ಸುಬ್ರಹ್ಮಣ್ಯ, ಫೆ. 08 (DaijiworldNews/HR): ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರ್ಮಿತವಾಗುವ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಒಳನಾಡು ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಆದಿತ್ಯವಾರ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಸಮಾರಂಭ ಉದ್ಘಾಟಿಸಿದರು.
ದ.ಕ ಜಿ.ಪಂ. ಮಂಗಳೂರು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮಂಗಳೂರು ಇದರ ಆರ್ಐಡಿಎಫ್-25 ಯೋಜನೆಯಡಿಯಲ್ಲಿ ಮಂಜೂರಾದ ಅನುದಾನದಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರ್ಮಿತವಾಗುವ ನೂತನ ಪಶು ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, "ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಶು ವೈದ್ಯಕೀಯ ವ್ಯವಸ್ಥೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಲಾಗಿದೆ. ಈ ದೃಷ್ಠಿಯಿಂದ ಸಂಬಂಧಪಟ್ಟ ಪಶು ಸಂಗೋಪನಾ ಸಚಿವರಲ್ಲಿ ಮಾತನಾಡಿದ್ದೇನೆ.ಅಲ್ಲದೆ ಕ್ಷೇತ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದು ವಿನಂತಿಸಲಾಗಿದೆ. ಕ್ಷೇತ್ರದಲ್ಲಿನ ಪಶುಚಿಕಿತ್ಸಾಲಯಗಳಲ್ಲಿ ಇರುವ ವೈದ್ಯರ ಕೊರತೆ ನೀಗಿಸಲು ಸೂಕ್ತ ಕ್ರಮ ವಹಿಸಲು ಸಚಿವರಲ್ಲಿ ವಿನಂತಿಸಿದ್ದೇನೆ.ಗ್ರಾಮೀಣ ಪ್ರದೇಶಗಳನ್ನುಒಳಗೊಂಡ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಪಶುಪಾಲನೆ ಮತ್ತು ಹೈನುಗಾರಿಕೆ ರೈತರ ಪ್ರಧಾನ ಉಪಕಸುಬಾದುದರಿಂದ ಇಲ್ಲಿ ಆಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಪಶು ಆಸ್ಪತ್ರೆಗಳ ನಿರ್ಮಾಣ ಅತ್ಯವಶ್ಯಕವಾಗಿದೆ. ಇದಕ್ಕೆ ಪೂರಕವಾಗಿ ಸರಕಾರವು ಸ್ಪಂಧಿಸುತ್ತಿದೆ" ಎಂದರು.
ಇನ್ನು "ಅಭಿವೃದ್ಧಿ ಮಾಡುವಾಗ ಜನಪ್ರತಿನಿಧಿಗಳಿಗೆ ಸ್ಪಷ್ಠವಾದ ಉದ್ದೇಶಗಳಿರಬೇಕು. ಸಮಸ್ಯೆಗಳ ಮದ್ಯೆ ಅಭಿವೃದ್ಧಿಗೆ ಪೂರಕವಾದ ಕೆಲಸ ಕಾರ್ಯಗಳನ್ನುಅಧಿಕಾರಿಗಳು ನಿರ್ವಹಿಸುವುದು ಅತ್ಯವಶ್ಯಕ. ಗುತ್ತಿಗೆದಾರರು ಗುಣಮಟ್ಟದ ಕೆಲಸದೊಂದಿಗೆ ಸಮಯಕ್ಕೆ ಸರಿಯಾಗಿ ಕಾಮಗಾರಿ ಪೂರೈಸಲು ಒತ್ತನ್ನು ನೀಡಬೇಕು.ನಬಾರ್ಡ್ನಿಂದ ಕ್ಷೇತ್ರದಲ್ಲಿ ನಿರ್ಮಿತವಾಗುವ ನೂತನ ಪಶು ಚಿಕಿತ್ಸಾಲಯವು ಈ ಪರಿಸರದಲ್ಲಿ ಅತ್ಯವಶ್ಯಕವಾಗಿದೆ" ಎಂದು ಹೇಳಿದ್ದಾರೆ.
ಈ ಸಂದರ್ಭ ಮೀನಾಕ್ಷಿ ಶಾಂತಿಗೋಡು, ರಾಜೇಶ್ವರಿ ಕನ್ಯಮಂಗಲ, ಆಶಾ ತಿಮ್ಮಪ್ಪ, ಅಶೋಕ್ ನೆಕ್ರಾಜೆ ಉಪಸ್ಥಿತರಿದ್ದರು.