ಆರ್.ಬಿ.ಜಗದೀಶ್
ಕಾರ್ಕಳ, ಜ.21 (DaijiworldNews/MB) : ಬಜಗೋಳಿ-ಹೊಸ್ಮಾರು ನಡುವೆ ಹಾದುಹೋಗಿರುವ ರಾಜ್ಯ ಹೆದ್ದಾರಿ ಪಾಜಿಗುಡ್ಡೆ ಅಪಾಯಕಾರಿ ರಸ್ತೆ ತಿರುವು ಅಭಿವೃದ್ಧಿ ಪಥದತ್ತ ಕಾಮಗಾರಿ ನಡೆಯಲಿದೆ.
ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಇರುವ ಈ ರಸ್ತೆಯ ಇಕ್ಕೆಲೆಗಳು ಅರಣ್ಯ ಇಲಾಖೆಯ ಅಧೀನದಲ್ಲಿ ಇರುವುದರಿಂದ ಬದಲಿ ರಸ್ತೆ ನಿರ್ಮಾಣ ಕಾರ್ಯವು ಗಗನ ಕುಸುಮವಾಗಿದೆ. ಪರ್ಯಾಯ ರಸ್ತೆ ನಿರ್ಮಾಣ ಕಾರ್ಯಕ್ಕೆ ಬ್ರೇಕ್ ಬೀಳುತ್ತಿದ್ದಂತೆ ಪ್ರಸ್ತುತ ಇರುವ ರಸ್ತೆಯನ್ನೇ ತಗ್ಗುಗೊಳಿಸುವ ಕಾಮಗಾರಿಗೆ ರೂಪುರೇಷೆ ಸಿದ್ಧವಾಗಿದೆ.
ಬಜಗೋಳಿಯಿಂದ ಪಾಜಿಗಡ್ಡೆಗೆ ಹೋಗುವಾಗ ರಸ್ತೆ ಏರುಮುಖ ಹಾಗೂ ತಿರುವು ಮುರುವಿನಿಂದ ಕೂಡಿದರೆ ಮುಂದೆ ಇಳಿಜಾರಿನಿಂದ ಕೂಡಿದೆ. ಇದೇ ಕಾರಣದಿಂದಾಗಿ ರಸ್ತೆಯನ್ನು ಸಮತಟ್ಟು ಗೊಳಿಸಿದರೆ ವಾಹನ ಸಂಚಾರಕ್ಕೂ ಸುಗಮವಾಗಲಿದೆ ಎಂಬ ಯೋಜನೆಯನ್ನು ಮುಂದಿಟ್ಟು ಸುಮಾರು ರೂ. 28 ಲಕ್ಷ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಇಲಾಖೆ ಮುಂದಾಗಿದೆ.
ಲೋಕೋಪಯೋಗಿ ಇಲಾಖೆ ಕಾರ್ಕಳ ವಿಭಾಗದ ಹಿರಿಯ ಅಭಿಯಂತರ ಸುಂದರ ಹಾಗೂ ಇತರರು ಕಾಮಗಾರಿ ನಡೆಯಲಿರುವ ಸ್ಥಳಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ತಿರುವು ಮುರುವು ಇರುವ ಪಾಜಿಗುಡ್ಡೆಯ ತಳಭಾಗದಲ್ಲಿ ಬಂಡೆ ಕಲ್ಲು ಇರುವುದು ಕಂಡುಬಂದಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲಿ ಅದನ್ನು ತೆರವು ಗೊಳಿಸಲು ಎಲ್ಲ ರೀತಿಯ ಕ್ರಮ ಕೈಗೊಂಡು ವಾಹನ ಸಂಚಾರಕ್ಕೆ ಅನುವು ಆಗುವ ರೀತಿಯಲ್ಲಿ ಪೊಲೀಸ್ ಇಲಾಖೆಯ ನೆರವು ಪಡೆಯಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಕಾರ್ಕಳ ವಿಭಾಗದ ಹಿರಿಯ ಅಭಿಯಂತರಾದ ಸುಂದರ ಹೇಳಿದರು.