ಮಂಗಳೂರು, ಜ.26 (DaijiworldNews/MB) : ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ & ಡೆಂಟಲ್ ಕಾಲೇಜಿನ ಎದುರಿನ ಹಸನ್ ಚೇಂಬರ್ಸ್ ಕಟ್ಟಡದಲ್ಲಿ ಜನವರಿ 25 ರ ಸೋಮವಾರ ತಡರಾತ್ರಿ ಸಂಭವಿಸಿದ ದುರಂತ ಘಟನೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಮೃತರನ್ನು ಕುತ್ತಾರ್ ಮಜಲು ತೋಟ ನಿವಾಸಿ ಸತೀಶ್ (38) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಕರ್ತವ್ಯಕ್ಕೆ ಹಾಜರಾದ ಅವರು ಲಿಫ್ಟ್ ಪರಿಶೀಲಿಸಲು ಆರನೇ ಮಹಡಿಗೆ ಹೋಗಿದ್ದರು. ಲಿಫ್ಟ್ ಪರಿಶೀಲನೆ ಮಾಡುವ ಸಂದರ್ಭ ಆಯಾತಪ್ಪಿ ಆರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ.
ಕೆಳಗೆ ಬಿದ್ದ ಸತೀಶ್ ಅವರ ತಲೆಗೆ ತೀವ್ರ ಗಾಯವಾಗಿದ್ದು ಸತೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ಮೃತರು ತನ್ನ ಸಹೋದ್ಯೋಗಿ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ಲಿಫ್ಟ್ ಪರೀಕ್ಷಿಸಲು ಹೋದರು ಎಂದು ಹೇಳಲಾಗಿದೆ.
ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.