ಬಂಟ್ವಾಳ, ಫೆ.08 (DaijiworldNews/MB) : ಬಿ.ಸಿ.ರೋಡು- ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿ ಕಾರ್ಯದಲ್ಲಿ ಬಂಟ್ವಾಳ ಬೈಪಾಸ್ ಜಂಕ್ಷನ್ ನಲ್ಲಿ ಭೂ ಸ್ವಾಧೀನವಾಗದೆ ಇನ್ನೂ ಕಾಮಗಾರಿ ಕೈಗೆತ್ತಿಕೊಳ್ಳದೇ ಇರುವುದರಿಂದ ನಿತ್ಯವೂ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ವಾಹನಗಳು ಸರಣಿಯಲ್ಲಿ ನಿಲ್ಲಬೇಕಾದ ಸ್ಥಿತಿ ಇದೆ.
ಬಂಟ್ವಾಳ ಬೈಪಾಸ್ ಜಂಕ್ಷನ್ ನ ಎರಡೂ ಬದಿಗಳಲ್ಲಿ ರಸ್ತೆ ಅಗೆಯಲಾಗಿದ್ದು, ಜಕ್ರಿಬೆಟ್ಟು ಭಾಗದಲ್ಲಿ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಬಿ.ಸಿ.ರೋಡು ಭಾಗದಲ್ಲಿ ರಸ್ತೆ ಅಗೆದು ಹಾಗೇ ಬಿಡಲಾಗಿದೆ. ಹೀಗಾಗಿ ವಾಹನಗಳು ತೀರಾ ನಿಧಾನಗತಿಯಲ್ಲಿ ಸಾಗುತ್ತಿವೆ.
ಮತ್ತೊಂದೆಡೆ ಜಂಕ್ಷನ್ ಭಾಗದಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ. ಈ ನಡುವೆ ಜಂಕ್ಷನ್ ಭಾಗದಲ್ಲಿ ಹಾದು ಹೋಗಿರುವ ಎಂ.ಆರ್.ಪಿ.ಎಲ್. ನೀರು ಪೂರೈಕೆಯ ಕಾಮಗಾರಿಯೂ ನಡೆಯಬೇಕಿದ್ದು, ಹೀಗಾಗಿ ಹೆದ್ದಾರಿ ಕಾಮಗಾರಿ ಮುಂದುವರಿಯುತ್ತಿಲ್ಲ. ಪರಿಣಾಮ ರಸ್ತೆ ಅಗೆದು ತಿಂಗಳುಗಳೇ ಕಳೆದರೂ, ಕಾಮಗಾರಿ ಮುಂದುವರಿಯದೇ ಇರುವುದರಿಂದ ವಾಹನ ಸಂಚಾರ ಕಷ್ಟವಾಗಿದೆ.
ನಾಲ್ಕು ರಸ್ತೆ ಸೇರುವ ಸ್ಥಳ
ಬಂಟ್ವಾಳ ಬೈಪಾಸ್ ಜಂಕ್ಷನ್ ನಾಲ್ಕು ರಸ್ತೆಗಳು ಒಂದೇ ಕಡೆ ಸೇರುತ್ತಿದ್ದು, ಎಲ್ಲಾ ರಸ್ತೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಾಗುವುದರಿಂದ ಈ ರೀತಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಬಿ.ಸಿ.ರೋಡು- ಧರ್ಮಸ್ಥಳ ರಸ್ತೆ, ಬಂಟ್ವಾಳ ಪೇಟೆಯ ರಸ್ತೆ ಹಾಗೂ ಮೂಡುಬಿದಿರೆ ರಸ್ತೆಯಲ್ಲಿ ಹೆಚ್ಚಿನ ವಾಹನ ಸಾಗಾಟ ಇರುತ್ತದೆ.
ರಸ್ತೆ ಅಗೆದು ವಾಹನಗಳು ತೀರಾ ನಿಧಾನಗತಿಯಲ್ಲಿ ಸಾಗಿ, ಜಂಕ್ಷನ್ ನ ಎಲ್ಲಾ ರಸ್ತೆಗಳಲ್ಲೂ ಬೆಳಗ್ಗೆ ಹಾಗೂ ಸಂಜೆ ವಾಹನಗಳು ಒಂದಷ್ಟು ಹೊತ್ತು ಸರತಿಯಲ್ಲಿ ನಿಂತು ಸಾಗಬೇಕಾದ ಸ್ಥಿತಿ ಇದೆ. ಹೆಚ್ಚುವರಿ ಪೊಲೀಸ್ ಸಿಬಂದಿ ವಾಹನ ನಿಯಂತ್ರಣ ಮಾಡಿದರೂ, ಕಾಯುವುದು ಅನಿವಾರ್ಯವಾಗಿದೆ.
ಹೆಚ್ಚಿನ ಸಿಬಂದಿ ನಿಯೋಜನೆ
ಬೈಪಾಸ್ ಜಂಕ್ಷನ್ ನಲ್ಲಿ ಬೆಳಗ್ಗೆ ಹಾಗೂ ಸಂಜೆ ಹೆಚ್ಚಿನ ಟ್ಯಾಫಿಕ್ ಜಾಮ್ ಉಂಟಾಗುವುದರಿಂದ ಹೆಚ್ಚುವರಿ ಪೊಲೀಸ್ ಸಿಬಂದಿಯನ್ನು ನಿಯೋಜಿಸಿ ವಾಹನ ದಟ್ಟಣೆ ನಿಯಂತ್ರಿಸುವ ಕಾರ್ಯ ಮಾಡಲಾಗುತ್ತಿದೆ. ಇಲ್ಲಿ ಪೈಪುಲೈನ್ ಕಾಮಗಾರಿ ಪೂರ್ಣಗೊಂಡ ಬಳಿಕ ಹೆದ್ದಾರಿ ಕಾಮಗಾರಿ ನಡೆಯಬೇಕಿದೆ ಎಂದು ಹೇಳುತ್ತಾರೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ, ರಾಜೇಶ್ ಕೆ.ವಿ.ಯವರು.