ಕಾಸರಗೋಡು, ಫೆ.08 (DaijiworldNews/MB) : ಕಾರು ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿಯ ಶಿರಿಯದಲ್ಲಿ ನಡೆದಿದೆ.
ಮೃತಪಟ್ಟವರನ್ನು ಬಂದ್ಯೋಡು ಮುಟ್ಟಂನ ಸೈದಾಲಿ ಇಬ್ರಾಹಿಂ (64) ಎಂದು ಗುರುತಿಸಲಾಗಿದೆ.
ಕಾರು ಚಾಲಕ ಶಿರಿಯ ಕಡಪ್ಪುರದ ಖಾದರ್ (54), ಇಬ್ರಾಹಿಂರವರ ಪುತ್ರ ಸಲೀಮ್ರವರ ಪತ್ನಿ ಆಯಿಷತ್ ತಾಹಿರಾ (39), ತಾಹಿರಾರವರ ಮಕ್ಕಳಾದ ನಿದಾ ಸಹಾದಿಯ (10) , ಶಿಹಾಬುದ್ದೀನ್ (13) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಾಸ್ ಪೋರ್ಟ್ ಅಗತ್ಯಕ್ಕಾಗಿ ಪಯ್ಯನ್ನೂರಿಗೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಲಾರಿಯನ್ನು ಹಿಂದಿಕ್ಕಿ ಮುಂದಕ್ಕೆ ತೆರಳಲೆತ್ನಿಸಿದಾಗ ಲಾರಿ ಚಾಲಕ ಎಡಭಾಗಕ್ಕೆ ತಿರುಗಿಸಿದ ಸಂದರ್ಭದಲ್ಲಿ ಕಾರು ಲಾರಿಗೆ ಸಿಲುಕಿ ಘಟನೆ ನಡೆದಿದ್ದು, ಕಾರನ್ನು 200 ಮೀಟರ್ನಷ್ಟು ಎಳೆದೊಯ್ದಿದ್ದು, ನಿಲ್ಲಿಸದೆ ಪರಾರಿಯಾದ ಲಾರಿಯನ್ನು ಕಾಸರಗೋಡಿನಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.