಿಗೆ ತಿಳಿದಿಲ್ಲ. ಅದನ್ನು ತಿಳಿಪಡಿಸುವಲ್ಲಿ ನಾವು ಸೋತಿದ್ದೇವೆ. ಆದರೆ ಆ ಪ್ರಯತ್ನವನ್ನು ಮಾಡುತ್ತಿದ್ದೇವೆ. ಇದು ಹೇಳುವಷ್ಟು ಸರಳವಲ್ಲ. ನಾಳಿನ ಭವಿಷ್ಯದ ವಿಷಯ'' ಎಂದು ಹೇಳಿದರು.
''ಕಾರ್ಮಿಕ ಕಾಯ್ದೆಗಳನ್ನು ತೆಗೆದುಹಾಕಿ ಕಾರ್ಮಿಕ ಸಂಹಿತೆ ಮಾಡಿದ್ದಾರೆ. ಅದರ ಪ್ರಕಾರ ಎಂಟು ಗಂಟೆ ದುಡಿಮೆಯಲ್ಲ 12 ಗಂಟೆ. ಮೊದಲು 8 ಗಂಟೆಗಿಂತ ಅಧಿಕ ದುಡಿದರೆ ಓವರ್ ಟೈಮ್ ಕೆಲಸವಾಗುತ್ತದೆ. ಅದಕ್ಕಾಗಿ ಅಧಿಕ ಸಂಬಳವಿತ್ತು. ಆದರೆ ಇನ್ನು ಮುಂದೆ ಹಾಗಿಲ್ಲ. ಈ ಹಿಂದೆ ಓರ್ವ ಮಾಲೀಕ 125 ಮಂದಿ ಇರುವ ಫಾಕ್ಟರಿ ಮುಚ್ಚಬೇಕಾದರೆ ಎಲ್ಲಾ ರೀತಿಯ ಸವಲತ್ತು ನೀಡಿ, ಸರ್ಕಾರದ ಒಪ್ಪಿಗೆ ಪಡೆದು ಮುಚ್ಚಬೇಕಿತ್ತು. ಆದರೆ, ಈಗ 300 ರವರೆಗೆ ಕಾರ್ಮಿಕರು ಇದ್ದರೂ ಕೂಡಾ, ರಾತ್ರಿ ಬೆಳಗಾಗುವುದರೊಳಗೆ ಕಂಪನಿಯನ್ನು ಮುಚ್ಚಬಹುದಾಗಿದೆ. ಇದೇ ಜನರು, ಕಾರ್ಮಿಕರಲ್ಲವೇ ಮೋದಿಯನ್ನು ಬೆಂಬಲಿಸುವುದು. ಇವರಿಗೆ ನಾವು ತಿಳುವಳಿಕೆ ನೀಡಬೇಕಲ್ಲವೇ. ರಾತ್ರಿ ಬೆಳಗಾಗುವುದರೊಳಗೆ ಕಂಪನಿ ಮುಚ್ಚಿದರೆ ಸಾಲ ಮಾಡಿಕೊಂಡು ತಮ್ಮ ಮಗಳ ಮದುವೆ ಮೊದಲಾದವುಗಳನ್ನು ಮಾಡಿದವರು ಏನು ಮಾಡುವುದು'' ಎಂದು ಪ್ರಶ್ನಿಸಿದರು.
