ಮಂಗಳೂರು, ಫೆ. 09 (DaijiworldNews/HR): "ಗೋಡ್ಸೆವಾದಿಗಳು ರಾಷ್ಟ್ರೀಯವಾದದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದು, ಇದನ್ನು ತಡೆಗಟ್ಟುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಿದ್ಧಗೊಳಿಸಲಿದ್ದು, ಅದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು" ಎಂದು ಹೊಸದಾಗಿ ಚುನಾಯಿತರಾದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಇಡೀ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ಸಿದ್ಧಗೊಳಿಸಲಿದ್ದು, ಯುವ ಕಾಂಗ್ರೆಸ್ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮೂರು ತಿಂಗಳೊಳಗೆ ಸಮಿತಿಗಳನ್ನು ರಚಿಸಲಾಗುವುದು. ಪಕ್ಷದ ಸಿದ್ಧಾಂತ ಮತ್ತು ತತ್ವಗಳ ಆಧಾರದ ಮೇಲೆ ಸಮಿತಿಯನ್ನು ರಚಿಸಲಿದ್ದು, ಸಮಿತಿಯ ಸದಸ್ಯರು ನಾಲ್ಕು ದಿನಗಳವರೆಗೆ ವಿವಿಧ ಸ್ಥಳಗಳಲ್ಲಿ ತರಬೇತಿ ನೀಡಲಾಗುವುದು" ಎಂದರು.
"ಜಿಲ್ಲೆಯಲ್ಲಿ ಕೋಮುವಾದದ ವಿರುದ್ಧ ಸಕಾರಾತ್ಮಕ ರಾಷ್ಟ್ರೀಯತೆಯನ್ನು ಹರಡಲು ಈ ಸಮಿತಿ ಕೆಲಸ ಮಾಡುತ್ತದೆ. ಇದಲ್ಲದೆ ಗೋಡ್ಸೆವಾದಿಗಳು ರಾಷ್ಟ್ರೀಯತೆಯ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದು ಮತ್ತು ಫ್ಯಾಸಿಸಂನ ಪ್ರಚಾರದ ಬಗ್ಗೆ ಸಾರ್ವಜನಿಕರಿಗೆ ಬಹಿರಂಗಪಡಿಸುತ್ತದೆ ಮತ್ತು ಜಾಗೃತಿ ಮೂಡಿಸುತ್ತದೆ. ಯುವ ಕಾಂಗ್ರೆಸ್ ಸದಸ್ಯರು ಇತಿಹಾಸದ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಸಹ ಕೆಲಸ ಮಾಡುತ್ತಾರೆ" ಎಂದು ಹೇಳಿದ್ದಾರೆ.
ಇನ್ನು "ಬಿಜೆಪಿಯನ್ನು ಹೆಸರಿಸದೆ, ಬ್ರಿಟಿಷರೊಂದಿಗಿದ್ದ ಜನರು ಈಗ ಕಾಂಗ್ರೆಸ್ ಅನ್ನು ರಾಷ್ಟ್ರ ವಿರೋಧಿಗಳೆಂದು ಬಿಂಬಿಸುವ ಮೂಲಕ ತಮ್ಮನ್ನು ತಾವು ಪ್ರಜೆಗಳೆಂದು ತೋರಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರೀಯತೆ, ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಸಂವಿಧಾನದ ನೈಜತೆಯ ಬಗ್ಗೆ ಯುವ ಕಾಂಗ್ರೆಸ್ ಜನರಿಗೆ ಶಿಕ್ಷಣ ನೀಡಲಿದೆ" ಎಂದರು.
ಸುದ್ದಿಗೋಷ್ಠಿಯಲ್ಲಿ ಅನಿಲ್ ಪೈ, ಅನ್ವಿತ್ ಕಟೀಲ್, ಸಂಜನಾ ಛಲವಾದಿ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಫಿರೋಝ್ ಮಲಾರ್, ಶಾಹುಲ್ ಹಮೀದ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.