ಮಂಗಳೂರು, ಫೆ.08 (DaijiworldNews/PY): "ಮೀನುಗಾರಿಕಾ ಮಹಾವಿದ್ಯಾಲಯಗಳಲ್ಲಿ ಸುಧಾರಿತ ತರಬೇತಿಗಳ ಆರಂಭಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ , ನ್ಯಾಷನಲ್ ಫಿಶರೀಸ್ ಡೆವಲಪ್ಮೆಂಟ್ ಬೋರ್ಡ್ಗೆ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಲಾಗುವುದು" ಎಂದು ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಅಭಿಪ್ರಾಯಪಟ್ಟರು.
ಅವರು ಮೀನು ಸಂಸ್ಕರಣಾ ತಾಂತ್ರಿಕ ವಿಭಾಗ, ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ, ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾಗಳ ವಿಶ್ವವಿದ್ಯಾಲಯ ಹಾಗೂ ಮಂಗಳೂರಿನ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಮಲ್ಪೆ ಮೀನು ವ್ಯಾಪಾರಸ್ಥರ ಸಮುದಾಯ ಭವನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಉಡುಪಿ ಜಿಲ್ಲಾ ಮಹಿಳಾ ಮೀನುಗಾರರಿಗೆ ಒಣಮೀನು ತಯಾರಿಕೆಯ ತರಬೇತಿ ಕಾರ್ಯಗಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
"ಕಾರ್ಯಗಾರದಲ್ಲಿ ಸುಧಾರಿತ ವಿಧಾನಗಳಿಂದ ಒಣಮೀನು ಸಂಸ್ಕರಣೆಯ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಕುರಿತು ಮೀನುಗಾರಿಕಾ ಮಹಾವಿದ್ಯಾಲಯ ಹೆಚ್ಚಿನ ಮುತುವರ್ಜಿ ವಹಿಸಿ ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ಪ್ರಯತ್ನದಲ್ಲಿ ಕೈ ಹಾಕಿರುವ ಕಾರ್ಯ ಶ್ಲಾಘನೀಯ" ಎಂದ ಅವರು, ಮೀನುಗಾರಿಕಾ ಮಹಾವಿದ್ಯಾಲಯದ ಮೂಲಸೌಕರ್ಯಗಳ ಕುರಿತು ಪ್ರಶಂಸಿಸಿದರು.
"ಮೀನಿನನ ಉದ್ಯಮ ಕ್ಷೇತ್ರದಲ್ಲಿ ಮಹಿಳೆಯರಿಗೆ ಉತ್ತಮ ಅವಕಾಶವಿದ್ದು, ಇದಕ್ಕೆ ಪೂರಕವಾಗಿ ಪ್ರಧಾನ ಮಂತ್ರಿಗಳ ಆತ್ಮ ನಿರ್ಭರ ಯೋಜನೆಯ ಉಪಯೋಗಗಳನ್ನು ಪಡೆಯಬಹುದು. ಇದಕ್ಕೆ ಕಾರ್ಯಗಾರಗಳು ಅತ್ಯವಶ್ಯಕ. ಮಲ್ಪೆ ಒಣಮೀನು ಮಾರುಕಟ್ಟೆ ಅಭಿವೃದ್ಧಿ ಕುರಿತು ಸರಕಾರದ ಗಮನ ಸೆಳೆಯಲಾಗುವುದು. ತರಬೇತಿ ಕಾರ್ಯಕ್ರಮಗಳನ್ನು ಕಾರವಾರದಲ್ಲೂ ನಡೆಸಲು ಯೋಜನೆಯನ್ನು ರೂಪಿಸಲಾಗುವುದು. ಸುಧಾರಿತ ತಂತ್ರಜ್ಞಾನವಾಗಿರುವ ಸೋಲಾರ್ ಡ್ರೈಯರ್ ಮೀನುಗಾರ ಮಹಿಳೆಯರಿಗೆ ಸದ್ಯ ಬೇಕಾಗಿರುವ ಅತಿಮುಖ್ಯ ಸಾಧನವಾಗಿದೆ" ಎಂದರು.
ಉಡುಪಿ ಮತ್ತು ದ.ಕ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳಿ ನಿಯಮಿತ ಮಂಗಳೂರು ಇದರ ಅಧ್ಯಕ್ಷ ಯಶ್ ಪಾಲ್ ಎ. ಸುವರ್ಣ ಮಾತನಾಡಿ, ಪ್ರತ್ಯೇಕ ಮೀನುಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಲು ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು. ಬಳಿಕ ಒಣಮೀನು ಸಂಸ್ಕರಣೆ ಮತ್ತು ಮಾರಾಟದಲ್ಲಿರುವ ಅವಕಾಶಗಳ ಕುರಿತು ಮಾಹಿತಿ ನೀಡಿದರು.
ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಎ.ಸೆಂಥಿಲ್ ವೇಲ್ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಕೇಸರಿ ಯುವರಾಜ್, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಮಹಿಳಾ ಅಧ್ಯಕ್ಷೆ ಜಲಜಾ ಕೋಟ್ಯಾನ್ ಉಪಸ್ಥಿತರಿದ್ದರು.
ಕಾರ್ಯಗಾರದ ಮುಖ್ಯ ಸಂಯೋಜಕ ಹಾಗೂ ಪ್ರಾಧ್ಯಾಪಕ, ವಿ.ವಿ ಮುಖ್ಯಸ್ಥ ಸ್ವಾಗತಿಸಿದರು. ಪ್ರೇರಣಾ ಮತ್ತು ಶ್ರುತಿ ಕಾರ್ಯಕ್ರಮ ನಿರೂಪಿಸಿದರು.
ಫೆ.9 ರಂದು ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರಿನಲ್ಲಿ ತರಬೇತಿಯ ಪ್ರಾತ್ಯಕ್ಷತೆಯನ್ನು ನೀಡಲಾಗುವುದು ಎಂದು ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.