Karavali
ಉಡುಪಿ: ಕೇಂದ್ರ ಬಜೆಟ್ 2021ರ ನಿರೀಕ್ಷೆಯ ಬಗ್ಗೆ ಜನಾಭಿಪ್ರಾಯ ಹೀಗಿದೆ
- Fri, Jan 29 2021 04:05:33 PM
-
ಉಡುಪಿ, ಜ.29 (DaijiworldNews/PY): ಕೇಂದ್ರದ 2021-22 ನೇ ಸಾಲಿನ ಬಜೆಟ್ಗೆ ದಿನಗಣನೆ ಆರಂಭವಾಗಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಕೊರೊನಾ ವೈರಸ್ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದಾಗಿದ್ದು, ಜನರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಯಾವ ಯಾವ ವಲಯಗಳಿಗೆ ಏನೆಲ್ಲಾ ಸೌಲಭ್ಯಗಳು ಸಿಗಲಿದೆ ಎಂಬುದು ಪ್ರತಿಯೊಬ್ಬರ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಈ ವರ್ಷ ಮಂಡನೆಯಾಗುತ್ತಿರುವ ಬಜೆಟ್ನಲ್ಲಿ ಜನತೆ ಏನೆಲ್ಲಾ ನಿರೀಕ್ಷಿಸುತ್ತಿದ್ದಾರೆ.
ಈ ಬಾರಿಯ ಬಜೆಟ್ ಅಧಿವೇಶನವು ಜನವರಿ 29ರಿಂದ ಆರಂಭಗೊಂಡು ಎಪ್ರಿಲ್ 8 ರವರೆಗೂ ನಡೆಯಲಿದೆ. ಎರಡು ಭಾಗಗಳಲ್ಲಿ ಅಧಿವೇಶನ ನಡೆಯಲಿದ್ದು, ಮೊದಲ ಅಧಿವೇಶನ ಜನವರಿ 29ರಿಂದ ಫೆಬ್ರವರಿ 15 ರವರೆಗೆ ಹಾಗೂ ಮಾರ್ಚ್ 8 ರಿಂದ ಎಪ್ರಿಲ್ 8 ರವರೆಗೆ ಎರಡನೇ ಅಧಿವೇಶನ ನಡೆಯಲಿದೆ.
ಲಾಕ್ ಡೌನ್ನಿಂದಾಗಿ ರಾಷ್ಟ್ರೀಯ ಆರ್ಥಿಕತೆಯ ಮೇಲೆ ಸಾಕಷ್ಟು ಪೆಟ್ಟು ಬಿದ್ದಿದೆ. ಅಲ್ಲದೆ ಪ್ರಕೃತಿ ವಿಕೋಪ, ಅತೀವೃಷ್ಟಿಯಿಂದ ಜನರು ಹಾಗೂ ಮೇಲಾಗಿ ಬೆಳೆ ನಾಶವಾಗಿ ತತ್ತರಿಸಿ ಹೋಗಿದ್ದಾರೆ. ಅದೆಷ್ಟೋ ಮಂದಿ ತಮ್ಮ ಕೆಲಸ ಕಳೆದುಕೊಂಡು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಚೇತರಿಕೆ ಕಾಣುತ್ತಿದ್ದ ಕಂಪನಿಗಳು , ಕಾರ್ಖಾನೆಗಳು ನೆಲಕಚ್ಚಿವೆ. ಹಾಗಾಗಿ ಬಜೆಟ್ನಲ್ಲಿ ಎಲ್ಲಾ ಕ್ಷೇತ್ರಗಳಿಗೂ ಸಮಾನ ಪ್ರಾಮುಖ್ಯತೆ ಕೊಡಬೇಕಾಗಿದೆ.
