ಬಂಟ್ವಾಳ, ಫೆ. 03 (DaijiworldNews/SM): ಅನುಮಾನಸ್ಪದವಾಗಿ ಮಹಿಳೆ ಸಾವನ್ನಪ್ಪಿದ ಪ್ರಕರಣ ಪೊಲೀಸ್ ತನಿಖೆ ವೇಳೆ ಕೊಲೆಯಾಗಿ ತಿರುವು ಪಡೆದುಕೊಂಡಿರುವ ಘಟನೆ ತಾಲೂಕಿನ ಅಮ್ಡಾಡಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಆರೋಪಿಗಳನ್ನು ಬಂಟ್ವಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಹಿಳೆಯನ್ನು ನೋಡಿಕೊಳ್ಳಲು ಮನೆಯಲ್ಲಿದ್ದ ಅಮ್ಡಾಡಿ ಗ್ರಾಮದ ಎಲ್ಮಾ ಪ್ರಶ್ಚಿತ ಬರೆಟ್ಟೋ( 25), ನರಿಕೊಂಬು ನಿವಾಸಿಯಾದ ಸತೀಶ ಮತ್ತು ಚರಣ್ ಬಂಧಿತ ಆರೋಪಿಗಳು.
ಜ. 26 ರಂದು ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ(72) ಎಂಬ ಮಹಿಳೆಯು ಮನೆಯಲ್ಲಿ ಸಾವನ್ನಪ್ಪಿದ್ದು ಇದೊಂದು ಅಸಹಜ ಸಾವು ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತು. ಸಾವಿನ ಬಳಿಕ ಫೆ. 02 ರಂದು ಮೃತ ಬೆನೆಡಿಕ್ಟ್ ಕಾರ್ಲೋ ರವರ ಪುತ್ರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಆಗಮಿಸಿ ತಮ್ಮ ತಾಯಿಯ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೇಳಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಅದರಂತೆ ತನಿಖೆ ನಡೆಸಿದಾಗ ಬೆನೆಡಿಕ್ಟ್ ಕಾರ್ಲೋ ರವರನ್ನು ನೋಡಿಕೊಳ್ಳಲು ನೇಮಿಸಿದ್ದ ಅಮ್ಡಾಡಿ ಗ್ರಾಮದ ಎಲ್ಮಾ ಪ್ರಶ್ಚಿತ ಬರೆಟ್ಟೋ , ಬಂಟ್ವಾಳ ರವರು ಬೆನೆಡಿಕ್ಟ್ ಕಾರ್ಲೋ ರವರ ಬಳಿ ಇದ್ದ ಬಂಗಾರವನ್ನು ದೋಚಲು ನರಿಕೊಂಬು ನಿವಾಸಿಯಾದ ಸತೀಶ ಮತ್ತು ಚರಣ್ ರವರೊಂದಿಗೆ ಸೇರಿಕೊಂಡು ಜ 25 ರಂದು ಬೆನೆಡಿಕ್ಟ್ ಕಾರ್ಲೋ ರವರ ಮನೆಯಲ್ಲಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಮೂವರನ್ನು ಆರೋಪಿಗಳನ್ನು ಬಂಧಿಸಿ ನಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರಿಂದ ಕೊಲೆ ಮಾಡಿ ದೋಚಿದ್ದ 91 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿರುತ್ತದೆ.
ಕಾರ್ಯಾಚರಣೆಯು ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವೈಲೆಂಟೈನ್ ಡಿʻಸೋಜಾ ರವರ ಮಾರ್ಗದರ್ಶನದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕರಾದ ಟಿ.ಡಿ, ನಾಗರಾಜ್ ರವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಟ್ಲ ಠಾಣಾ ಪಿ.ಎಸ್.ಐ ವಿನೋದ್, ಹಾಗೂ ಹೆಚ್.ಸಿಗಳಾದ ಗಿರೀಶ್, ಸುರೇಶ್, ಜನಾರ್ದನ, ಶ್ರೀಮತಿ ಪ್ರಮೀಳಾ, ಕಿರಣ್, ಪಿ.ಸಿಗಳಾದ ನಝೀರ್, ಪುನೀತ್, ಮನೋಜ್, ಪ್ರಸನ್ನ, ರವರ ತಂಡ ಪತ್ತೆ ಹಚ್ಚಿರುತ್ತಾರೆ.