ವಿಟ್ಲ, ಫೆ. 07 (DaijiworldNews/SM): ಬೆಳಿಗ್ಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ವೀರಕಂಭ ಗ್ರಾ.ಪಂ.ನ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಲಲಿತಾ ಅವರು ಸಂಜೆ ವೇಳೆಗೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರಳಿದ್ದಾರೆ. ಇದೀಗ ವೀರಕಂಭ ಗ್ರಾಮ ಪಂಚಾಯತ್ ನಲ್ಲಿ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.
ಲಲಿತಾ ಅವರು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಈ ಮೂಲಕ 2 ಪಕ್ಷಗಳು ಸಮಬಲದಲ್ಲಿದ್ದ ವೀರಕಂಭ ಪಂಚಾಯತ್ ನಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರುವಂತಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಬಂದಿತ್ತು. ಆದರೆ, ಸಂಜೆ ವೇಳೆಗೆ ಲಲಿತಾ ಅವರು ಮಾಜಿ ಸಚಿವ ರಮಾನಾಥ ರೈ ಅವರ ಸಮ್ಮುಖದಲ್ಲಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು, ಇದು ಬಿಜೆಪಿ ಪಕ್ಷಕ್ಕೆ ಭಾರೀ ಮುಖಭಂಗವಾಗಿದೆನ್ನಲಾಗಿದೆ.
ವೀರಕಂಬ ಗ್ರಾಮ ಪಂಚಾಯತ್ ನಲ್ಲಿ ಕಳೆದ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದಲ್ಲಿದ್ದರು. ಈ ಭಾರಿಯ ಚುನಾವಣೆಯಲ್ಲಿ ಕ14 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು 7-7 ಸ್ಥಾನ ಪಡೆದುಕೊಂಡಿದ್ದರು. ಇದರಿಂದ ಅತಂತ್ರ ಸ್ಥಿತಿ ನಿರ್ಮಾಣಗೊಂಡಿತ್ತು.
ಇನ್ನು ರಾಜಧರ್ಮ ಮಾರ್ಗ ಎಂದು ಹೇಳುತ್ತಿರುವ ಬಿಜೆಪಿಗರು ಇದೀಗ ವಾಮಮಾರ್ಗ ಮೂಲಕ ಅಧಿಕಾರ ಪಡೆಯಲು ಮುಂದಾಗಿದ್ದು, ವಿಪರ್ಯಾಸ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.