ಮೂಡುಬಿದಿರೆ,ಜ.29 (DaijiworldNews/HR): ರಸ್ತೆ ದಾಟಿ ಮತ್ತೊಂದು ಕಡೆ ಓಡುತ್ತಿದ್ದ ಜಿಂಕೆಯೊಂದು ಮನೆ ಎದುರಿನ ಕಬ್ಬಿಣದ ಗೇಟಿಗೆ ಡಿಕ್ಕಿ ಹೊಡೆದು ಸಾವನಪ್ಪಿದ ಘಟನೆ ಮರಿಯಾಡಿಯಲ್ಲಿ ಸಂಭವಿಸಿದೆ.
ಮೃತಪಟ್ಟ ಹೆಣ್ಣು ಜಿಂಕೆಗೆ ಸುಮಾರು 3 ವರ್ಷ ಪ್ರಾಯವಾಗಿರಬಹುದೆಂದು ಅಂದಾಜಿಸಲಾಗಿದೆ.
ಮಾರ್ಪಾಡಿ ಕಡೆಯಿಂದ ವೇಗದಲ್ಲಿ ರಸ್ತೆ ದಾಟಿ ಕಲ್ಲಬೆಟ್ಟು ಕಡೆ ಓಡುವಾಗ ಜಿಂಕೆ ಗೇಟಿಗೆ ಡಿಕ್ಕಿ ಹೊಡೆದು ಅದರ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಏಟು ತಗಲಿ ನೆಲಕ್ಕೆ ಬಿತ್ತೆನ್ನಲಾಗಿದೆ.
ಇನ್ನು ವಾಹನದಲ್ಲಿ ಸಂಚರಿಸುತ್ತಿದ್ದವರೊಬ್ಬರು ಇದನ್ನು ಗಮನಿಸಿ ಸ್ಥಳಕ್ಕಾಗಮಿಸಿ ಜಿಂಕೆಯ ಬಾಯಿಗೆ ನೀರು ಹಾಕಿ, ಮುಖಕ್ಕೆ ನೀರು ಚುಮುಕಿಸಿ ಬದುಕಿಸುವ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.
ಪಶುವೈದ್ಯಾಧಿಕಾರಿ ಡಾ.ರವಿ ಕುಮಾರ್ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ್, ವಲಯ ಅರಣ್ಯಾಧಿಕಾರಿ ಪ್ರಕಾಶ್ ಪೂಜಾರಿ ಸಮಕ್ಷಮದಲ್ಲಿ ಅರಣ್ಯ ಕಚೇರಿ ಆವರಣದಲ್ಲಿ ಜಿಂಕೆಗೆ ಅಗ್ನಿಸ್ಪರ್ಶ ಮಾಡಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಪಣಂಬೇರಿ, ಮೂಜಿಮಲೆ ರಾಷ್ಟ್ರೀಯ ಉದ್ಯಾನವನದಲ್ಲಿ ಜಿಂಕೆಗಳ ಓಡಾಟ ಇದೆ ಎನ್ನಲಾಗಿದ್ದು, ಇದಕ್ಕೆ ತಾಗಿಕೊಂಡು ಕೊಣಾಜೆ ಕಲ್ಲು ಕಾಡು ಪ್ರದೇಶವಿದ್ದು ಇಲ್ಲಿಗೆ ಬಂದ ಜಿಂಕೆ ದಾರಿ ತಪ್ಪಿ ಅಥವಾ ಯಾವುದಾದರು ಪ್ರಾಣಿ ಅಟ್ಟಿಸಿಕೊಂಡ ಬಂದಾಗ ಅದರಿಂದ ತಪ್ಪಿಸಿಕೊಂಡು ಮಾರ್ಪಾಡಿ ಕಡೆ ಬಂದಿರುವ ಸಾಧ್ಯತೆ ಇರಬಹುದೆಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.