ಮಂಗಳೂರು, ಫೆ.10 (DaijiworldNews/MB) : ತುಳುನಾಡ ವೀರ ಪುರುಷರಾದ ಕೋಟಿ ಚೆನ್ನಯ ಹಾಗೂ ಬಿಲ್ಲವ ಮುಖಂಡ ಜನಾರ್ಧನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಅವರ ಮುಖಕ್ಕೆ ಮಸಿ ಬಳಿದರೆ ಒಂದು ಲಕ್ಷ ರೂ. ಗಳನ್ನು ನೀಡುವುದಾಗಿ ಹೇಳಿದ್ದ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ಅವರು, ಜಗದೀಶ್ ಅಧಿಕಾರಿಯವರು ಕ್ಷಮೆಯಾಚಿಸಿದ ಹಿನ್ನೆಲೆ ಆ ಒಂದು ಲಕ್ಷ ರೂಪಾಯಿ ಹಣವನ್ನು ಸಮಾಜದ ಬಡ ಮಕ್ಕಳ ಶಿಕ್ಷಣಕ್ಕಾಗಿ ನೀಡುವುದಾಗಿ ಹೇಳಿದ್ದಾರೆ.
ಈ ಬೆಳವಣಿಗೆಯ ಬಳಿಕ ಅಧಿಕಾರಿಯ ಮುಖಕ್ಕೆ ಮಸಿ ಬಳಿದವರಿಗೆ ತಾನು ಘೋಷಿಸಿದ್ದ ಒಂದು ಲಕ್ಷ ರೂಪಾಯಿಯನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ವ್ಯಯಿಸುವುದಾಗಿ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.
ಪ್ರತಿಭಾ ಅವರು ಜಗದೀಶ್ ಅವರ ಹೇಳಿಕೆಯನ್ನು ಖಂಡಿಸಿದ್ದರು. ಪತ್ರಿಕಾಗೋಷ್ಠಿ ನಡೆಸಿ ಕೋಟಿ, ಚೆನಯ್ಯರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ ಅಧಿಕಾರಿಯವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.
ಮೂರು ದಿನಗಳಲ್ಲಿ ಕ್ಷಮೆಯಾಚಿಸದಿದ್ದರೆ ಅಧಿಕಾರಿಯ ಮುಖಕ್ಕೆ ಮಸಿ ಬಳಿದವರಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದರು. ಮೂರು ದಿನಗಳಲ್ಲಿ ಅಧಿಕಾರಿಯನ್ನು ಬಿಜೆಪಿಯಿಂದ ಹೊರಹಾಕದಿದ್ದರೆ, ಅವರು ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುತ್ತಾರೆ ಎಂದು ಕೂಡಾ ಹೇಳಿದ್ದರು.
ಮಂಗಳವಾರ ರಾತ್ರಿ, ಅಧಿಕಾರಿಯವರು ಕ್ಷಮೆಯಾಚಿಸಲು ಗರೋಡಿಗೆ ಭೇಟಿ ನೀಡಿದ ಕೂಡಲೇ, ಪ್ರತಿಭಾ ಕುಳಾಯಿಯವರು ಫೇಸ್ಬುಕ್ನಲ್ಲಿ ಲೈವ್ ಬಂದಿದ್ದು ಈ ಹಿಂದೆ ಘೋಷಿಸಿದ್ದ ಒಂದು ಲಕ್ಷ ರೂಪಾಯಿಯನ್ನು ದೀನದಲಿತ ಕುಟುಂಬಗಳ ಮಕ್ಕಳ ಶಿಕ್ಷಣಕ್ಕಾಗಿ ವ್ಯಯಿಸುವುದಾಗಿ ಹೇಳಿದ್ದಾರೆ.