ಉಡುಪಿ, ಫೆ.07 (DaijiworldNews/MB) : ಈಗಾಗಲೇ 5 ವಿಶ್ವ ದಾಖಲೆ ಬರೆದಿರುವ ಉದ್ಯಾವರದ ನಾಟ್ಯಮಯೂರಿ ಖ್ಯಾತಿಯ ತನುಶ್ರೀ ಪಿತ್ರೋಡಿ ಒಂದು ನಿಮಿಷದಲ್ಲಿ 55 ಬಾರಿ ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ ಮಾಡುವ ಮೂಲಕ ವಿಶ್ವ ದಾಖಲೆಯನ್ನು ರಚಿಸಿದ್ದಾರೆ.
ಉದಯ್ ಕುಮಾರ್ ಮತ್ತು ಸಂಧ್ಯಾ ಅವರ ಹೆಮ್ಮೆಯ ಮಗಳಾಗಿರುವ ತನುಶ್ರೀ, ಉಡುಪಿಯ ಸೈಂಟ್ ಸೆಸಿಲಿಯ ಕನ್ನಡ ಮಧ್ಯಮ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದಾಳೆ.
ತನುಶ್ರೀಯ ಈ ವಿಶ್ವ ದಾಖಲೆಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮುಖ್ಯಸ್ಥ ಮನೀಶ್ ಬಿಶ್ನಾಯ್ ಪ್ರಕಟಿಸಿದ್ದು ಪ್ರಮಾಣಪತ್ರವನ್ನು ತನುಶ್ರೀ ಅವರಿಗೆ ಹಸ್ತಾಂತರಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ತನುಶ್ರೀ ಯೋಗದಲ್ಲಿ ಅಸಾಧಾರಣವಾಗಿದ್ದು ಆಕೆಯ ಮೂಳೆಗಳು ಹೇಗೆ ಬೇಕೋ ಹಾಗೆ ಹೊಂದಿಕೊಳ್ಳುತ್ತದೆ. ಇದು ನಿಜವಾಗಿಯೂ ಅದ್ಭುತ ಮತ್ತು ಅಸಾಧಾರಣ ದಾಖಲೆಯಾಗಿದೆ. ಅವರು ಈಗಾಗಲೇ ಐದು ದಾಖಲೆಗಳನ್ನು ರಚಿಸಿದ್ದಾರೆ. ಇದು ಅವರು ಮಾಡಿದ ಆರನೇ ದಾಖಲೆ. ಗೌರವಾನ್ವಿತ ಸಂಸ್ಥೆಯ ಪರಿಶೀಲನೆಯ ನಂತರ ಅಂತಿಮ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಹಿಂದೆ ದುಬೈನ ವ್ಯಕ್ತಿಯೊಬ್ಬರು ಫಾರ್ವರ್ಡ್ ಬಾಡಿ ಸ್ಕಿಪ್ನಲ್ಲಿ ದಾಖಲೆ ರಚಿಸಿದ್ದರು. ಈಗ ತನುಶ್ರೀ ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಇದು ನಂಬಲಾಗದ ಕ್ಷಣ. ಅವರ ದೇಹದ ನಮ್ಯತೆ ಬೆರಗುಗೊಳಿಸುತ್ತದೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಆಕೆ ಒಂದೊಂದಾಗಿ ದಾಖಲೆಗಳನ್ನು ರಚಿಸುತ್ತಿದ್ದಾರೆ'' ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ತನುಶ್ರೀ, ''ನನ್ನ ಮೊದಲ ಪ್ರಯತ್ನದಲ್ಲಿ ನಾನು ಗುರಿ ತಲುಪಿರುವುದು ನನಗೆ ತುಂಬಾ ಸಂತೋಷವಾಗಿದೆ. ಮನೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ನಾನು ಇದನ್ನು ಪ್ರಯತ್ನಿಸಿದೆ. ನಾನು ಇಟಲಿಗೆ ಹೋಗಿದ್ದಾಗ, ತಮಿಳುನಾಡಿನ ಓರ್ವ ವ್ಯಕ್ತಿಯು ಒಂದು ನಿಮಿಷದಲ್ಲಿ 48 ಬಾರಿ ಹೆಚ್ಚು ಬ್ಯಾಕ್ವರ್ಡ್ಸ್ ಬಾಡಿ ಸ್ಕಿಪ್ ಮಾಡಿ ಪ್ರದರ್ಶಿಸಿದ್ದರು. ಇದು ಗಿನ್ನೆಸ್ ದಾಖಲೆಯಾಗಿದೆ. ಅವರನ್ನು ನೋಡಿ ಸ್ಫೂರ್ತಿ ಪಡೆದ ನಾನು ಮನೆಯಲ್ಲಿ ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೆ. ಮೊದಲ ಪ್ರಯತ್ನದಲ್ಲಿ, ನಾನು 20 ಬಾರಿ ಸ್ಕಿಪ್ ಮಾಡಿದ್ದೇನೆ.ನಂತರ, ನಾನು 46 ಕ್ಕೆ ತಲುಪಿದಾಗ, ನಾನು ದಾಖಲೆ ಬರೆಯಲು 46 ಬಾರಿ ಸ್ಕಿಪ್ ಮಾಡಲು ನಿರ್ಧರಿಸಿದೆ. ಆದರೆ ನನ್ನ ವಯಸ್ಸಿನ ಕಾರಣದಿಂದ ನನಗೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ನಂತರ, ನಾನು ಗೋಲ್ಡನ್ ಬುಕ್ ಅನ್ನು ಆರಿಸಿದೆ. ನನ್ನ ಪೋಷಕರಿಗೆ ಮತ್ತು ನನ್ನ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ'' ಎಂದು ಹೇಳಿದ್ದಾರೆ.
ತಂದೆ ಉದಯ್ ಕುಮಾರ್, ''ದಾಖಲೆ ಸಂದರ್ಭ ಅವಳು ತನ್ನ ಅಭ್ಯಾಸ ಸಮಯಕ್ಕಿಂತ ಉತ್ತಮವಾಗಿ ಸ್ಕಿಪ್ ಮಾಡಿದ್ದಾಳೆ. ಅವರ ದಾಖಲೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಸಾಧಿಸುವುದು ಅಷ್ಟು ಸುಲಭವಲ್ಲ. ಅವಳ ಮುಂದಿನ ಗುರಿ ಕಡಿಮೆ ಅವಧಿಯಲ್ಲಿ ಯೋಗದ ಹೆಚ್ಚಿನ ಭಂಗಿಗಳನ್ನು ಪ್ರಸ್ತುತಪಡಿಸುವುದಾಗಿದೆ. ಶೀಘ್ರದಲ್ಲೇ ಅದನ್ನು ಆಕೆ ಮಾಡುತ್ತಾಳೆ ಎಂಬುದು ನನ್ನ ಆಶಯ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಬಡಗುಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಜಯಕರ್ ಶೆಟ್ಟಿ ಇಂದ್ರಾಳಿ, ಮೀನು ಮಾರುಕಟ್ಟೆ ಒಕ್ಕೂಟದ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕೌನ್ಸಿಲರ್ ಎಸ್.ವಿಭಾ, ಸೇಂಟ್ ಸೆಸಿಲಿಯ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ರಾಮಕೃಷ್ಣ ಕೊಡಂಚ, ಯೋಗ ಶಿಕ್ಷಕ, ವಿಶು ಶೆಟ್ಟಿ ಇತರರು ಉಪಸ್ಥಿತರಿದ್ದರು.