''ಆರು ವರ್ಷದ ಹಿಂದೆ ಸುರತ್ಕಲ್ನಲ್ಲಿ ಟೋಲ್ಗೇಟ್ ತೆರೆದಾಗ ಹೋರಾಟು ನಡೆಸಲಾಗಿದ್ದು ಆ ಸಂದರ್ಭ ಆರು ತಿಂಗಳಲ್ಲಿ ಹೆಜಮಾಡಿ ಟೋಲ್ ಗೇಟ್ ಆದ ಬಳಿಕ ಇದನ್ನು ಮುಚ್ಚುವುದಾಗಿ ಹೇಳಿದರು. ಆರು ತಿಂಗಳಲ್ಇ ಒಂಬತ್ತು ಕಿ.ಮೀ. ದೂರದಲ್ಲಿ ಹೆಜಮಾಡಿ ಟೋಲ್ಗೇಟ್ ಸ್ಥಾಪನೆಯಾಯ್ತು. ಆದರೆ ಇದನ್ನು ಮುಚ್ಚಲಿಲ್ಲ. ಆದ್ದರಿಂದ ನಾವು ಹೋರಾಟ ನಡೆಸಿದ್ದು 2018 ರಲ್ಲಿ ಈ ಟೋಲ್ಗೇಟನ್ನು ಹೆಜಮಾಡಿ ಟೋಲ್ ಜೊತೆ ವಿಲೀನ ಮಾಡುವುದಾಗಿ ಹೇಳಿದರು. ಆದರೆ ಈವರೆಗೂ ಟೋಲ್ ಮುಚ್ಚಿಲ್ಲ. ನಾವು ಸಾಕಷ್ಟು ಹೋರಾಟ ನಡೆಸಿದೆವು. ಅದರಿಂದ ಆದ ಲಾಭವೆಂದರೆ ಸ್ಥಳೀಯ ವಾಹನಗಳಿಗೆ ಈಗ ರಿಯಾಯತಿ ಇರುವುದು. ಆದರೆ ಆ ಟೋಲ್ಗೇಟನ್ನು ಮುಚ್ಚಬೇಕು ಎಂಬುದು ನಮ್ಮ ಆಗ್ರಹ. ಈಗ ಫಾಸ್ಟಾಗ್ ವಿಚಾರದಲ್ಲಿ ಸ್ಥಳೀಯ ವಾಹನಗಳಿಗೂ ಟೋಲ್ ಹಾಕಲು ಮುಂದಾಗಿದ್ದಾರೆ. ಅಲ್ಲಿ ಅಕ್ರಮ ಟೋಲ್ ಗೇಟ್ ಇರಬಾರದು ಎಂದು ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹೋರಾಟದಿಂದ ಈ ವಿಷಯ ಜೀವಂತವಾಗಿದೆ. ನಾವು ಗೆಲ್ಲುತ್ತೀವಿ ಎಂಬ ನಂಬಿಕೆಯಿದೆ'' ಎಂದು ಹೇಳಿದರು.
''ನಳಿನ್ ಕುಮಾರ್ ಕಟೀಲ್ ಅವರು ಇದನ್ನು ವಿಲೀನ ಮಾಡುತ್ತೇವೆ, ಮಾತ್ರವಲ್ಲದೇ ರದ್ದು ಮಾಡುವುದಾಗಿ ಎಷ್ಟೋ ಸಲ ಹೇಳಿದರು. ಆದರೆ ಯಾಕೆ ಆಗಿಲ್ಲ. ಅವರು ಬಿಜೆಪಿಯಿಂದ ಮೂರು ಬಾರಿ ಎಂಪಿ ಆಗಿದ್ದಾರೆ. ಪ್ರಸ್ತುತ ಅವರದ್ದೇ ಸರ್ಕಾರ ಕೇಂದ್ರದಲ್ಲಿ, ರಾಜ್ಯದಲ್ಲಿದೆ. ಬಿಜೆಪಿಯ ರಾಜ್ಯಾಧ್ಯಕ್ಷರೂ ಕೂಡಾ ಅವರು ಆಗಿದ್ದಾರೆ. ಅತ್ಯಂತ ಪ್ರಭಾವಿ ವ್ಯಕ್ತಿಯೂ ಹೌದು. ಅವರು ಕೇಂದ್ರದಲ್ಲಿ ಕೂತು ಒಂದೇ ಒಂದು ನಿಮಿಷದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬಹುಹು. ಆದರೆ ಅವರು ನವಯುಗ್ನವರ ಹಿತವನ್ನು ಕಾಪಾಡುತ್ತಿದ್ದಾರೆ'' ಎಂದು ದೂರಿದರು.
