ಕಾಪು, ಫೆ. 09 (DaijiworldNews/SM): ರಿಕ್ಷಾ ಚಾಲಕರೊಬ್ಬರಿಗೆ ವಿನಾಕಾರಣ ಹಲ್ಲೆ ನಡೆಸಿರುವ ರೈಲ್ವೇ ಪೊಲೀಸ್ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಕಾಪು ನ್ಯೂ ಆಟೋ ಚಾಲಕ ಮಾಲಕರ ಸಂಘದ ನಿಯೋಗ ಮಂಗಳವಾರ ಒತ್ತಾಯಿಸಿದೆ.
ಫೆ.8ರಂದು ರಾತ್ರಿ 10.30ರ ಸುಮಾರಿಗೆ ಇಂದ್ರಾಳಿ ರೈಲ್ವೆ ನಿಲ್ದಾಣಕ್ಕೆ ಬಾಡಿಗೆಗಾಗಿ ಕಾಪು ರಿಕ್ಷಾ ಚಾಲಕ, ಮಲ್ಲಾರು ಕೋಟೆ ರಸ್ತೆಯ ನಿವಾಸಿ ಶಾಹಿದಿಲ್(34) ಎಂಬವರು ಬಂದಿದ್ದು, ಅಲ್ಲಿ ಚೂರಿ ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಇತರರೊಂದಿಗೆ ಹಿಡಿಯಲು ಮುಂದಾಗಿದ್ದರು.
ಆಗ ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸ್ ಸಿಬ್ಬಂದಿಯೊಬ್ಬರು ವಿನಾಕಾರಣ ಸ್ಥಳದಲ್ಲಿದ್ದ ಶಾಹಿದಿಲ್ ಲಾಠಿಯಿಂದ ಹೊಡೆದರು. ಇದರಿಂದ ರಿಕ್ಷಾ ಚಾಲಕ ಶಾಹಿದಿಲ್ಗೆ ತೀವ್ರತರದ ಗಾಯಗಳಾಗಿವೆ ಎಂದು ದೂರಲಾಗಿದೆ.
ಈ ಸಂಬಂಧ ಸಂಘದ ನಿಯೋಗ ಇಂದು ಮಣಿಪಾಲ ಠಾಣೆಗೆ ಆಗಮಿಸಿ ಆರೋಪಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಉಪನಿರೀಕ್ಷಕ ರಾಜಶೇಖರ್ ವಂದಲಿ ಅವರನ್ನು ಒತ್ತಾಯಿಸಿದರು.