ದಾಯ್ಜಿವಲ್ಡ್ ಮಾಧ್ಯಮವು ಕೇಂದ್ರ ಬಜೆಟ್ 2021ನ ನಿರೀಕ್ಷೆಯ ಬಗ್ಗೆ ಜನಾಭಿಪ್ರಾಯನ್ನು ಪಡೆದುಕೊಂಡಿದೆ. ಅದರ ಆಯ್ದ ಭಾಗ ಇಲ್ಲಿದೆ:
"2021ರ ಕೇಂದ್ರ ಬಜೆಟ್ ಜನಪರವಾಗಿರಬೇಕೆಂಬ ನಿರೀಕ್ಷೆ ಇದೆ. ಕೊರೊನಾದ ಈ ಸಂದರ್ಭದಲ್ಲಿ ಜನರ ಆರೋಗ್ಯಕ್ಕೋಸ್ಕರ ಭಾರತ ಖರ್ಚು ಮಾಡುತ್ತಿರುವಂತದ್ದು ಕೇವಲ 1.3%. ಒಇಸಿಡಿಗೆ ಹೋಲಿಕೆ ಮಾಡಿದರೆ, ಕೊನೆ ಪಕ್ಷ 4.3 % ನ್ನಾದರೂ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು. ಸಾಮಾನ್ಯ ಜನರು ಗಳಿಸಿದ ಆದಾಯ ತೆರಿಗೆ ಪಾವತಿಗೆ ಕಳೆದು ಹೋಗುತ್ತಿದೆ. ಹಾಗಾಗಿ 80ಸಿ ಕೆಳಗಡೆ ತೆರಿಗೆ ವಿನಯಿತಿ ಬೇಕಾಗಿದೆ. ಸ್ವಾವಲಂಭಿ ರಾಷ್ಟ್ರವಾಗಲು ಹೂಡಿಕೆದಾರರು ಇಲ್ಲ. ಆ ನಿಟ್ಟಿನಲ್ಲಿ ಉತ್ತೇಜನಕಾರಿ ಪ್ಯಾಕೇಜ್ ಸಿಗಬೇಕು" - ಡಾ. ನಂದ ಕಿಶೋರ್, ವಿಭಾಗ ಮುಖ್ಯಸ್ಥರು ಮತ್ತು ಸಹಾಯಕ ಪ್ರೊಫೆಸರ್, ಜಿಯೋ ಪಾಲಿಟಿಕ್ಸ್ ವಿಭಾಗ
"ಈಗ ತಾನೆ ಭಾರತ ಕೊರೊನಾ ಹೊಡೆತದಿಂದ ಚೇತರಿಸುತ್ತಿದೆ. ಅನೇಕ ಸೇವಾ ಕ್ಷೇತ್ರಗಳು ತೊಂದರೆ ಅನುಭವಿಸಿದೆ. ಅವಕ್ಕೆಲ್ಲ ಪರಿಹಾರ ಸಿಗಬೇಕು. ಬೆಸ್ಟ್ ಬಿಫೋರ್ ವಸ್ತುಗಳು ಲಾಕ್ಡೌನ್ ಸಮಯದಲ್ಲಿ ಮಾರಾಟವಾಗಿಲ್ಲ. ಇದರಿಂದ ನಮಗೆ ನಷ್ಟವಾಗಿದೆ. ಕಳೆದ ವರ್ಷ 8-10 ತಿಂಗಳು ಉತ್ಪಾದನೆ ಮತ್ತು ಮಾರಾಟ ಎರಡು ನಿಂತಿತ್ತು. ವೇಸ್ಟೇಜ್ ಕ್ಲೈಮ್ಗೆ ಅವಕಾಶ ಕೊಡಬೇಕು. ಇದರಿಂದ ಬ್ಯಾಡ್ ಡೆಟ್ಸ್ನ ಹೊರೆ ಸ್ವಲ್ಪ ಕಡಿಮೆಯಾಗಲಿದೆ" - ಕೃಷ್ಣರಾವ್ ಕೊಡಂಚ, ಅಧ್ಯಕ್ಷರು, ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಉಡುಪಿ
"ಕಳೆದ ಬಾರಿ ಘೋಷಣೆ ಮಾಡಲಾದ ರೈತ ಸಾಲ ಮನ್ನವೇ ಬಾಕಿ ಇದೆ. ಮೊದಲು ಆಶ್ವಾಸನೆ ಪೂರ್ಣ ಮಾಡಿ. ಕೃಷಿಕರಿಗೆ ಇಂಧನ ಬೆಲೆ ಇಳಿಸಿ. ಬೆಂಬಲ ಬೆಲೆಯನ್ನು ಚಾಲ್ತಿಯಲ್ಲಿಡಿ. ಯಾವುದೇ ಕೃಷಿ ಸಂಬಂಧಿ ಯೋಜನೆ ಅಥವಾ ನಿರ್ಧಾರವನ್ನು ತೆಗೆದುಕೊಳ್ಳುವಾಗ ರೈತ ಸಂಘಟನೆಗಳ ಅಭಿಪ್ರಾಯ ಪಡೆದುಕೊಳ್ಳಿ" - ರವೀಂದ್ರ ಗುಜ್ಜರಬೆಟ್ಟು, ರೈತ ಸಂಘ
"ರೈತರು ಮೀನುಗಾರು ಈ ದೇಶದ ಬೆನ್ನೆಲುಬು. ಇವರಿಂದ ಪ್ರೋತ್ಸಹ ಸಿಗಬೇಕು, ಸಿಗುತ್ತಿದೆ. ಇದರ ಜೊತೆಗೆ ವ್ಯಾಪಾರಸ್ಥರ ಆಸಕ್ತಿಯನ್ನು ನಿರ್ಲಕ್ಷ್ಯ ಮಾಡುತ್ತಿದೆ. ಕೇಂದ್ರ ಸರಕಾರ ಇದರ ಕಡೆಗೂ ಗಮನ ಕೊಡಬೇಕು" - ಐರೋಡಿ ಸಹನಶೀಲ ಪೈ, ಅಧ್ಯಕ್ಷರು, ವರ್ತಕರ ಸಂಘ ಉಡುಪಿ
"ಲಾಕ್ ಡೌನ್ನಿಂದಾಗಿ ಹಲವಾರು ಕಂಪನಿ, ಕೈಗಾರಿಕೆಗಳನ್ನು ನೌಕರರನ್ನು ಕಡಿತಗೊಳಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಯುವ ಉದ್ಯೋಗಕಾಂಕ್ಷಿಗಳು ನಿರೀಕ್ಷೆ ಇಟ್ಟು ಕೊಂಡಿದ್ದಾರೆ. ಸ್ವ ಉದ್ಯೋಗಕ್ಕೂ ಪ್ರೋತ್ಸಾಹ ಕೊಡಬೇಕಾಗಿದೆ" - ಸಂಕೇತ್, ಪಬ್ಲಿಕ್
"ಪ್ರಕೃತಿ ವಿಕೋಪದಿಂದ ಹಾನಿಯಾದ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಇನ್ನೂ ಕೆಲವು ಕಡೆ ಎಪಿಎಮ್ಸಿ ತೆರೆದಿಲ್ಲ. ಯುವ ರೈತರಿಗೆ ಹೊಸ ಪ್ಯಾಕೇಜನ್ನು ಘೋಷಿಸಬೇಕಾಗಿದೆ" - ಜಯರಾಮ್ ಶೆಟ್ಟಿ, ಪ್ರಗತಿಪರ ರೈತ
"ಡಿಸೇಲ್, ಪೆಟ್ರೋಲ್ ದರ ದಿನ ದಿನ ಹೆಚ್ಚಾಗುತ್ತಿದೆ. ಸಾರಿಗೆ ವಾಹನ ನಡೆಸುವುದು ಕಷ್ಟಕರವಾಗಿದೆ. ಇನ್ನೊಂದು ಕಡೆ ತೆರಿಗೆ ಹೆಚ್ಚಾಗುತ್ತಿದೆ. ಟೋಲ್ ದರ ಹೆಚ್ಚಳವಾಗುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ. ನಿರೀಕ್ಷೆ ಸಾಕಷ್ಟಿದೆ" - ಮೊಹಿದ್ದಿನ್, ಬಸ್ ಚಾಲಕರು
"ಅಧಿವೇಶನದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಗಣನೆಗೆ ತೆಗೆದು ಕೊಂಡು ನಿರ್ಣಯ ಕೈಗೊಳ್ಳಬೇಕು. ಹೆಣ್ಣು ಮಕ್ಕಳ , ನಿರ್ಗತಿಕರ, ಮಾನಸಿಕ ಅಸ್ವಸ್ಥರಿಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ. ಅದೆಷ್ಟೋ ನಿರಾಶ್ರಿತರು ಬೀದಿ ಪಾಲಾಗಿದ್ದಾರೆ. ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಿರುವುದನ್ನು ತಡೆಯಲು ವಿಶೇಷ ಗಮನ ಯೋಜನೆ ರೂಪಿಸಬೇಕು" - ವಿಶು ಶೆಟ್ಟಿ ಅಂಬಲಪಾಡಿ, ಸಾಮಾಜಿಕ ಕಾರ್ಯಕರ್ತರು
ಅವಿಭಜಿತ ದ.ಕ ತೆಗೆದುಕೊಂಡರೆ ಸರಕಾರಿ ವೈದ್ಯಕೀಯ ಕಾಲೇಜಿನ ಕೊರತೆ ಎದ್ದು ಕಾಣುತ್ತದೆ. ಖಾಸಗಿ ಕಾಲೇಜುಗಳಿದ್ದರು, ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದ ಜಿಲ್ಲೆಗೆ ಸರಕಾರಿ ಕಾಲೇಜು ಬೇಕು ಎಂಬುದು ಬಹು ವರ್ಷದ ಬೇಡಿಕೆ. ಇನ್ನು ಕೇವಲ ಉಡುಪಿ ಜಿಲ್ಲೆಯನ್ನು ತೆಗೆದುಕೊಂಡರೆ ಬೈಂದೂರಿನಲ್ಲಿ ವಿಮಾನ ನಿಲ್ದಾಣ, ಈಗಾಗಲೇ ಪ್ರಸ್ತಾಪದಲ್ಲಿರುವ ಪಡುಕೆರೆಯಲ್ಲಿ ಮರೀನಾ ಬೀಚ್ ನಿರ್ಮಾಣ, ಕಬ್ಬು ಬೆಳೆಗಾರರ ಆಶಾಕಿರಣವಾಗಿರುವ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನಶ್ಚೇತನಗೊಳಿಸುವುದು, ಕರಾವಳಿಗೆ ಪ್ರತ್ಯೇಕ ಮೀನುಗಾರಿಕಾ ನೀತಿ ರಚಿಸುವುದು.
ಮುಂಬರುವ ರಾಜ್ಯ ಸರ್ಕಾರದ ಬಜೆಟ್ ಕೇಂದ್ರ ಬಜೆಟ್ ನ ಮೇಲೆ ನಿರ್ಧಾರವಾಗುತ್ತದೆ. ಅದೇನೆ ಆದರೂ, ಕೊರೊನಾ, ಲಾಕ್ಡೌನ್ನಿಂದ ಆರ್ಥಿಕ ಚೇತರಿಕೆ ಕಾಣುತ್ತಿರುವ ಭಾರತಕ್ಕೆ ಎಲ್ಲರ ನಿರೀಕ್ಷೆಯನ್ನು ಮುಟ್ಟುವ ಜನಪರ ಬಜೆಟ್ ಮಂಡನೆಯಾಗುವ ನಿರೀಕ್ಷೆಯಲ್ಲಿದ್ದಾರೆ.