''ಪ್ರಸ್ತುತ ದುಡ್ಡು ಪ್ರಮುಖ ಪಾತ್ರವಹಿಸುತ್ತಿದೆ. ರಾತ್ರಿಬೆಳಗಾಗುವುದರೊಳಗೆ ಹಣವಿದ್ದವರೂ ನಾಯಕರಾಗುತ್ತಾರೆ. ನಮ್ಮಂತ ಸಂಘಟನೆಗಳ ವಿರುದ್ದವಾಗಿರುವ ಸಂಘಟನೆಗಳಿಗೆ ಫಂಡಿಂಗ್ ಬಹಳ ದೊಡ್ಡ ರೀತಿಯಲ್ಲಿ ನಡೆಯುತ್ತಿದೆ. ಜಾತಿ, ಧರ್ಮವನ್ನು ಬಳಸುತ್ತಾರೆ. ತಾಂಟು ತಾಂಟು ಎಂದು ಹೇಳುತ್ತಾರೆ. ನೀವು ತಾಂಟುವುದಾದರೆ, ಯುವ ಜನರಿಗೆ ಉದ್ಯೋಗವಿಲ್ಲ, ಎಲ್ಲವೂ ಖಾಸಗೀಕರಣವಾಗುತ್ತಿದೆ, ಜನರಿಗೆ ವಾಸಿಸಲು ಮನೆಯಿಲ್ಲ, ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಲ್ಲ, ಎಲ್ಲವೂ ಖಾಸಗೀಕರಣ, ಈ ವಿಚಾರದಲ್ಲಿ ತಾಂಟು ಹೇಳುವವವರು ಯಾರೂ ಇಲ್ಲ'' ಎಂದರು.
ಇನ್ನು ಕೋಟಿ ಚೆನ್ನಯ್ಯರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಲ್ಲ ಎಂಬ ತಮ್ಮ ಹೇಳಿಕೆಯ ವಿಚಾರವಾಗಿ ಮಾತನಾಡಿ ಅವರು, ''ತುಳುನಾಡು ಗಂಭೀರ ಆಲೋಚನೆ ಮಾಡಬೇಕು. ನನ್ನ ಪ್ರಕಾರ ಕೋಟಿ ಚೆನ್ನಯ್ಯರು ತುಳುನಾಡಿನಲ್ಲಿ ಭೂಮಿಯ ಹಕ್ಕು, ಜಾತಿ ತಾರತಮ್ಯದ ವಿರುದ್ದ ಹೋರಾಡಿದವರು. ಅವರು ಕಟ್ಟಿದ ಗರಡಿ, ಸೈನ್ಯದಲ್ಲಿ ಎಲ್ಲಾ ಜಾತಿ, ಧರ್ಮದವರು ಇದ್ದರು. ಅವರು ಕೇವಲ ಬಿಲ್ಲವ ಜಾತಿಗೆ ಸೀಮಿತವಾಗದೆ, ಇಡೀ ತುಳಿತಕ್ಕೆ ಉಳಿದಾದ ಸಮಸ್ಯೆ ಹಾಗೂ ಊಳಿಗಮಾನ್ಯ ವಿರುದ್ದ ಹೋರಾಡಿದರು. ಕೋಟಿ ಚೆನ್ನಯ್ಯರ ಬಗ್ಗೆ ಅಭಿಮಾನ ಹೊಂದಿರುವವರು, ಅಸಮಾನತೆ ವಿರುದ್ದ ಧ್ವನಿ ಎತ್ತಬೇಕು. ಕೋಟಿ ಚೆನ್ನಯ್ಯರು ಆರಾಧ್ಯರೂ ಮಾತ್ರವಲ್ಲ ಅನುಕರಣೀಯರು. ಅವರ ಅನುಕರಣೆ ಮಾಡಬೇಕು. ಕೋಟಿ ಚೆನ್ನಯ್ಯರನ್ನು ಬರೀ ಬಿಲ್ಲವರಾಗಿ ನೋಡಬಾರದು, ಅವರು ಎಲ್ಲರಿಗಾಗಿ ಹೋರಾಡಿದವರು'' ಎಂದು ಹೇಳಿದರು.